ವಕೀಲರು, ಪತ್ರಕರ್ತರ ಸಂಘರ್ಷ: ಸದ್ಯದಲ್ಲೇ ಸಿಬಿಐ ವರದಿ
ಬೆಂಗಳೂರು, ಆ.6: ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ನಗರದ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ 2011ರ ಮಾರ್ಚ್ 2ರಂದು ನಡೆದ ಸಂಘರ್ಷ ಕುರಿತ ಸಿಬಿಐ ವರದಿ ಈ ತಿಂಗಳ ಅಂತ್ಯಕ್ಕೆ ಸಲ್ಲಿಕೆಯಾಗಲಿದೆ.
ಹೈಕೋರ್ಟ್ನಲ್ಲಿ ಮಂಗಳವಾರ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಸಿಬಿಐ ಪರ ವಕೀಲರು, ಪ್ರಕರಣದ ತನಿಖೆಯು ಈಗ ಮುಕ್ತಾಯದ ಹಂತದಲ್ಲಿದೆ. ಅಂತಿಮ ವರದಿಯನ್ನು ಇದೇ 27ರ ಒಳಗಾಗಿ ಸಲ್ಲಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು.[ವಕೀಲರು ಮತ್ತು ಪತ್ರಕರ್ತರ ನಡುವೆ ಸಂಘರ್ಷ ನಡೆದದ್ದು ಯಾಕೆ?]
ಇದೇ ವೇಳೆ ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸಲು ನೇಮಿಸಿದ್ದ ನ್ಯಾ.ಜಿ.ಆರ್.ವೈದ್ಯನಾಥನ್ ವರದಿ ಸಲ್ಲಿಕೆ ಮೇಲಿನ ತಡೆಯಾಜ್ಞೆ ತೆರವಿಗೂ ನ್ಯಾಯಪೀಠ ತಿರಸ್ಕರಿಸಿತು.
ಘಟನೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬೆಂಗಳೂರು ವಕೀಲರ ಸಂಘವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಮಧ್ಯೆ ರಾಜ್ಯ ಸರ್ಕಾರ ಘಟನೆಯ ತನಿಖೆಗಾಗಿ ನ್ಯಾಯಮೂರ್ತಿ ಜಿ.ಆರ್.ವೈದ್ಯನಾಥನ್ ಆಯೋಗವನ್ನು ನೇಮಿಸಿತ್ತು.
ಆದರೆ ಈ ತನಿಖೆಗೆ ವಕೀಲರ ಸಂಘವು ಹೈಕೋರ್ಟಿನಿಂದ ತಡೆ ಆದೇಶ ಪಡೆದಿತ್ತು. ತಡೆಯಾಜ್ಞೆ ತೆರವಿಗೆ ಆಯೋಗವು ಹೈಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು.