ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ ವೈದ್ಯನಿಗೆ 1.16 ಕೋಟಿ ರೂ. ವಂಚನೆ
ಬೆಂಗಳೂರು, ಜು. 01: ಎಂಬಿಬಿಎಸ್ ಸೀಟು ಕೊಡಿಸುತ್ತೇನೆ ಎಂದು ಬ್ರೋಕರ್ಗಳ ಬಳಿ ಹೋಗುವ ಮುನ್ನ ಎಚ್ಚರಿಕೆ. ಹಣ ಕಳೆದುಕೊಳ್ಳುವ ಜತೆಗೆ ಜೀವನ ಪರ್ಯಂತ ನರಕ ಅನುಭವಿಸಬೇಕಾದೀತು. ಮೆಡಿಕಲ್ ಸೀಟು ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸುವ ಜತೆಗೆ ಹನಿಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ಮಾಡುವ ಗ್ಯಾಂಗ್ ಸಕ್ರಿಯವಾಗಿದೆ.
ಬೆಂಗಳೂರಿನ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 1.16 ಕೋಟಿ ರೂ. ಪಡೆದು ಮೋಸ ಮಾಡಿದ್ದ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಚ್ಚರಿ ಏನೆಂದರೆ ಮೆಡಿಕಲ್ ಸೀಟು ಕೊಡಿಸಲಾಗದೇ ಹಣ ವಾಪಸು ಕೇಳಿದ್ದಕ್ಕೆ ವ್ಯಕ್ತಿಯನ್ನು ಲಾಡ್ಜ್ನಲ್ಲಿ ಕೂಡಿ ಹಾಕಿ ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿ ಇದೀಗ ಸಿಕ್ಕಿಬಿದ್ದಿದೆ.
ಮಗನಿಗೆ ಮೆಡಿಕಲ್ ಸೀಟು ಕೊಡಿಸಲು ಹೋದ ವೈದ್ಯ ತಂದೆಗೆ ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡಿದ್ದ ಸುಲಿಗೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಏನಿದು ಮೆಡಿಕಲ್ ಸೀಟ್ ದಂಧೆ? ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡಿದ್ದು ಹೇಗೆ? ವಿವರ ಮುಂದಿದೆ...
ಏನಿದು ಮೆಡಿಕಲ್ ಸೀಟ್ ದಂಧೆ
ಕಲಬುರಗಿಯ ಅಳಂದದಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಶಂಕರ್ ಬಾಬುರಾವ್ ತಮ್ಮ ಮಗನಿಗೆ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವ ಆಸೆ ಹೊಂದಿದ್ದರು. ಅದರಂತೆ ಪರಿಚಿತ ನಾಗರಾಜ್ ಅವರಿಗೆ ಮೆಡಿಕಲ್ ಸೀಟು ಕೊಡಿಸುವ ಬಗ್ಗೆ ಪ್ರಸ್ತಾಪವಿಟ್ಟಿದ್ದ. ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಮಗನಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ 66 ಲಕ್ಷ ರೂ. ಹಣವನ್ನು ನಾಗರಾಜ್ ಪಡೆದಿದ್ದ. ಹಂತ ಹಂತವಾಗಿ 1.16 ಕೋಟಿ ರೂ. ಹಣ ಪಡೆದಿದ್ದ.
ಒಂದು ವರ್ಷವಾದರೂ ಶಂಕರ್ ಬಾಬುರಾವ್ ಅವರ ಪುತ್ರನಿಗೆ ಮೆಡಿಕಲ್ ಸೀಟು ಕೊಡಿಸಲಾಗಲಿಲ್ಲ. ತನ್ನ ಹಣ ವಾಪಸು ನೀಡುವಂತೆ ಶಂಕರ್ ಸ್ನೇಹಿತ ನಾಗರಾಜ್ಗೆ ಬೇಡಿಕೆ ಇಟ್ಟಿದ್ದ. ಕೆಲ ದಿನಗಳ ಹಿಂದೆ ಹಣ ವಾಪಸು ಕೊಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡಿದ್ದ.
50 ಲಕ್ಷ ರೂ. ಸುಲಿಗೆ
ವೈದ್ಯ ಶಂಕರ್ ಬಾಬುರಾವ್ ಅವರನ್ನು ಬೆಂಗಳೂರಿಗೆ ಕರೆಸಿದ್ದ ನಾಗರಾಜ್, ಗಾಂಧಿನಗರದ ಲಾಡ್ಜ್ ನಲ್ಲಿ ಇರಿಸಿ ಕೆಲವೇ ಕ್ಷಣದಲ್ಲಿ ಹಣ ತಂದುಕೊಡುತ್ತೇನೆ ಎಂದು ಹೇಳಿ ನಂಬಿಸಿದ್ದ. ಆ ಬಳಿಕ ಮಧ್ಯ ರಾತ್ರಿ ಮಹಾರಾಷ್ಟ್ರದಿಂದ ಕರೆಸಿದ್ದ ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಶಂಕರ್ ತಂಗಿದ್ದ ರೂಮಿಗೆ ಬಿಟ್ಟಿದ್ದ. ಇದೇ ವೇಳೆ ತನ್ನ ಇತರೆ ಸ್ನೇಹಿತರನ್ನು ಪೊಲೀಸರ ಸೋಗಿನಲ್ಲಿ ಲಾಡ್ಜ್ ಮೇಲೆ ದಾಳಿ ಮಾಡಿಸಿದ್ದ. ಇದಕ್ಕೂ ಮೊದಲು ಇಬ್ಬರು ಹುಡುಗಿಯರ ಜತೆ ಶಂಕರ್ ಬೆತ್ತಲೆಯಾಗಿ ತಂಗಿರುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದ.
