ಜಾತಿ ವ್ಯವಸ್ಥೆ ಇರುವವರೆಗೆ ಜಾತಿ ಸಮಾವೇಶಗಳು ಅನಿವಾರ್ಯ: ಸಿದ್ದರಾಮಯ್ಯ
ಬೆಂಗಳೂರು, ಮೇ 09: ಈ ದೇಶ ಯಾವುದೋ ಒಂದು ಧರ್ಮದ ಆಧಾರದ ಮೇಲೆ ರಚನೆಯಾದ ದೇಶವಲ್ಲ, ಇಲ್ಲಿ ಎಲ್ಲ ಧರ್ಮಗಳನ್ನು ಪ್ರೀತಿಸುವ, ಗೌರವಿಸುವ ಸಹಿಷ್ಣುತೆ ಇರಬೇಕು. ಈ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಕರೆ ನೀಡಿದರು.
ನೆಲಮಂಗಲದ ಕೆಂಪಲಿಂಗನ ಹಳ್ಳಿ ದೇವಾಂಗ ಶಾಖಾಮಠದ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಟ್ರಸ್ಟ್, ರಾಜ್ಯ ದೇವಾಂಗ ಸಂಘ ಆಯೋಜಿಸಿದ್ದ ಶ್ರೀ ದಯಾನಂದಪುರಿ ಸ್ವಾಮೀಜಿಯವರ 33ನೇ ಪೀಠಾರೋಹಣ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಶ್ರೀ ದಯಾನಂದಪುರಿ ಸ್ವಾಮೀಜಿಗಳು ಪೀಠಾಧ್ಯಕ್ಷರಾದ ನಂತರ ಕಳೆದ 32 ವರ್ಷಗಳಿಂದ ದೇವಾಂಗ ಸಮಾಜದ ಅಭಿವೃದ್ಧಿಗೆ ನಿರಂತರ ಕೆಲಸ ಮಾಡಿದ್ದಾರೆ. ಶ್ರೀಗಳು ಅತ್ಯಂತ ಸರಳ ಸ್ವಭಾವದವರು. ಈ ಶ್ರೀಗಳು ಸಮಾಜದ ಬಗೆಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದರು.
ಸಮಾನತೆ ಸ್ಥಾಪನೆಯಾದಾಗ ಶಾಂತಿ
ಸಮಾಜದಲ್ಲಿ ಸಮಾನತೆ ಸ್ಥಾಪನೆಯಾದಾಗ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ನಾಡು ಹಾಗೂ ದೇಶದಲ್ಲಿ ಶಾಂತಿ, ನೆಮ್ಮದಿ, ಮಾನವೀಯತೆ, ಸಾಮಾರಸ್ಯ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಹುಟ್ಟಿದ ಮೇಲೆ ಮನುಷ್ಯರಾಗಿ ಬದುಕುವುದು ಮುಖ್ಯ. ಅದಕ್ಕಾಗಿ ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮವಾವುದಯ್ಯ? ಎಂದಿದ್ದಾರೆ "ಇವನಾರವ, ಇವನಾರವ, ಇವನಾವರ ಎಂದೆಣಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯ, ಎನ್ನ ಮನೆಮಗನೆಂದಿಣಿಸಯ್ಯ ಕೂಡಲ ಸಂಗಮದೇವ" ಎಂದು ಎಂಟೂನೂರ ಐವತ್ತು ವರ್ಷಗಳ ಹಿಂದೆ ಬಸವೇಶ್ವರರು ಹೇಳಿದ್ದರು. ಆದರೆ ಜಾತಿ ವ್ಯವಸ್ಥೆ ಇಂದು ಮತ್ತಷ್ಟು ಆಳವಾಗಿ ಬೇರು ಬಿಟ್ಟಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಹಕ್ಕುಗಳಿಗಾಗಿ ಸಮಾವೇಶ
ಜಾತಿ ವ್ಯವಸ್ಥೆ ಇರುವವರೆಗೆ ಅವಕಾಶಗಳಿಂದ ವಂಚಿತವಾದ ಜಾತಿಗಳು, ಶೋಷಿತ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಸಮಾವೇಶವನ್ನು ಮಾಡುವುದು ಅನಿವಾರ್ಯ ಮತ್ತು ನ್ಯಾಯಯುತವಾದುದ್ದು. ಶೋಷಿತ ಜನರು ನಡೆಸುವ ಜಾತಿ ಸಮಾವೇಶಗಳು ಜಾತೀವಾದವಲ್ಲ ಎಂದು ಲೋಹಿಯಾ ಹೇಳಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಜನರಿಗಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರಗಳನ್ನು ನೀಡಿದ್ದಾರೆ. ಇವುಗಳನ್ನು ಪಾಲಿಸಿದರೆ ಜಾತಿ ವ್ಯವಸ್ಥೆಯ ನಿರ್ಮೂಲನೆ ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜಕೀಯ, ಸಾಮಾಜಿಕ ಹಕ್ಕುಗಳ ಸಮಾನ ಹಂಚಿಕೆಯಾಗಲಿ
ಶೋಷಿತ ಜನರಿಗೆ ಮತ ಚಲಾಯಿಸುವ ಹಕ್ಕು ಸಿಕ್ಕರೆ ಸಾಲದು ಅಧಿಕಾರವೂ ಸಿಗಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು, ಸಮಾಜದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಹಕ್ಕುಗಳು ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಸಮಾನತೆ ಸಾಧ್ಯ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದರು. ಕಾಯಕವೇ ಕೈಲಾಸ ಎಂದು ಬಸವಾದಿ ಶರಣರು ಹೇಳಿದ್ದರು. ಮನುಷ್ಯತ್ವ, ಮನುಷ್ಯ ಸಂಬಂಧಗಳು ಮುಖ್ಯ. ಕಾಯಿಲೆ ಬಿದ್ದಾಗ ಯಾರ ರಕ್ತ ಆದರೂ ಕೊಡಿ ಬದುಕಿದ್ರೆ ಸಾಕು ಎಂದು ಪಡೆದು, ಬದುಕಿದ ಮೇಲೆ ಜಾತಿ, ಧರ್ಮ ಎಂದು ಸ್ವಾರ್ಥಿಗಳಾದರೆ ಹೇಗೆ? ಸಮಾಜಕ್ಕಾಗಿ ಬದುಕುವ ಸ್ವಾಮೀಜಿಗಳನ್ನು ನಾವು ಇದೇ ಕಾರಣಕ್ಕೆ ಗೌರವಿಸುವುದು. ಅವರದು ನಿಸ್ವಾರ್ಥ ಬದುಕು ಎಂದರು.
ಹತ್ತು ಸಾವಿರ ಕೊಡಿ ಎಂದು ಮುಖ್ಯಮಂತ್ರಿಗೆ ಹೇಳಿದೆ
ಕೋರೊನಾ ಕಾಲದಲ್ಲಿ ನೇಕಾರರು, ರಿಕ್ಷಾ ಚಾಲಕರು, ಸವಿತಾ ಸಮಾಜದವರು, ಚಾಲಕರು ಮುಂತಾದ ಜನ ಕಷ್ಟದಲ್ಲಿದ್ದಾರೆ. ಅವರಿಗೆ ತಲಾ ಹತ್ತು ಸಾವಿರ ಕೊಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದೆ. ಆದರೆ, ಅವರು ನನ್ನ ಮನವಿಯನ್ನು ಪುರಸ್ಕರಿಸಿಲ್ಲ, ಕೋವಿಡ್ ಲಾಕ್ಡೌನ್ ವೇಳೆ ಅಗತ್ಯ ವಸ್ತುಗಳ ಬೆಲೆ, ಕಚ್ಚಾ ಸಾಮಾಗ್ರಿ ಬೆಲೆ ಜಾಸ್ತಿಯಾಗಿ, ಉದ್ಯೋಗ ಇಲ್ಲದೆ 36 ಜನ ನೇಕಾರರು ಆತ್ಮಹತ್ಯೆಗೆ ಶರಣಾದರು. ಬಹಳ ನೋವಿನ ವಿಚಾರವಿದು.
ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ನಿಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದು, ನಿಮ್ಮ ಬದುಕಿಗೆ ಘನತೆ ತಂದು ಕೊಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಮ್ಮ ಭಾವನೆಯನ್ನು ಹಂಚಿಕೊಂಡರು.
Recommended Video