ಚಲನಚಿತ್ರ ನಟನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ವಂಚಿಸುತ್ತಿದ್ದವನ ಬಂಧನ
ಬೆಂಗಳೂರು, ಆಗಸ್ಟ್ 18: ಕನ್ನಡ ಚಲನಚಿತ್ರ ನಟರ ಹೆಸರು ಮತ್ತು ಭಾವಚಿತ್ರವನ್ನು ಬಳಸಿ ನಕಲಿಯಾಗಿ ಸೃಷ್ಟಿಸಿದ ಫೇಸ್ಬುಕ್ ಖಾತೆಯನ್ನು ಸೃಷ್ಟಿಸಿ, ಸಿನಿಮಾಗಳಲ್ಲಿ ಚಾನ್ಸ್ ಕೊಡಿಸುವ ಆಸೆ ತೋರಿಸಿ,ಯುವತಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಸುಂಕದಕಟ್ಟೆಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕನ್ನಡ ಚಲನಚಿತ್ರ ನಟರ ಹೆಸರು ಮತ್ತು ಭಾವಚಿತ್ರವನ್ನು ಬಳಸಿ ನಕಲಿಯಾಗಿ ಸೃಷ್ಟಿಸಿದ ಫೇಸ್ಬುಕ್ ಖಾತೆಯನ್ನು ಬಳಸಿಕೊಂಡು ಅಸಲಿ ವ್ಯಕ್ತಿಯಂತೆ ನಟಿಸಿ, ಹೆಣ್ಣು ಮಕ್ಕಳನ್ನು ಫೇಸ್ಬುಕ್ ಮೂಲಕ ಪರಿಚಯಿಸಿಕೊಂಡು ಸಲುಗೆ ಬೆಳಸಿ ಚಲನಚಿತ್ರಗಳಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಬಂಧಿಸಿ ಕೃತ್ಯಕ್ಕೆ ಬಳಕೆ ಮಾಡಿದ ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಬಂಧಿತನನ್ನು ವೆಂಕಟೇಶ್ ಬಾವಸಾರ್ ಆರ್ (22) ಎಂದು ಗುರುತಿಸಲಾಗಿದೆ. ಸುಂಕದಕಟ್ಟೆಯ ಹೊಯ್ಸಳ ನಗರ ನಿವಾಸಿಯಾಗಿದ್ದಾನೆ.
ಚಲನಚಿತ್ರ ನಟನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹೆಣ್ಣು ಮಕ್ಕಳನ್ನು ಪರಿಚಯಿಸಿಕೊಂಡ ನಂತರ ಸಲಿಗೆಯಿಂದ ಚಾಟಿಂಗ್ ಮಾಡಲು ಪ್ರಾರಂಭಿಸುತ್ತಿದ್ದ, ಆರೋಪಿ ಚಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಬಲಿಪಶುವಾದ ಹೆಣ್ಣು ಮಕ್ಕಳು ಮಾತನಾಡಲು ಒತ್ತಾಯಿಸಿದಾಗ ಡಿಸೆಂಬರ್ ವರೆಗೂ ತನಗೆ ಟೈಮ್ ಸರಿಯಿಲ್ಲ ಆದ್ದರಿಂದ ಮಾತನಾಡುವುದಿಲ್ಲ ಎಂಬುದಾಗಿ ಸಂದೇಶ ರವಾನಿಸುತ್ತಿದ್ದ.
ಪರಿಚಿತರಾದ ಹೆಣ್ಣುಮಕ್ಕಳಿಗೆ ಚಲನಚಿತ್ರದಲ್ಲಿ ಅವಕಾಶ ಕಲ್ಪಿಸಲು ತನ್ನ ಅಸಿಸ್ಟೆಂಟ್ ಆಗಿರುವ ವೆಂಕಿರಾವ್ ಎಂಬುವವರೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕೆಂದು ಸೂಚಿಸಿ ವಾಟ್ಸಾಪ್ ನಂಬರ್ ನೀಡುತ್ತಿದ್ದ. ವೆಂಕಿರಾವ್ ಹೆಸರಿನಲ್ಲಿ ವಾಟ್ಸಾಪ್ ಮೂಲಕ ಚಾಟಿಂಗ್ ಮುಂದುವರೆಸುತ್ತಾ ಪರಿಚಿತ ಹೆಂಗಸು ಮತ್ತು ಆಕೆಯ ಮಗಳನ್ನು ಭೇಟಿ ಮಾಡಿದ್ದ. ಪರಿಚಯವಾದ ಹೆಂಗಸಿನ ಮಗಳಿಗೆ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ 25,000/- ರೂಗಳನ್ನು ಪಡೆದು ವಂಚಿಸಿದ್ದ.
