ಮೋದಿಗೆ ವಿದ್ಯಾರ್ಥಿಗಳ ಆರೋಗ್ಯ ಮುಖ್ಯ: ಸಿಬಿಎಸ್ಇ ಪಿಯುಸಿ ಪರೀಕ್ಷೆ ರದ್ದು
ಬೆಂಗಳೂರು, ಜೂ. 01: ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2021ನೇ ಸಾಲಿನ ಸಿಬಿಎಸ್ಇ ಪರೀಕ್ಷೆಯನ್ನು ರದ್ದು ಮಾಡಿ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ನಮಗೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯ ಮುಖ್ಯ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದಲ್ಲಿ ಪರಿಸ್ಥಿತಿ ಅವಲೋಕಿಸಿ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ರಾಜ್ಯದಲ್ಲಿ ಕೊರೊನಾ ಪ್ರಕರಣ ಕಡಿಮೆಯಾದರೆ ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿರುವ ಸಂದೇಶವನ್ನು ರವಾನಿಸಿದ್ದಾರೆ.
Recommended Video
ಕೊರೊನಾ ಅಲೆ ಹಿನ್ನೆಲೆಯಲ್ಲಿ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಗಳನ್ನು ಒಂದೂವರೆ ತಿಂಗಳ ಹಿಂದೆಯೇ ರದ್ದು ಮಾಡಿ ಕೇಂದ್ರ ಸರ್ಕಾರ ತೀರ್ಮಾನ ಪ್ರಕಟಿಸಿತ್ತು. ಈ ತೀರ್ಮಾನದ ಬೆನ್ನಲ್ಲೇ ರಾಜ್ಯದಲ್ಲಿ ಜೂನ್ನಲ್ಲಿ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಒಂದು ತಿಂಗಳ ಮುಂಚಿತವಾಗಿ ಪರೀಕ್ಷೆ ದಿನಾಂಕ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯೇ ದೇಶದ ಪರಿಸ್ಥಿತಿ ಅವಲೋಕಿಸಿ ರಾಷ್ಟಸಿಬಿಎಸ್ಇ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಅನಿರೀಕ್ಷಿತ ಪರೀಕ್ಷೆ ಬಗ್ಗೆ ಮೂಡಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದರೆ ರಾಜ್ಯದಲ್ಲಿ ಶಿಕ್ಷಣ ಸಚಿವರು ಮಾತ್ರ ವಿಚಿತ್ರ ತೀರ್ಮಾನವನ್ನು ಪ್ರಕಟಿಸಿದ್ದಾರೆ.
Breaking; ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು
ಮೋದಿ ಟ್ವೀಟ್ ಅಲ್ಲ ಮಾಧ್ಯಮ ವರದಿ ಅಂತೆ
ಪ್ರಧಾನಿ ನರೇಂದ್ರ ಮೋದಿಯವರೇ ಸಿಬಿಎಸ್ಇ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಮಾಧ್ಯಮಗಳ ವರದಿ ಎಂದು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಸಿಬಿಎಸ್ಇ ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತಂತೆ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಶೀಘ್ರ ತೀರ್ಮಾನ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್. ಅವರು ತಿಳಿಸಿದ್ದಾರೆ. ಕೇಂದ್ರೀಯ ಮಂಡಳಿಯ ಪರೀಕ್ಷೆ ರದ್ದು ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಪಠ್ಯ ಕ್ರಮ ಅನುಸರಿಸಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿ ಅವಲೋಕಿಸಿ, ಮೌಲ್ಯಮಾಪನ ಅವಶ್ಯಕತೆ ಕುರಿತಂತೆ ಈಗಾಗಲೇ ರೂಪಿತವಾಗಿರುವ ಅಭಿಪ್ರಾಯಗಳ ಸುದೀರ್ಘ ಚರ್ಚೆ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಾಹಸ ಮೆರೆಯುವರೇ ಸಚಿವರು?
