ಬೆಂಗಳೂರಿನೆಲ್ಲೆಡೆ ಭುಗಿಲೆದ್ದ ಆಕ್ರೋಶ, ಶಾಲಾಕಾಲೇಜು ರಜಾ
ಬೆಂಗಳೂರು, ಸೆಪ್ಟೆಂಬರ್ 12 : ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ತಿದ್ದುಪಡಿ ಆಜ್ಞೆಯನ್ನು ಹೊರಡಿಸಿರುವುದು, ಧಗಧಗನೆ ಉರಿಯುತ್ತಿರುವ ಬೆಂಕಿಗೆ ಟನ್ ಗಟ್ಟಲೆ ತುಪ್ಪ ಸುರಿದಂತಾಗಿದೆ.
ಅಲ್ಲದೆ, ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ, ವಾಹನಗಳ ಮೇಲೆ ಹಲ್ಲೆ ನಡೆಸುತ್ತಿರುವುದು, ಇದಕ್ಕೆ ಪ್ರತಿಯಾಗಿ ಬೆಂಗಳೂರು, ಮೈಸೂರು ಸೇರಿದಂತೆ ತಮಿಳಿಗರ ಮೇಲೆ ಪ್ರತಿಹಲ್ಲೆ ನಡೆಯುತ್ತಿರುವುದು ಪರಿಸ್ಥಿತಿ ವಿಕೋಪಕ್ಕೆ ಹೋಗುವಂತೆ ಮಾಡಿದೆ.
ಪರಿಸ್ಥಿತಿ ಕೈಮೀರುತ್ತಿರುವ ಸೂಚನೆ ಸಿಗುತ್ತಿದ್ದಂತೆ, ಬೆಂಗಳೂರಿನಲ್ಲಿರುವ ಕೆಲ ಶಾಲೆಗಳು ಹಠಾತ್ತಾಗಿ ತರಗತಿಗಳನ್ನು ಸ್ಥಗಿತಗೊಳಿಸಿ ಮಕ್ಕಳನ್ನು ಕೂಡಲೆ ಮನೆಗೆ ಕರೆದುಕೊಂಡು ಹೋಗಬೇಕಾಗಿ ಪಾಲಕರಿಗೆ ಸಂದೇಶಗಳನ್ನು ರವಾನಿಸುತ್ತಿವೆ. [ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ]
ಜ್ಞಾನಭಾರತಿ ಬಳಿಯ ಉಲ್ಲಾಳ ಉಪನಗರದಲ್ಲಿರುವ ಶಾಲೆಯೊಂದು, ತಮ್ಮ ಮಕ್ಕಳನ್ನು ತ್ವರಿತವಾಗಿ ಮನೆಗೆ ಕರೆದುಕೊಂಡು ಹೋಗಬೇಕಾಗಿ ಪಾಲಕರಿಗೆ ಎಸ್ಎಂಎಸ್ ಕಳುಹಿಸಿದೆ. ಶಾಲಾವಾಹನ ಇಲ್ಲದಿದ್ದರೂ ಸ್ವಂತ ವಾಹನದಲ್ಲಿ ಬಂದು ಕರೆದುಕೊಂಡು ಹೋಗಬೇಕಾಗಿ ಮನವಿ ಮಾಡಿಕೊಂಡಿದೆ.
ಜಯನಗರದಲ್ಲಿರುವ ವಿಜಯಾ ಶಾಲೆಗಳ ತರಗತಿಗಳನ್ನೂ ಮೊಟಕುಗೊಳಿಸಿದ್ದರಿಂದ ಪಾಲಕರು ಬಂದು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ವಿಜಯಾ ಪಿಯು ಕಾಲೇಜಿಗೂ ರಜಾ ನೀಡಲಾಗಿದೆ. ಮಧ್ಯಾಹ್ನ 3ರ ಹೊತ್ತಿಗೆ ಬಹುತೇಕ ಎಲ್ಲ ಶಾಲಾಕಾಲೇಜುಗಳ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಲಾಗಿದೆ.
ಮೈಸೂರು ರಸ್ತೆಯಲ್ಲಿ ತಮಿಳುನಾಡು ರಿಜಿಸ್ಟ್ರೇಷನ್ ಇರುವ ಕೆಲ ವಾಹನಗಳಿಗೆ ಬೆಂಕಿ ಹಚ್ಚಿರುವುದರಿಂದ ಅಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆ ರಸ್ತೆಯಲ್ಲಿರುವ ಶಾಲೆಯ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಪಾಲಕರು ಪರದಾಡುತ್ತಿದ್ದಾರೆ.
ಸತತವಾಗಿ ನಡೆಯುತ್ತಿರುವ ಕಾವೇರಿ ಹೋರಾಟ, ಸಾಲುಸಾಲು ಬಂದ್ ಗಳಿಂದ ತರಗತಿಗಳು ಏರುಪೇರಾಗುತ್ತಿರುವುದರಿಂದ ತರಗತಿಗಳನ್ನು ನಡೆಸಲು ಶಾಲೆಗಳು ಹೆಣಗಾಡುತ್ತಿವೆ. ಸಿಬಿಎಸ್ಇ ಶಾಲೆಗಳಲ್ಲಿಯೂ ಶನಿವಾರದಂದು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. [Live : ಮತ್ತೆ ಸುಪ್ರೀಂ ಆದೇಶ ಪ್ರಶ್ನಿಸಿದ ಕರ್ನಾಟಕ]