ಬೆಂಗಳೂರಿನ ರೌಡಿ ಗ್ಯಾಂಗ್ಗಳಿಗೆ ಪಿಸ್ತೂಲ್ ಕೊಡುತ್ತಿದ್ದ ಸತೀಶ್ ಗ್ಯಾಂಗ್ ಅಂದರ್
ಬೆಂಗಳೂರು, ಜೂ. 12: ಬೆಂಗಳೂರಿನ ರೌಡಿ ಗ್ಯಾಂಗ್ಗಳಿಗೆ ಪಿಸ್ತೂಲು ಪೂರೈಕೆ ಮಾಡುತ್ತಿದ್ದ ಮೂವರು ರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಡುಬೀಸನಹಳ್ಳಿ ಸತೀಶ್ ಹತ್ಯೆಗೆ ಎದುರಾಳಿ ಗ್ಯಾಂಗ್ ಕಾಡುಬೀಸನಹಳ್ಳಿ ರೋಹಿತ್ ಗ್ಯಾಂಗ್ ಸಂಚು ರೂಪಿಸಿತ್ತು. ಈ ಸಂಚನ್ನು ಬೇಧಿಸಿದ್ದ ಸಿಸಿಬಿ ಪೊಲೀಸರೂ ಇದೀಗ ಅಕ್ರಮ ಪಿಸ್ತೂಲು ಡೀಲಿಂಗ್ ದಂಧೆಯನ್ನು ಬಯಲಿಗೆ ಎಳೆದಿದ್ದಾರೆ.
ಕಲಬುರಗಿ ಸತೀಶ್ ಆಲಿಯಾಸ್ ಮಾರ್ಕೆಟ್ ಸತೀಶ್ (38) ಮತ್ತು ಈತನ ಇಬ್ಬರು ಸಹಚರರರಾದ ಧೃವ ಹಾಗೂ ಶಂಕರ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಎರಡು ಗನ್ ಹಾಗೂ ಹತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಲಬುರಗಿಯ ಮಾರ್ಕೆಟ್ ಸತೀಶ್ ನಟೋರಿಯಸ್ ರೌಡಿಯಾಗಿದ್ದು, ಈತನ ವಿರುದ್ಧ ಕರ್ನಾಟಕದಲ್ಲಿ ಈವರೆಗೂ 23ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಹದಿನೈದು ದಿನಗಳ ಕಾಲ ಮಾರ್ಕೆಟ್ ಸತೀಶ್ನನ್ನು ಪೊಲೀಸ್ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹೈದರಾಬಾದ್ನಲ್ಲಿ ಸತೀಶ್ ಸೆರೆ :
ಕಾಡುಬೀಸನಹಳ್ಳಿ ಸೋಮ ಮತ್ತು ರೋಹಿತ್ ಇಬ್ಬರು ಎದುರಾಳಿ ಗ್ಯಾಂಗ್ ರೌಡಿಗಳು. ಇತ್ತೀಚೆಗೆ ಕಾಡುಬೀಸನಹಳ್ಳಿ ಸೋಮನ ಹತ್ಯೆಗೆ ಸಂಚು ರೂಪಿಸಿದ್ದ ರೋಹಿತ್ ಮಂಗಳೂರಿನಿಂದ ಶಾರ್ಪ್ ಶ್ಯೂಟರ್ ಗಳನ್ನು ಕರೆಸಿ ಹತ್ಯೆಗೆ ಪ್ರಯತ್ನಿಸಿದ್ದ. ಆದರೆ ಹತ್ಯೆಗೂ ಮುನ್ನವೇ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ ದಾಳಿ ಮಾಡಿದ್ದರು.
ಏಳು ಮಂದಿಯನ್ನು ಬಂಧಿಸಿದ್ದರು. ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಸಿಸಿಬಿ ಪೊಲೀಸರಿಗೆ ಈ ರೌಡಿ ಗ್ಯಾಂಗ್ ಗೆ ಅಕ್ರಮ ಪಿಸ್ತೂಲು ಸಾಗಣೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ ರೌಡಿಗಳಿಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿದ್ದ ಸತೀಶ್ ನನ್ನು ಹೈದರಾಬಾದ್ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಟೋರಿಯಸ್ ಹಿನ್ನೆಲೆ ಹೊಂದಿರುವ ಮಾರ್ಕೆಟ್ ಸತೀಶ್ ರೌಡಿ ರೋಹಿತ್ ಗ್ಯಾಂಗ್ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ. ಇದಲ್ಲದೇ ರೌಡಿ ಗೊಟ್ಟಿಗೆರೆ ಪರಮೇಶ್ ಹತ್ಯೆಗೂ ಕಂಟ್ರಿಮೇಡ್ ಪಿಸ್ತೂಲು ಪೂರೈಸಿದ್ದ ಎನ್ನಲಾಗಿದೆ. ಇಸ್ರೋ ಲೇಔಟ್ ನಲ್ಲಿರುವ ಶಂಕರ್ ಎಂಬಾತನ ಮನೆ ಮೇಲೆ ದಾಳಿ ನಡೆಸಿದಾಗ ಪಿಸ್ತೂಲು ಸಿಕ್ಕವೆ.
ಈತ ನೀಡಿದ ಮಾಹಿತಿ ಮೇರೆಗೆ ಹೈದರಾಬಾದ್ ನಲ್ಲಿದ್ದ ಸತೀಶ್ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಇನ್ನು ಸತೀಶ್ ವಿರುದ್ಧ ನಾಲ್ಕು ಕೊಲೆ ಸೇರಿದಂತೆ 30 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಈತನ ಉಪಟಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರಿ ಚಿರತೆ ಸೇರಿದಂತೆ ಇಬ್ಬರು ಸಹಚರರು ಎನ್ಕೌಂಟರ್ ಗೆ ಬಲಿಯಾಗಿದ್ದರು.
Recommended Video
ಮಧ್ಯ ಪ್ರದೇಶ, ಬಿಹಾರ್, ಮತ್ತಿತರ ಕಡೆಯಿಂದ ಕಂಟ್ರಿಮೆಡ್ ಪಿಸ್ತೂಲನ್ನು ತರಿಸುವ ಸತೀಶ್ , ಬೆಂಗಳೂರಿನ ರೌಡಿಗಳಿಗೆ ತಲಾ 80 ಸಾವಿರ ರೂ. ಅಧಿಕ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹೈದರಾಬಾದ್ ನಲ್ಲಿ ವಿಲಾಸಿ ಬಂಗಲೆ ಕಟ್ಟಿಕೊಂಡು ವಾಸವಾಗಿದ್ದ ಸತೀಶ್ ಇದೀಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದು ಈತನ ಗನ್ ಡೀಲಿಂಗ್ ಜಾಲ ಬೇಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.