ಬೆಂಗಳೂರಿನ 'ವಧು' ತಮಿಳುನಾಡಿನ 'ವರ' ನೆಡೆಗೆ ನಡಿಗೆ
ಬೆಂಗಳೂರು, ಸೆ.13: ಕಾವೇರಿ ವಿವಾದದ ಹಿನ್ನಲೆಯಲ್ಲಿ ತಮಿಳುನಾಡು ಹಾಗೂ ಬೆಂಗಳೂರಿನ ನಡುವೆ ಸಾರಿಗೆ ಸಂಚಾರ ಬಂದ್ ಆಗಿದ್ದು, ಮದುವೆ ದಿಬ್ಬಣಕ್ಕೂ ಬಿಸಿ ತಟ್ಟಿದೆ. ತಮಿಳುನಾಡಿನಲ್ಲಿರುವ 'ವರ' ನ ಊರಿಗೆ ಬೆಂಗಳೂರಿನಿಂದ 'ವಧು' ನಡಿಗೆ ಮೂಲಕ ಹೊರಟ ಘಟನೆ ರಾಷ್ಟ್ರೀಯ ಮಾಧ್ಯಮಗಳನ್ನು ಸೆಳೆದಿದೆ.
ಸಾಮಾನ್ಯವಾಗಿ ವಧುವಿನ ಮನೆ ಕಡೆಗೆ ವರನ ಮನೆಯವರ ದಿಬ್ಬಣ ಬರುತ್ತದೆ. ಆದರೆ, ತಮಿಳುನಾಡಿನ ಹೊಸೂರಿನಲ್ಲಿರುವ ವರನ ಮನೆ ಕಡೆಗೆ ವಧುವಿನ ಕಡೆಯವರು ಅನಿವಾರ್ಯವಾಗಿ ನಡೆದುಕೊಂಡು ಹೋಗಿರುವ ದೃಶ್ಯ ಕಂಡು ಬಂದಿದೆ. ಸೆ. 14 ರಂದು ಮದುವೆ ನಿಗದಿಯಾಗಿದೆ. [ಕಾವೇರಿ ಹೋರಾಟ, ಮಂಗಳವಾರ ಏನಾಯ್ತು?]
ಹೀಗಾಗಿ ಮದುಮಗಳಾದ ಪ್ರೇಮಾ ಅವರು ತನ್ನ ಕುಟುಂಬ ಸದಸ್ಯರ ಸಹಿತವಾಗಿ ವಧುವಿನ ಉಡುಪಿನಲ್ಲೇ ಬೆಂಗಳೂರಿನಿಂದ ತಮಿಳುನಾಡಿನ ಗಡಿಯಲ್ಲಿರುವ ಹೊಸೂರಿನ ತನಕ ತಾಸುಗಟ್ಟಲೆ ನಡೆದುಕೊಂಡು ಹೋಗಿದ್ದಾರೆ. [ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಲಾಟೆ, ಪೊಲೀಸರ ಹೇಳಿಕೆ ಮಾತ್ರ ನಂಬಿ!]
ಆರ್. ಪ್ರೇಮಾ ಎಂಬ 25ರ ಹರೆಯದ ಕಾಮರ್ಸ್ ಪದವೀಧರೆ ತಮಿಳುನಾಡಿನ ವಣಿಯಂಬಾಡಿ ಎಂಬಲ್ಲಿರುವ ವರನ ಮನೆಗೆ ನಾಳೆ ತಲುಪುವ ನಿರೀಕ್ಷೆಯಿದೆ. ಬೆಂಗಳೂರಿನಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಈ ಊರಿಗೆ ತಲುಪಲು ಯಾವುದೇ ಬಸ್ ಸೌಲಭ್ಯ ಸಿಕ್ಕಿಲ್ಲ.
ರೇಷ್ಮೆ ಸೀರೆ, ಆಭರಣಗಳನ್ನು ಧರಿಸಿರುವ ವಧುವಿನ ಜೊತೆಗೆ ಕುಟುಂಬದ ಸುಮಾರು 20 ಸದಸ್ಯರಿದ್ದಾರೆ. ಬೆಂಗಳೂರಿನಿಂದ 600 ಜನರು ತಮಿಳುನಾಡಿಗೆ ಮದುವೆಗೆ ತೆರಳಬೇಕಿತ್ತು.
ಆದರೆ, ಬಸ್ ಸಂಚಾರವಿಲ್ಲದ ಕಾರಣ, ಸ್ವಂತ ವಾಹನಗಳಲ್ಲೂ ತೆರಳಲು ಜನ ಹಿಂಜರಿದಿದ್ದಾರೆ. ನಾವು ಸ್ವಲ್ವ ದೂರ ಬಸ್ಸಿನಲ್ಲಿ, ಸ್ವಲ್ಪ ದೂರ ಆಟೋದಲ್ಲಿ ಕ್ರಮಿಸಿ, ಬಳಿಕ ತಮಿಳುನಾಡಿನ ಹೊಸೂರು ಕಡೆಗೆ ಈಗ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಪ್ರೇಮಾ ಅವರ ಸಂಬಂಧಿಕರು ಹೇಳಿದ್ದಾರೆ.
ಮಾಧ್ಯಮಗಳ ಕಣ್ಣಿಗೆ ಈ ಮದುವೆ ದಿಬ್ಬಣ ಬೀಳುವ ವೇಳೆ ಇವರು ನಾಲ್ಕು ಗಂಟೆಗಳ ಕಾಲ ಪಾದಯಾತ್ರೆ ಮಾಡಿರುವುದು ಕಂಡು ಬಂದಿದೆ. ಉಭಯ ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದು ವಧು ಪ್ರೇಮಾ ಹೇಳಿದ್ದಾರೆ. ಬೆಂಗಳೂರಿನ ಜಾಲಹಳ್ಳಿ, ಯಶವಂತಪುರ ಮುಂತಾದೆಡೆ ಕೂಡಾ ಮದುವೆ ಕಾರ್ಯಗಳಿಗೆ ಕಾವೇರಿ ವಿವಾದ ಬಿಸಿ ತಟ್ಟಿದೆ.