ಕಲಬುರಗಿ ವೈದ್ಯನಿಗೆ ಹನಿಟ್ರ್ಯಾಪ್ ಮಾಡಿದ್ದ ಬೆಂಗಳೂರಿನ ಗ್ಯಾಂಗ್ ಬಂಧನ
ಬೆಂಗಳೂರು, ಮೇ 27: ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ಮಾಡಿದ್ದಾರೆ. ವೈದ್ಯನೊಬ್ಬನಿಗೆ ಹನಿಟ್ರ್ಯಾಪ್ ಮಾಡಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯಕೀಯ ಸೀಟ ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದಿದ್ದ ವ್ಯಕ್ತಿ ವೈದ್ಯರ ಬಳಿ ಹಣವಿದೆ ಎಂದು ಹನಿಟ್ರ್ಯಾಪ್ ಮಾಡುವ ಮೂಲಕ ಲಕ್ಷ ಲಕ್ಷ ಹಣವನ್ನು ಪೀಕಿದ್ದ. ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಮಾಾಡಿದ್ದವರನ್ನು ಕಂಬಿಹಿಂದೆ ತಳ್ಳಿದ್ದಾರೆ.
ಕಲಬುರಗಿಯ ಆಳಂದ ಮೂಲದ ವೈದ್ಯ ಡಾ. ಶಂಕರ್ ತಮ್ಮ ಮಗನಿಗೆ ವೈದ್ಯಕೀಯ ಸೀಟು ಬೇಕೆಂದು ನಾಗರಾಜ್ ಎಂಬಾತನ್ನು ಕೇಳಿದ್ದರು. 2021ರಲ್ಲಿ ನಾಗರಾಜ್ ತಾನು ವೈದ್ಯಕೀಯ ಸೀಟು ಕೊಡಿಸುವುದಾಗಿ ಒಪ್ಪಿ 66 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಇದಕ್ಕೆ ಒಪ್ಪಿದ್ದ ಡಾ. ಶಂಕರ್ ಹಂತ ಹಂತವಾಗಿ 66 ಲಕ್ಷ ಹಣವನ್ನು ನಾಗರಾಜ್ಗೆ ತಲುಪಿಸಿದ್ದರು. ಆದರೆ ನಾಗರಾಜ್ ಡಾ.ಶಂಕರ್ ಪುತ್ರನಿಗೆ ವೈದ್ಯಕೀಯ ಸೀಟನ್ನು ಕೊಡಿಸಿರಲಿಲ್ಲ. ಇದರಿಂದಾಗಿ ನಾಗರಾಜ್ಗೆ ಕೊಟ್ಟಿರುವ ಹಣವನ್ನು ವಾಪಸ್ ನೀಡುವಂತೆ ಹೇಳಿದ್ದರು. ನಾಗರಾಜ್ ಡಾ. ಶಂಕರ್ಗೆ ಹಣಕೊಡುವುದಾಗಿ ಹೇಳಿಕೊಂಡ ಆಟವಾಡಿಸುತ್ತಲೇ ಬಂದಿದ್ದ.
ಹಣ ಕೊಡುವುದಾಗಿ ಹೇಳಿ ಹನಿಟ್ರ್ಯಾಪ್..!
ಡಾ. ಶಂಕರ್ಗೆ ಕರೆ ಮಾಡಿದ ನಾಗರಾಜ್ ಹಣ ಕೊಡುತ್ತೇನೆ ಬೆಂಗಳೂರಿಗೆ ಬರಬೇಕು ಎಂದು ಕರೆದಿದ್ದಾನೆ. ಮೆಜೆಸ್ಟಿಕ್ನ ಯುಟಿ ಲಾಡ್ಜ್ನಲ್ಲಿ ಡಾ. ಶಂಕರ್ಗಾಗಿ ರೂಮ್ ಮಾಡಿದ್ದಾನೆ. ಶಂಕರ್ ರೂಮ್ಗೆ ಬರುವ ವೇಳೆಗೆ ಅದೇ ಲಾಡ್ಜ್ನಲ್ಲಿ ಮತ್ತೊಂದು ರೂಮ್ ಪಡೆದಿರುತ್ತಾನೆ. ಕೆಲಸದ ನಿಮಿತ್ತ ತಾನೂ ಮುಂಜಾನೆ ಬರುವುದಾಗಿ ನಾಗರಾಜ್ ತಿಳಿಸಿರುತ್ತಾನೆ. ಡಾ. ಶಂಕರ್ ಲಾಡ್ಜ್ನ ರೂಮ್ನಲ್ಲಿ ಮಲಗಿದ್ದ ವೇಳೆ ಮುಂಜಾನೆ ಮೂರು ಗಂಟೆಗೆ ಲಾಡ್ಜ್ ರೂಮ್ ಬಾಗಿಲು ಶಬ್ಧವಾಗುತ್ತದೆ. ಶಂಕರ್ ಬಾಗಿಲು ತೆರೆಯುತ್ತಿದ್ದಂತೆ ಇಬ್ಬರು ಯುವತಿಯರು ರೂಮ್ ಒಳಗೆ ನುಗ್ಗಿ ಹಾಸಿಗೆಯ ಮೇಲೆ ಪವಣಿಸುತ್ತಾರೆ. ಇದೇ ವೇಳೆ ಪೊಲೀಸ್ ರೀತಿಯಲ್ಲಿ ಮತ್ತಿಬ್ಬರು ಎಂಟ್ರಿಯಾಗಿ ವೇಶ್ಯಾವಾಟಿಕೆ ಕೇಸ್ನಲ್ಲಿ ನಿಮ್ಮನ್ನು ಬಂಧಿಸುತ್ತಿದ್ದೇವೆ ಎಂದು ಹೆದರಿಸುತ್ತಾರೆ. ವೈದ್ಯರ ಬಳಿಯಿದ್ದ ಚಿನ್ನಾಭರಣ ಮತ್ತು 35 ಸಾವಿರ ನಗದನ್ನು ಕಸಿದುಕೊಳ್ಳುತ್ತಾರೆ. ಅಪರಿಚಿತ ವ್ಯಕ್ತಿ ವೈದ್ಯರಿಗೆ ಸಹಾಯ ಮಾಡುವ ನೆಪದಲ್ಲಿ ಮಾತನಾಡಿ ಪೊಲೀಸರು ಕಲಬುರಗಿಗೆ ಬರ್ತಾರೆ 50 ಲಕ್ಷ ಕೊಟ್ಟು ಕಳುಹಿಸಿ ಎಂದಿದ್ದಾನೆ. ತನ್ನ ಬಳಿ ಅಷ್ಟು ಹಣವಿಲ್ಲ ಎಂದಾಗ ಹೊಂದಿಸಿ ಕೊಡಿ ಎಂದಿದ್ದಾನೆ. ವೈದ್ಯರು ಕಲಬುರಗಿ ಹೋಗಿ ಹಣವನ್ನು ಹೊಂದಿಸಿ ಕೊಟ್ಟಿದ್ದಾರೆ.
ಯುವತಿಯರ ಬೇಲ್ ನೆಪದಲ್ಲಿ ಮತ್ತೆ 20 ಲಕ್ಷ ಹಣಕ್ಕಾಗಿ ಡಿಮ್ಯಾಂಡ್..
ಲಾಡ್ಜ್ನಲ್ಲಿ ಪೊಲೀಸರ ಸೋಗಿನಲ್ಲಿ ಬಂದಿದ್ದವರು ಡಾ. ಶಂಕರ್ನನ್ನು ಯುವತಿಯರ ಪಕ್ಕದಲ್ಲಿ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿರುತ್ತಾರೆ. ಇದೇ ಫೋಟೋವನ್ನು ಹಿಡಿದು ಯುವತಿಯರು ಅರೆಸ್ಟ್ ಆಗಿದ್ದಾರೆ ಅವರಿಗೆ ಬೇಲ್ ಕೊಡಿಸಬೇಕು 20 ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಡ್ತಾರೆ. ದುರುಳರ ಬೇಡಿಕೆಗಳಿಂದ ಬೇಸತ್ತ ಡಾ. ಶಂಕರ್ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಉಪ್ಪಾರ ಪೇಟೆ ಪೊಲೀಸರು ಪ್ರಕರಣವನ್ನು ಸಿಸಿಬಿಗೆ ವಹಿಸಿದ ಬಳಿಕ ನಾಗರಾಜ್ ಮತ್ತು ಗ್ಯಾಂಗ್ನ ಹನಿಟ್ರ್ಯಾಪ್ ಮಿಸ್ಟರಿ ಹೊರಬಿದ್ದಿದೆ.
ಡಾ. ಶಂಕರ್ ಮನೆಗೆ ನುಗ್ಗಿ ಪೊಲೀಸರ ರೀತಿ ವರ್ತನೆ
ನಾಗರಾಜ್ ಸಿದ್ದಪಡಿಸಿದ್ದ ನಕಲಿ ಪೊಲೀಸರ ಟೀಂ ನಾಗರಾಜ್ ಮನೆಗೆ ಹೋಗಿದ್ದರು. ಡಾ. ಶಂಕರ್ಗೆ ಪೊಲೀಸರು ಕರೆಯುತ್ತಿದ್ದಾರೆ ಎಂದಾಗ ಕೆಲ ಪ್ರಶ್ನೆಗಳನ್ನು ಕೇಳಿದರು. ಇದರಿಂದ ನಕಲಿ ಪೊಲೀಸರು ಸ್ಥಳದಿಂದ ಕಾಲ್ಕಿತ್ತಿದ್ದರು. ನಕಲಿ ಪೊಲೀಸರ ಜೊತೆ ನಾಗರಾಜ್ ಕುಳಿತಿರುವುದನ್ನು ಕೆಲವು ಸ್ಥಳೀಯರು ನೋಡಿ ಡಾ. ಶಂಕರ್ಗೆ ಮಾಹಿತಿ ನೀಡಿದ್ದರು. ಇದರಿಂದಾಗಿ ಡಾ. ಶಂಕರ್ ಪೊಲೀಸರಿಗೆ ದೂರು ಕೊಡುವ ನಿರ್ಧಾರ ಮಾಡಿದ್ದರು.
ಹನಿಟ್ರ್ಯಾಪ್ ಮಾಡಿದ ಗ್ಯಾಂಗ್ ಲೀಡರ್ ನಾಗರಾಜ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಗರಾಜ್ ಮತ್ತು ಮಹಿಳೆಯನ್ನು ಸೇರಿದಂತೆ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
Recommended Video