ಯೋಗೀಶ್ ಕೊಲೆ ಪ್ರಕರಣ: ಆರು ಮಂದಿ ಬಂಧಿಸಿದ ಸಿಬಿಐ
ಬೆಂಗಳೂರು, ಮಾರ್ಚ್ 01: ಭಾರಿ ಕುತೂಹಲ ಕೆರಳಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಟ್ವಿಸ್ಟ್ ದೊರೆತಿದೆ.
2016 ರಲ್ಲಿ ನಡೆದಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಿಬಿಐ ಆರು ಮಂದಿಯನ್ನು ಬಂಧಿಸಿದ್ದು, ಇವರು ಸುಫಾರಿ ಕೊಲೆಗಾರರಾಗಿದ್ದು, ಕೊಲೆ ಸುಫಾರಿ ಪಡೆದು ಯೋಗೀಶ್ ಗೌಡ ಅವರ ಕೊಲೆ ಮಾಡಿದ್ದರು ಎಂದು ಗೊತ್ತಾಗಿದೆ.
ಜಿಲ್ಲಾ ಪಂಚಾಯಿತಿ ಸದಸ್ಯ ಆಗಿದ್ದ ಯೋಗೀಶ್ ಗೌಡ ಅವರನ್ನು 2016 ರ ಜೂನ್ 15 ರಂದು ಆರು ಮಂದಿಯ ಗುಂಪೊಂದು ಜಿಮ್ನಲ್ಲಿ ಬೆಳ್ಳಂಬೆಳ್ಳಿಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು.
ಈ ಕೊಲೆ ರಾಜಕೀಯ ಪ್ರೇರಿತ ಕೊಲೆ ಎಂಬ ಆರೋಪ ಜೋರಾಗಿ ಕೇಳಿಬಂದಿತ್ತು. ಆಗ ಸಚಿವರಾಗಿದ್ದ ವಿನಯ್ ಕುಲಕರ್ಣಿ ವಿರುದ್ಧವೂ ಆರೋಪ ಕೇಳಿಬಂದಿತ್ತು. ಆದ್ದರಿಂದ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿ ಸಿಬಿಐ ಈಗ ಆರು ಮಂದಿಯನ್ನು ಬಂಧಿಸಿದೆ.
ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರಕ್ಕೂ ಈ ಕೊಲೆ ಕಾರಣವಾಗಿತ್ತು. ಈ ಮೊದಲು ಪೊಲೀಸರು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತರಾದ ಆರು ಮಂದಿಯನ್ನು ಬಂಧಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆ ಆದರು, ಆದರೆ ಈಗ ಸಿಬಿಐ ನವರು ಆರು ಮಂದಿಯನ್ನು ಬಂಧಿಸಿದ್ದಾರೆ.
ಸುಫಾರಿ ಕೊಲೆಗಾರರನ್ನು ಬಂಧಿಸಿದ್ದಾಗಿದೆ, ಈಗ ಸುಫಾರಿ ಕೊಟ್ಟು ಕೊಲ್ಲಿಸಿದವರು ಯಾರು ಎಂಬ ಕುತೂಹಲ ಮೂಡಿದ್ದು, ಇದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ದೊರಕಲಿದೆ.