ವಕೀಲ-ಪತ್ರಕರ್ತ-ಪೊಲೀಸರ ಘರ್ಷಣೆ 5 ಕೇಸು ದಾಖಲು
ಸೆಂಟ್ರಲ್ ಬ್ಯೂರೂ ಆಫ್ ಇನ್ವೆಸ್ಟಿಗೇಷನ್ ನ ವಿಶೇಷ ಕ್ರೈಂ ಬ್ರ್ಯಾಂಚ್(SCB) ತಂಡ ಪತ್ರಕರ್ತರು, ವಕೀಲರು ಹಾಗೂ ಪೊಲೀಸರ ವಿರುದ್ಧ ಐದು ಮೊಕದ್ದಮೆ ದಾಖಲಿಸಿದ್ದಾರೆ.
ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಾ.2ರಂದು ಮಾಧ್ಯಮ ಮತ್ತು ವಕೀಲರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಉನ್ನತಾಧಿಕಾರಿಗಳ ಸಮಿತಿಗೆ ಸುಪ್ರೀಂಕೋರ್ಟ್ ಶುಕ್ರವಾರ (ಅ.19, 2012) ಆದೇಶಿಸಿತ್ತು.
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಸಿಬಿಐ ತಂಡ ಪೊಲೀಸರು, ವಕೀಲರು, ಪತ್ರಕರ್ತರು ಹಾಗೂ ಓರ್ವ ಜಡ್ಜ್ ಹಾಗೂ ಸಾರ್ವಜನಿಕರ ಹೇಳಿಕೆ, ದೂರುಗಳನ್ನು ಸಿಬಿಐ ತಂಡ ಕಲೆ ಹಾಕಿ ನಂತರ ಕೇಸು ದಾಖಲಿಸಿದೆ.
ಸಿಬಿಐ ತಂಡದ ವಿಶೇಷ ಕ್ರೈಂ ಬ್ರ್ಯಾಂಚ್ ನ ಎಸ್ ಸೆಲ್ವರಾಜ್ ಅವರ ನೇತೃತ್ವದ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಏನಿದು ಪ್ರಕರಣ: ಕೋರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು ವಕೀಲರ ನಡುವೆ ಗಾಡಿ ತೆಗೆಯುವ ವಿಚಾರಕ್ಕೆ ಜಗಳ ನಡೆದಿತ್ತು. ಇದನ್ನು ನೋಡಿದ ಖಾಸಗಿ ಮಾಧ್ಯಮ ವಾಹಿನಿ ಪ್ರತಿನಿಧಿಗಳು ವಕೀಲರ ಗಲಾಟೆಯನ್ನು ಕೆಮೆರಾದಲ್ಲಿ ಸೆರೆಹಿಡಿಯಲು ಹೋಗಿದ್ದಾರೆ. ಇದಕ್ಕೆ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವಕೀಲರು ಪೊಲೀಸರ ನಡುವೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ದೊಡ್ಡ ಪ್ರತಿಭಟನೆ ನಡೆದಿತ್ತು. ಆ ವೇಳೆಯಲ್ಲಿ ಮಾಧ್ಯಮಗಳಲ್ಲಿ 'ವಕೀಲರನ್ನು ಗೂಂಡಾಗಳು' ಎಂದು ಬಿಂಬಿಸಿ, ಅಪಮಾನ ಮಾಡಲಾಗಿದೆ ಎನ್ನುವ ಸಿಟ್ಟನ್ನು ಮನಸಿನಲ್ಲಿಟ್ಟುಕೊಂಡಿದ್ದ ವಕೀಲರು, ಮಾಧ್ಯಮದ ಮೇಲೆ ಹರಿಹಾಯ್ದರು.
ಇಬ್ಬರ ವಕೀಲರು ತಮ್ಮ ಗಾಡಿ ಜಗಳ ಮರೆತು ಕೆಮೆರಾಮ್ಯಾನ್ ಹಿಂದೆ ಬಿದ್ದರು. ವಕೀಲರ ಬೆಂಬಲಕ್ಕೆ ಇನ್ನಷ್ಟು ಕರಿಕೋಟುಗಳು ಕೊಂಡರು. ಕೋರ್ಟ್ ಆವರಣದಲ್ಲಿದ್ದವರ ಬ್ಯಾಡ್ಜ್ ನೋಡಿ ಮಾಧ್ಯಮದವರು ಎಂದು ತಿಳಿದ ತಕ್ಷಣ ಯಕ್ಕಾ ಮಕ್ಕಾ ಬಾರಿಸಿದರು. ಪರಿಸ್ಥಿತಿ ಕೈಮೀರಿ ಮಾಧ್ಯಮ ಸಂಸ್ಥೆಗಳ OB ವಾಹನಗಳು ಜಖಂಗೊಂಡಿದ್ದವು, ಅನೇಕರಿಗೆ ಗಾಯಗಳಾಯಿತು.
ಕೋರ್ಟ್ ಬಹಿಷ್ಕರಿಸಿ ವಕೀಲರು ಮುಷ್ಕರ ಹೂಡಿದರು. ವಕೀಲರ ವರ್ತನೆ ವಿರುದ್ಧ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆಯಿತು.ಮಾಧ್ಯಮ ಸಂಸ್ಥೆಗಳು ಕೂಡಾ ಕರಾಳ ದಿನ ಆಚರಿಸಿ ಪ್ರತಿಭಟನೆ ನಡೆಸಿದ್ದರು. ಸುಮಾರು 12 ದಿನಗಳ ಕೋರ್ಟ್ ಆವರಣಕ್ಕೆ ಕಾಲಿಡದ ವಕೀಲರು ಕೊನೆಗೂ ಕರಿಕೋಟು ಧರಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಕರ್ನಾಟಕ ಪೊಲೀಸರು ಸುಮಾರು 121 ಕೇಸು ಹಾಕಿದ್ದರು. ಆದರೆ, ಪತ್ರಕರ್ತರು ಹಾಗೂ ಪೊಲೀಸ್-ವಕೀಲರ ನಡುವಿನ ಘರ್ಷಣೆ ಪ್ರಕರಣ ಕೊನೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.