ಕರ್ನಾಟಕದ ಐಸಿಸ್ ಬಾಸ್ ಪಾಷಾ ಬಂಧನ: ಯಾರು ಈತ?
ಬೆಂಗಳೂರು, ಜನವರಿ 17: ಕರ್ನಾಟಕ ಪೊಲೀಸ್ ತಂಡದ ಭರ್ಜರಿ ಉಗ್ರ ಬೇಟೆಗೆ , ರಾಜ್ಯದಲ್ಲಿ ಐಸಿಸ್ ಹೊಣೆ ಹೊತ್ತಿದ್ದ ಪಾಷಾ ಬಂಧಿಸಲಾಗಿದೆ.
ಐಸಿಸ್ ಉಗ್ರ ಸಂಘಟನೆಗೆ ರಾಜ್ಯದಲ್ಲಿ ಸದಸ್ಯರ ನೇಮಕ ಹೊಣೆ ಹೊತ್ತಿದ್ದ ಶಂಕಿತ ಉಗ್ರ ಮೆಹಬೂಬ್ ಪಾಷಾ ಮತ್ತು ಆತನ ನಂಬಿಕಸ್ಥ ಬಂಟ ಮನ್ಸೂರ್ ಖಾನ್ನನ್ನು ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಪಾಷಾ
ತನ್ನ ಇತರೆ ಸಹಚರರ ಬಂಧನದ ಬಳಿಕತಲೆಮರೆಸಿಕೊಂಡಿದ್ದ ಮೆಹಬೂಬ್ ಪಾಷಾ ಹಾಗೂ ಆತನ ಸಹಚರ ಮನ್ಸೂರ್ನನ್ನು ಬೆಂಗಳೂರಿನ ಜಯನಗರದ ಸಮೀಪ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಬೆಂಗಳೂರಲ್ಲಿ ಜಿಹಾದಿ ಗ್ಯಾಂಗ್ ಮುಖ್ಯಸ್ಥನ ಬಂಧನ
ಮೊಹಮದ್ ಪಾಷಾ ಯಾರು?
ಬೆಂಗಳೂರಿನ ಸದ್ದುಗುಂಟೆ ಪಾಳ್ಯದ ನಿವಾಸಿ ಮೆಹಬೂಬ್ ಪಾಷಾ, ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಹೊಣೆ ಹೊತ್ತಿದ್ದ, ಇತ್ತೀಚೆಗೆ ಬಂಧಿತನಾದ ತಮಿಳುನಾಡಿನ ಖಾಜಾ ಮೊಯಿದ್ದೀನ್ ಎಂಬಾತ ಪಾಷಾನನ್ನು ಕರ್ನಾಟಕದಲ್ಲಿ ಐಸಿಸ್ ಜಾಲ ವಿಸ್ತರಿಸಲು ನೇಮಿಸಿದ್ದ.
ಅದರಂತೆ, ಅಲ್ ಹಿಂದ್ ಟ್ರಸ್ಟ್ ಎಂಬ ಸಂಸ್ಥೆ ಆರಂಭಿಸಿದ್ದ ಪಾಷಾ ಸದಸ್ಯರ ನೇಮಕ, ಉಗ್ರ ತರಬೇತಿ ನೀಡಲು ಜಮೀನು ಖರೀದಿ ಮತ್ತಿತರೆ ಯೋಜನೆಗಳಲ್ಲಿ ತೊಡಗಿಕೊಂಡಿದ್ದ. ಇದಕ್ಕಾಗಿ ತನ್ನ ಆಪ್ತ, ಬೆಂಗಳೂರಿನ ಗುರಪ್ಪನ ಪಾಳ್ಯ ನಿವಾಸಿ ಮನ್ಸೂರ್ ಖಾನ್ನನ್ನು ನಿಯೋಜಿಸಿದ್ದ. ತಮಿಳುನಾಡು, ಕರ್ನಾಟಕ, ದೆಹಲಿ, ಗುಜರಾತ್ನಲ್ಲಿ ತಮ್ಮ ಸದಸ್ಯರ ಬಂಧನವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ.
ಜಿಹಾದಿ ಗ್ಯಾಂಗ್
ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಬಲವರ್ಧನೆಗೆ ಇತ್ತೀಚೆಗೆ ಬಂಧಿತನಾದ ತಮಿಳುನಾಡಿನ ಖಾಜಾ ಮೊಯಿದ್ದೀನ್ ಯೋಜಿಸಿದ್ದ. ಆತನಿಗೆ ಕೋಲಾರದ ಸಲೀಂ ಮೂಲಕ ಮೆಹಬೂಬ್ ಪಾಷಾ ಪರಿಚಯವಾಗಿದೆ. ಬಳಿಕ ಸದ್ದುಗುಂಟೆ ಪಾಳ್ಯದಲ್ಲಿರುವ ಪಾಷಾನ ಮನೆಯನ್ನು ಸಂಘಟನೆಯ ತಾತ್ಕಾಲಿಕ ಕಾರ್ಯಸ್ಥಾನ ಮಾಡಿಕೊಂಡಿದ್ದರು.
ಶ್ರೀನಗರದಲ್ಲಿ ಇಬ್ಬರು ಜೈಷ್-ಎ-ಮೊಹಮ್ಮದ್ ಉಗ್ರರ ಬಂಧನ
ಬೆಂಗಳೂರಲ್ಲಿ ಖಾಜಾ ಸಹಚರರ ಇರುವಿಕೆ ಖಚಿತವಾಗಿತ್ತು
ಬೆಂಗಳೂರಿನಲ್ಲಿ ಖಾಜಾ ಸಹಚರರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಕೇಂದ್ರ ಗುಪ್ತದಳ ಹಾಗೂ ತಮಿಳುನಾಡು ಪೊಲೀಸರು, ಸಿಸಿಬಿ ನೆರವು ಪಡೆದು ಗುರಪ್ಪನಪಾಳ್ಯದಲ್ಲಿ ಆತನ ಮೂವರು ಬೆಂಬಲಿಗರನ್ನು ಸೆರೆ ಹಿಡಿದರು. ಅಷ್ಟರಲ್ಲಿ ನಗರದಿಂದ ತಪ್ಪಿಸಿಕೊಂಡಿದ್ದ ತೌಸಿಫ್ ಹಾಗೂ ಶಮೀಮ್ ಉಡುಪಿಯಲ್ಲಿ ಸಿಕ್ಕಿಬಿದ್ದಿದ್ದರು.