ಕಳೆದ ವರ್ಷವೂ ಸಹ ನೆರೆ ರಾಜ್ಯಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಿದರೂ ರಾಜ್ಯದಲ್ಲಿ ಪರೀಕ್ಷೆ ನಡೆಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯಶಸ್ವಿಯಾಗಿದ್ದರು. ಕಳೆದ ವರ್ಷ ಪಾಠ ಪ್ರವಚನಗಳು ನಡೆದಿದ್ದವು. ಕೊರೊನಾ ಸೋಂಕು ಕೂಡ ಅಷ್ಟು ಪ್ರಭಾವ ಬೀರಿರಲಿಲ್ಲ. ಅದೇ ಗುಂಗಿನಲ್ಲಿರುವ ಶಿಕ್ಷಣ ಸಚಿವರು ಈ ವರ್ಷವೂ ನಾನು ದೇಶದಲ್ಲಿ ಪರೀಕ್ಷೆ ನಡೆಸಿ ಯಶಸ್ಸು ಗಳಿಸಿದ ಏಕೈಕ ಸಚಿವ ಎನಿಸಿಕೊಳ್ಳಲು ಮುಂದಾದಂತಿದೆ. ಈಗಾಗಲೇ ಪರೀಕ್ಷೆ ಇಲ್ಲದೇ ಮೌಲ್ಯಾಂಕನ ಆಧಾರದ ಮೇಲೆ ಉತ್ತೀರ್ಣ ಆಗುವ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪರಿಗಣನೆಯೇ ಬೇರೆ. ಪರೀಕ್ಷೆ ಬರೆದು ರಾಜ್ಯ ಪಠ್ಯ ಕ್ರಮ ವಿದ್ಯಾರ್ಥಿಗಳು ಗಳಿಸುವ ಅಂಕದಿಂದ ಪರೀಕ್ಷೆ ಇಲ್ಲದೇ ಉತ್ತೀರ್ಣ ರಾಗುವ ವಿದ್ಯಾರ್ಥಿಗಳ ನಡುವೆ ಯಾವ ರೀತಿಯ ತಾರತಮ್ಯ ಉಂಟಾಗಲಿದೆ ಎಂಬ ಅರಿವು ಇಲ್ಲದಂತೆ ಶಿಕ್ಷಣ ಇಲಾಖೆ ತೀರ್ಮಾನ ಕೈಗೊಳ್ಳುತ್ತಿದೆ. ಅಂತೂ ಪರೀಕ್ಷೆ ನಡೆಸಿಯೇ ತೀರುತ್ತೇನೆ ಎಂಬ ಹಠಕ್ಕೆ ಬಿದ್ದು ಕಳೆದ ವರ್ಷ ಕೈಗೊಂಡ ತೀರ್ಮಾನದಂತೆ ರಾಜ್ಯದಲ್ಲಿ ಸದ್ಯ ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಅಂಕಿ ಅಂಶ ಇಟ್ಟುಕೊಂಡು ಪರೀಕ್ಷೆ ನಡೆಸಿದರೂ ಅಚ್ಚರಿ ಪಡಬೇಕಿಲ್ಲ.
ಪ್ರಶ್ನೆ ಪತ್ರಿಕೆ ಮುದ್ರಣ ಚಿಂತೆ
ವಿಪರ್ಯಾಸವೆಂದರೆ ಕೇಂದ್ರೀಯ ಮಂಡಳಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಎರಡನ್ನೂ ರದ್ದು ಮಾಡಿದೆ. ಆದರೆ ರಾಜ್ಯದಲ್ಲಿ ಎರಡೂ ಪರೀಕ್ಷೆಯಲ್ಲಿ ಯಾವ ಪರೀಕ್ಷೆ ರದ್ದು ಬಗ್ಗೆ ಕೂಡ ಶಿಕ್ಷಣ ಸಚಿವರು ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ. ಪರೀಕ್ಷೆ ಬಗ್ಗೆ ಈಗಾಗಲೇ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಆರೋಗ್ಯದ ಮೇಲೂ ಅಷ್ಟೇ ಪರಿಣಾಮ ಬೀರುತ್ತಿದೆ. ಈಗಾಗಲೇ ಒಂದೂವರೆ ವರ್ಷದಿಂದ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಎಷ್ಟು ದಿನಗಳು ಓದಿನಲ್ಲೇ ತಲ್ಲೀನವಾಗಿರಬೇಕು ಎಂಬುದರ ಬಗ್ಗೆ ಶಿಕ್ಷಣ ಸಚಿವರು ಚಿಂತನೆ ನಡೆಸಿಲ್ಲ. ಈಗಾಗಲೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಮುದ್ರಣ ಮಾಡಿಸಿಕೊಂಡು ಸಕಲ ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಪರೀಕ್ಷೆ ನಿಂತು ಹೋದರೇ ಎಲ್ಲಾ ಪ್ರಶ್ನೆ ಪತ್ರಿಕೆಗಳು ನಿರುಪಯುಕ್ತವಾಗಲಿವೆ. ಹೀಗಾಗಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯಕ್ಕಿಂತಲೂ ಪ್ರಶ್ನೆ ಪತ್ರಿಕೆ ಮುದ್ರಣದ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸಿದಂತಿದ್ದಾರೆ.
ಅನ್ಯ ಸಚಿವರ ಮಾತಿಗೆ ಬೆಲೆ ಇಲ್ಲ
ಇನ್ನು ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ರದ್ದು ಮಾಡಬೇಕೆಂದು ಉನ್ನತ ಶಿಕ್ಷಣ ಸಚಿವ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ಸಂಸದ ಪಿ.ಸಿ. ಮೋಹನ್ ಕೂಡ ಇದನ್ನೇ ಸ್ಪಷ್ಟಪಡಿಸಿದ್ದಾರೆ. ಆದರೆ, ರಾಜ್ಯ ಶಿಕ್ಷಣ ಮಂತ್ರಿಗಳು ಮಾತ್ರ ಪರಿಸ್ಥಿತಿ ಅವಲೋಕಿಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಇನ್ನೆರಡು ದಿನದಲ್ಲಿ ಯಾವ ತೀರ್ಮಾನ ಪ್ರಕಟಿಸುತ್ತಾರೋ ಕಾದು ನೋಡಬೇಕು.