ಈತನ ಸಂಪರ್ಕ ಮಾಡಲು ಯತ್ನಿಸಿ, ವಿಡಿಯೋ ಕಾಲ್ ಮಾಡಲು ನೊಂದ ಮಹಿಳೆ ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಕಾಲ್ ರಿಸೀವ್ ಆಗಿ ಆರೋಪಿಯನ್ನು ನೋಡಿದ ಮಹಿಳೆ ಪ್ರಶ್ನಿಸಿದಾಗ ಕಾಲ್ ಮರ್ಜ್ ಆಗಿದೆ ಎಂಬ ನೆಪ ಹೇಳಿ ನುಣುಚಿಕೊಂಡಿದ್ದ. ಟ್ರೂ ಕಾಲರ್ ನಲ್ಲೂ ಕೂಡ ನಟನ ಹೆಸರು ಕಾಣುವಂತೆ ಎಡಿಟ್ ಮಾಡಿಕೊಂಡಿದ್ದ.
ಚಲನಚಿತ್ರ ನಟರು ನೊಂದ ಮಹಿಳೆಯೊಂದಿಗೆ ಪ್ರೀತಿ ಅಂಕುರವಾಗಿದೆ, ನಿಮ್ಮನ್ನು ಮದುವೆಯಾಗಲು ಬಯಸುತ್ತಾರೆ ಎಂಬಿತ್ಯಾದಿಯಾಗಿ ವರ್ಣಿಸಿ ನಂಬಿಸಿದ್ದ. ನಕಲಿ ಖಾತೆ ತೆರೆದು ಅಮಾಯಕ ಹೆಣ್ಣುಮಕ್ಕಳನ್ನು ನಂಬಿಸಿ ವಂಚಿಸುತ್ತಿರುವ ಬಗ್ಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಂಡು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಸಾಮಾಜಿಕ ಜಾಲತಾಣ ಬಳಕೆದಾರರು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಯಾವುದೇ ಸಂಧರ್ಭದಲ್ಲಿ ಗಣ್ಯ/ಪ್ರಖ್ಯಾತ ವ್ಯಕ್ತಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ, ವಾಟ್ಸಾಪ್, ಟ್ರೂ ಕಾಲರ್ ಮೂಲಕ ಚಾಟಿಂಗ್ ಮಾಡಲು ಪ್ರಯತ್ನಿಸುವ ವಂಚಕರ ಬಗ್ಗೆ ಜಾಗೃತಿವಹಿಸಿ ಯಾವುದೇ ಖಾಸಗಿ ಮಾಹಿತಿ, ಭಾವಚಿತ್ರ, ದೃಶ್ಯಾವಳಿಗಳನ್ನು, ಹಣವನ್ನು ನೀಡಿ ವಂಚನೆಗೊಳಗಾದಂತೆ ಎಚ್ಚರವಹಿಸಲು ಕೋರಿದೆ.
ಈ ಪತ್ತೆ ಕಾರ್ಯದಲ್ಲಿ ಬೆಂಗಳೂರು ನಗರ ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿ.ಐ. ಯಶವಂತಕುಮಾರ್ ಕೆ.ಎನ್, ಪಿ.ಎಸ್.ಐ. ಶ್ರೀ ಸಂತೋಷ್ ರಾಮ್, ಹೆಚ್.ಸಿ. ಸತೀಶ್ ,ಪ್ರಕಾಶ್, ರಮೇಶ್ ಸಹೋದ್ಯೋಗಿಗಳಾದ ಸದಾಶಿವ, ಸಿದ್ದಣ್ಣ, ನೂರೂಲ್ಲಾರವರುಗಳು ಪಾಲ್ಗೊಂಡಿರುತ್ತಾರೆ.