ವೇಶ್ಯಾವಾಟಿಕೆ ಜಾಲ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು ರೈಡ್ ಮಾಡಲಾಗಿದೆ ಎಂದು ನಕಲಿ ವಾಕಿಟಾಕಿ ಇಟ್ಟುಕೊಂಡು ಆರೋಪಿ ನಾಗರಾಜನ ಸ್ನೇಹಿತರಾದ ಹಮೀದ್, ಮಲ್ಲಿಕಾರ್ಜುನ್, ಬಸವರಾಜ್ ಮತ್ತು ಮಧು ಹೆದರಿಸಿದ್ದಾರೆ.
ಮರ್ಯಾದೆಗೆ ಹೆದರಿದ ವೈದ್ಯ ಶಂಕರ್
ಮರ್ಯಾದೆಗೆ ಹೆದರಿದ ವೈದ್ಯ ಶಂಕರ್ ಬಾಬುರಾವ್ ಬಳಿಯಿದ್ದ ಒಂದು ಚಿನ್ನದ ಉಂಗುರ, 30 ಸಾವಿರ ರೂ. ನಗದು ನೀಡಿದ್ದಾರೆ. ಆ ಬಳಿಕ ನಿನ್ನ ವಿರುದ್ಧ ಕೇಸು ದಾಖಲಾಗದೇ ಬಿಡಬೇಕಾದರೆ 50 ಲಕ್ಷ ರೂ. ನೀಡಬೇಕು ಎಂದು ಹೆದರಿಸಿದ್ದಾರೆ. ತನ್ನ ಜಮೀನನ್ನು ಸಹಕಾರಿ ಬ್ಯಾಂಕ್ನಲ್ಲಿ ಅಡವಿಟ್ಟು ಶಂಕರ್ ಬಾಬುರಾವ್ 50 ಲಕ್ಷ ರೂ. ನೀಡಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದ ವಂಚಕ ನಾಗರಾಜ್ ಮತ್ತು ಟೀಂ, ನಿಮ್ಮ ಕೇಸಿನಲ್ಲಿ ಜೈಲಿಗೆ ಹೋಗಿರುವ ಇಬ್ಬರು ಹುಡುಗಿಯರಿಗೆ ಜಾಮೀನು ಕೊಡಿಸಲು 20 ಲಕ್ಷ ರೂ. ಬೇಕಾಗಿದೆ. ಈ ಕೂಡಲೆ ನೀವು ಕೊಡದಿದ್ದರೆ, ಅವರು ನೀವು ಸಿಕ್ಕಿಬಿದ್ದಿರುವ ವಿಚಾರವನ್ನು ಬಹಿರಂಗ ಮಾಡಲಿದ್ದಾರೆ ಎಂದು ನಾಗರಾಜ್ ಪುನಃ ಹೆದರಿಸಿದ್ದಾನೆ. ತಾನು ಮೋಸ ಹೋಗಿರುವ ವಿಚಾರ ತಿಳಿದ ವೈದ್ಯ ಶಂಕರ್ ಆ ಬಳಿಕ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಂಕರ್ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಐವರು ಅರೋಪಿಗಳನ್ನು ಬಂಧಿಸಿ 24 ಲಕ್ಷ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.
ಮಾನ ಮಾರ್ಯಾದೆ ಹರಾಜು ಹಾಕುವೆ
50 ಲಕ್ಷ ಪಡೆದು ಆರೋಪಿಗಳು ಕೆಲ ದಿನಗಳು ಸುಮ್ಮನಿದ್ದು ಬಳಿಕ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾರೆ. ದಾಳಿ ವೇಳೆ ಬಂಧಿತರಾಗಿರುವ ಯುವತಿಯರಿಗೆ ಬೇಲ್ ಮಾಡಿಸಲು ಹಣ ಕೊಡುವಂತೆ ತಾಕೀತು ಮಾಡಿದ್ದಾರೆ. ಹಣ ನೀಡದಿದ್ದರೆ ಯುವತಿಯರ ಸಮೇತ ನಿನ್ನ ಮನೆಗೆ ಬಂದು ಮಾನ ಮಾರ್ಯಾದೆ ಹರಾಜು ಹಾಕುವೆ ಎಂದು ವಂಚಕರು ಬೆದರಿಸಿದ್ದಾರೆ. ಇದರಿಂದ ಕಂಗಲಾದ ಶಂಕರ್ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ಪ್ರಕರಣವನ್ನ ಸಿಸಿಬಿ ಹಸ್ತಾಂತರಿಸಲಾಗಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಸುದ್ದಿಗೊಷ್ಠಿಯಲ್ಲಿ ತಿಳಿಸಿದ್ದಾರೆ.
Recommended Video