ಮನೆ ಕೆಲಸದ ನೌಕರಿಗೂ ಅಂಟಿದ ಧರ್ಮಕಾರಣ, ಜಾತಿ ಕಾರಣ!
ಬೆಂಗಳೂರು, ಜ. 10: ನಗರದಲ್ಲಿ ಮನೆಗೆಲಸ ಗಿಟ್ಟಿಸಲು ಜಾತಿ-ಧರ್ಮ ಹಾಗೂ ಭಾಷೆಯೇ ಪ್ರಮುಖ ಮಾನದಂಡ! ಬೆಂಗಳೂರಿನಲ್ಲಿ ಶೇ. 70ರಷ್ಟು ಜನ ಜಾತಿಯ ಆಧಾರದಲ್ಲಿ ಮನೆಗೆಲಸ ಗಿಟ್ಟಿಸಿದ್ದಾರೆ. ಶೇ. 11.3ರಷ್ಟು ಜನರಿಗೆ ಭಾಷೆಯ ಕಾರಣದಿಂದ ಕೆಲಸ ದೊರಕಿಲ್ಲ.
ಇದು ಶ್ರೀ ಅಲಂಪಳ್ಳಿ ವೆಂಕಟರಾಮ ಕಾರ್ಮಿಕರ ಸಂಶೋಧನಾ ಅಧ್ಯಯನ ಪೀಠ ನಡೆಸಿದ ಸಮೀಕ್ಷೆಯ ಸಾರಾಂಶ. ಸಮೀಕ್ಷೆಗಾಗಿ ಸುಮಾರು ಒಂದು ಸಾವಿರ ಮನೆಗೆಲಸಗಾರರನ್ನು ಪ್ರಶ್ನೆಗೊಳಪಡಿಸಿದೆ. [ಸೌದಿಯಿಂದ ಭಾರತೀಯ ಮನೆಗೆಲಸದವರಿಗೆ ಗುಡ್ ನ್ಯೂಸ್]
ಶೇ. 34.2 ರಷ್ಟು ಜನರು ಮೇಲ್ಜಾತಿಯವರಲ್ಲ ಎಂಬ ಕಾರಣದಿಂದ ಮನೆಗೆಲಸದಿಂದ ವಂಚಿತರಾಗಿದ್ದರೆ, ಶೇ. 14.5ರಷ್ಟು ಜನ ಧರ್ಮದ ಕಾರಣದಿಂದ ಮನೆಗೆಲಸದಿಂದ ವಂಚಿತರಾಗಿದ್ದಾರೆ. ಶೇ. 1ರಷ್ಟು ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ.
ಇಷ್ಟೇ ಅಲ್ಲ. ಶೇ. 70ರಷ್ಟು ಕೆಲಸಗಾರರು ಕೂಡ ಮನೆ ಮಾಲೀಕರ ಜಾತಿ ಕುರಿತು ತಿಳಿಯಲು ಆಸಕ್ತರಾಗಿದ್ದಾರೆ. ಇನ್ನು ಶೇ. 15.3ರಷ್ಟು ಜನರಿಗೆ ಈ ಕುರಿತು ಆಸಕ್ತಿ ಇಲ್ಲ. ಕೆಲಸಗಾರರನ್ನು ತೀವ್ರವಾಗಿ ಪರಿಶೀಲನೆ ಮಾಡುವವರ ಸಂಖ್ಯೆ ಶೇ. 84ರಷ್ಟಿದೆ. ಶೇ. 21.5ರಷ್ಟು ಮಾಲೀಕರು ಕೆಲಸಗಾರರನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾರೆ. ಶೇ. 5.8ರಷ್ಟು ಕೆಲಸಗಾರರಿಗೆ ಮಾಲೀಕರ ಮನೆಯಲ್ಲಿ ಆಹಾರ ನೀಡುವುದಿಲ್ಲ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. [ಮನೆಯೊಡತಿಯಿಂದ ಕೆಲಸದಾಕೆಯ ಮಗು ಮಾರಾಟ]
ಕನಿಷ್ಠ ವೇತನ ಜಾರಿಗೊಳಿಸಿ : ಸಮೀಕ್ಷೆಯಲ್ಲಿ ಮನೆಗೆಲಸದವರಿಗೆ ಕನಿಷ್ಠ ಕೂಲಿ ನಿಗದಿಪಡಿಸಬೇಕೆಂದು ಸೂಚಿಸಲಾಗಿದೆ. ಅವರಿಗೆ ಶಿಕ್ಷಣ ಒದಗಿಸಬೇಕು, ವಲಸೆ ಬರುವವರನ್ನು ತಪ್ಪಿಸಬೇಕು, ಮನೆಗೆಲಸದ ಮಹಿಳೆಯ ಪತಿ ಮದ್ಯವ್ಯಸನಿಯಾಗಿದ್ದರೆ ಅದರಿಂದ ಮುಕ್ತಗೊಳಿಸಬೇಕು. [ಈ ಮನೆಗೆಲಸದವರನ್ನು ನೇಮಿಸುವ ಮುನ್ನ ಯೋಚಿಸಿ]
ಸಮೀಕ್ಷೆಯ ವರದಿಯನ್ನು ರಾಜ್ಯಪಾಲ ವಜುಭಾಯಿ ವಾಲಾ ಬಿಡುಗಡೆ ಮಾಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ತಿಮ್ಮೇಗೌಡ, ಸಭಾಪತಿ ಶಂಕರಮೂರ್ತಿ, ಸೀತಮ್ಮ ಇತರರು ಪಾಲ್ಗೊಂಡಿದ್ದರು.