5 ವರ್ಷದಿಂದ ಪೊಲೀಸರಿಗೆ ಯಾಮಾರಿಸಿದ್ದ ಮೂವರು ಸರಗಳ್ಳರು ಸಿಸಿಬಿ ಬಲೆಗೆ
ಬೆಂಗಳೂರು, ಆ. 21: ಮಾಹಿತಿದಾರನೊಬ್ಬ ನೀಡಿದ ಸಣ್ಣ ಸುಳಿವಿನಿಂದ ಐದು ವರ್ಷದಿಂದ ಪೊಲೀಸರ ಕೈಗೆ ಸಿಗದೇ ಒಂಟಿ ಮಹಿಳೆಯರ ಸರ ಕದ್ದು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ ಬರೋಬ್ಬರಿ ಹದಿನೆಂಟು ಮಹಿಳೆಯರು ಕಳೆದುಕೊಂಡಿದ್ದ ಒಂದು ಕೆ.ಜಿ ತೂಕದ ಹದಿನೆಂಟು ಚಿನ್ನದ ಸರಗಳು ಪತ್ತೆಯಾಗಿವೆ. ಸಣ್ಣ ಸುಳಿವು ಆಧಾರಿಸಿ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆ ವಿವರ ಇಲ್ಲಿದೆ ನೋಡಿ.
ಸರಗಳ್ಳತನದ ಸುಳಿವು: ಸಾಮಾನ್ಯವಾಗಿ ಗಂಭೀರ ಸ್ವರೂಪದ ಪ್ರಕರಣಗಳ ಮಾಹಿತಿ ಬಂದರೆ ಮಾತ್ರ ಸಿಸಿಬಿ ಪೊಲೀಸರು ಕಾರ್ಯಾಚರಣೆಗೆ ಇಳಿಯುತ್ತಾರೆ. ಇತ್ತೀಚೆಗೆ ಮಾಹಿತಿದಾರನೊಬ್ಬ ಸಿಸಿಬಿ ಪೊಲೀಸರಿಗೆ ಸರಗಳ್ಳರ ಬಗ್ಗೆ ಮಾಹಿತಿ ನೀಡಿದ್ದ.
ಬೆಂಗಳೂರಿನಲ್ಲಿ ಒಂಟಿ ಮಹಿಳೆಯರ ಸರ ಕದಿಯುವ ಗ್ಯಾಂಗ್ ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಮಾರಾಟ ಮಾಡುತ್ತದೆ. ಕದ್ದ ಸರವನ್ನು ಮಾರಾಟ ಮಾಡಲು ಪ್ರಯತ್ನ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿಯನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳಕ್ಕೆ ಮಾಹಿತಿ ನೀಡಿದ್ದರು. ಡಿಸಿಪಿ. ಕೆ. ಪಿ ರವಿಕುಮಾರ್ ಅವರು ಪ್ರಕರಣವನ್ನು ಪತ್ತೆ ಮಾಡಲು ಪೊಲೀಸ್ ಇನ್ಸ್ಪೆಕ್ಟರ್ ಹಜರೇಶ್ ಅವರಿಗೆ ಸೂಚಿಸಿದ್ದರು.
ಮಾರುವೇಷದ ಕಾರ್ಯಾಚರಣೆ ?: ಕದ್ದ ಸರವನ್ನು ಹಿರಿಯೂರಿನಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ನ ಮಾಹಿತಿ ಆಧರಿಸಿ ಮಾರ ವೇಷದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕದ್ದ ಚಿನ್ನದ ಸರ ಮಾರಾಟ ಮಾಡಲು ಯತ್ನಿಸಿದ ವೇಳೆ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಬೆಳಗಾವಿ ಹಾಗೂ ಗುಲ್ಬರ್ಗಾ ಮೂಲದ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆ ನಡೆಸಿದಾಗ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಒಂಟಿ ಮಹಿಳೆಯರೇ ಟಾರ್ಗೆಟ್: ಬಂಧಿತ ಮೂವರು ಆರೋಪಿಗಳಿಂದ ಬೆಂಗಳೂರಿನಲ್ಲಿ ನಡೆದಿದ್ದ ಹದಿನೆಂಟು ಸರಗಳ್ಳ ಪ್ರಕರಣಗಳು ಪತ್ತೆಯಾಗಿವೆ. ಕಿರಾತಕರು ಬೆಳಗಿನ ಜಾವ ಬೆಂಗಳೂರಿನಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದರು. ಪೊಲೀಸ್ ಠಾಣೆಗಳಿಗೆ ದೂರ ಇರುವ ವಸತಿ ಪ್ರದೇಶಗಳಲ್ಲಿ ಸಾಮಾನ್ಯರಂತೆ ಓಡಾಡಿಕೊಂಡರುತ್ತಿದ್ದರು. ಆನಂತರ ಒಂಟಿ ಮಹಿಳೆಯರನ್ನು ಅಡ್ಡ ಗಟ್ಟಿ ಸರ ಕಸಿದು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದರು.
ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ಎಸಗಿದ ಬಳಕ ಮತ್ತೆ ಅದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ಎಸಗುತ್ತಿರಲಿಲ್ಲ. ಬೆಂಗಳೂರಿನ ಯಲಹಂಕ ನ್ಯೂಟೌಟ್, ಕೆ.ಆರ್. ಪುರ, ಹೆಬ್ಬಾಳ, ಸುಬ್ರಮಣ್ಯನಗರ, ಮಹಾಲಕ್ಷ್ಮೀ ಲೇಔಟ್, ಮೈಕೋ ಲೇಔಟ್, ಬನಶಂಕರಿ, ಬಯ್ಯಪ್ಪನಹಳ್ಳಿ, ಬ್ಯಾಟರಾಯನಪುರ, ಸದಾಶಿವನಗರ, ಪೀಣ್ಯ ಸೇರಿದಂತೆ ಹದಿನೆಂಟ್ಉ ಠಾಣೆಗಳ ವ್ಯಾಪ್ತಿಯಲ್ಲಿ ತಮ್ಮ ಕೈಚಳಕ ತೋರಿಸಿದ್ದರು.
2016 ರಿಂದ ಪೊಲೀಸರಿಗೆ ಸಿಕ್ಕಿರಲಿಲ್ಲ: ಬಂಧಿತ ಮೂವರು ಆರೋಪಿಗಳು ಕಳೆದ ಐದು ವರ್ಷಗಳಿಂದ ಪೊಲೀಸರಿಗೆ ಕೈಗೆ ಸಿಗದಂತೆ ಕೈಚಳಕ ತೋರುತ್ತಿದ್ದರು. ಕದ್ದ ಮಾಲನ್ನು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಮಾರಾಟ ಮಾಡಿ ಮತ್ತೆ ಬೆಂಗಳೂರಿನಲ್ಲಿ ಮತ್ತೆ ಸರಗಳ್ಳತನಕ್ಕೆ ಇಳಿಯುತ್ತಿದ್ದರು. ಅದರಲ್ಲೂ, ಹಬ್ಬದ ಸಂದರ್ಭದಲ್ಲಿಯೇ ಹೆಚ್ಚು ಟಾರ್ಗೆಟ್ ಮಾಡುತ್ತಿದ್ದರು. ಒಂದು ಠಾಣೆ ವ್ಯಾಪ್ತಿಯಲ್ಲಿ ಒಮ್ಮೆ ಅಪರಾಧ ಕೃತ್ಯ ಮಾಡಿದರೆ ಮತ್ತೆ ಆ ಕೃತ್ಯ ಎಸಗುತ್ತಿರಲಿಲ್ಲ. ಹೀಗಾಗಿ ಇವರು ಪೊಲೀಸರ ಕೈಗೆ ಬೀಳುತ್ತಿರಲಿಲ್ಲ. ಒಮ್ಮೆ ಅಪರಾಧ ಕೃತ್ಯ ಮಾಡಿ ಪರಾರಿಯಾದರೆ ಹಲವು ದಿನಗಳ ಕಾಲ ಬೆಂಗಳೂರಿಗೆ ಕಾಲಿಡುತ್ತಿರಲಿಲ್ಲ. ಸದ್ಯ ಮೂವರ ಬಂಧನದಿಂದ ಹದಿನೆಂಟು ಪ್ರಕರಣ ಪತ್ತೆಯಾಗಿದೆ. ಸುಮಾರು ಒಂದು ಕೆ.ಜಿ. ತೂಕದ ಚಿನ್ನದ ಸರಗಳನ್ನು ಪತ್ತೆ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
Recommended Video
ಮಹಿಳೆಯರೇ ಎಚ್ಚರ: ಚಿನ್ನಾಭರಣ ಧರಿಸುವುದು ತಪ್ಪಲ್ಲ. ಆದರೆ ಅದನ್ನು ಸುರಕ್ಷಿತವಾಗಿ ಕಪಾಡಿಕೊಳ್ಳಬೇಕು. ಮೈಮೇಲೆ ಹಾಕಿಕೊಂಡು ಪ್ರದರ್ಶನ ಮಾಡಿದರೆ ಇಂತಹ ಅವಘಡಗಳಿಗೆ ಕಾರಣವಾಗುತ್ತದೆ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಚಿನ್ನಾಭರಣ ಧರಿಸದೇ ಇರುವುದು ಸೂಕ್ತ. ವಿಪರ್ಯಾಸವೆಂದರೆ ಮನೆಯಲ್ಲಿರುವಾಗ ತೆಗೆದಿಡುತ್ತಾರೆ.ಹೊರಗೆ ಹೋಗುವಾಗ ಹಾಕಿಕೊಂಡು ಹೋಗುತ್ತಾರೆ. ಸರಗಳ್ಳರ ಬಗ್ಗೆ ಮಹಿಳೆಯರು ಯಾವಾಗಲೂ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಲಹೆ ಮಾಡಿದ್ದಾರೆ.