ಯಡಿಯೂರಪ್ಪ ಸಂಪುಟದಲ್ಲಿ ಯಾವ ಜಾತಿಯ ಶಾಸಕರಿಗೆ ಸ್ಥಾನ?
Recommended Video
ಬೆಂಗಳೂರು, ಆಗಸ್ಟ್ 20: ನಿರೀಕ್ಷೆಯಂತೆಯೇ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಪಟ್ಟಿ ಹೊರಬರುತ್ತಿದ್ದಂತೆಯೇ ವಿವಿಧ ಬಗೆಯ ಅಸಮಾಧಾನಗಳು ಹೊರಬರತೊಡಗಿವೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನೇಕ ಶಾಸಕರು ಬೇಸರ, ಸಿಟ್ಟು ವ್ಯಕ್ತಪಡಿಸಲು ಆರಂಭಿಸಿದ್ದಾರೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಸಂಪುಟ ವಿಸ್ತರಣೆಯ ಲೆಕ್ಕಾಚಾರವನ್ನು ಜಾತಿ, ಉಪಜಾತಿ, ಜಿಲ್ಲೆ, ಪ್ರಾದೇಶಿಕ ವ್ಯಾಪ್ತಿ, ಅನುಭವ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತದೆ. ಜತೆಗೆ ಯಾವ ಜಿಲ್ಲೆಯಿಂದ ಎಷ್ಟು ಮತ್ತು ಯಾವ ಜಾತಿಯಿಂದ ಎಷ್ಟು ಶಾಸಕರು ಆಯ್ಕೆಯಾಗಿದ್ದಾರೆ ಎನ್ನುವುದು ಸಹ ಮುಖ್ಯ. ಎಲ್ಲ ಪ್ರದೇಶಗಳ, ಜಿಲ್ಲೆಗಳ, ಜಾತಿಗಳ ಜನಪ್ರತಿನಿಧಿಗಳಿಗೆ ಅವಕಾಶ ನೀಡಿದಂತೆ ಆಗಬೇಕು ಎನ್ನುವುದು ಇದರ ಉದ್ದೇಶ.
ಯಡಿಯೂರಪ್ಪ ಸಂಪುಟ : ಬೆಂಗಳೂರು ನಗರಕ್ಕೆ 4 ಸಚಿವ ಸ್ಥಾನ
ಯಡಿಯೂರಪ್ಪ ಅವರ ಸರ್ಕಾರದಲ್ಲಿನ ಸಚಿವ ಸಂಪುಟದ ಮೊದಲ ಪಟ್ಟಿ ಕೂಡ ಈ ಲೆಕ್ಕಾಚಾರದ ಕುರಿತು ಚರ್ಚೆ ಹುಟ್ಟುಹಾಕಿದೆ. ಇದರ ಆಧಾರದಲ್ಲಿಯೇ ಅಸಮಾಧಾನಗಳು ಕೂಡ ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿನ ಜಾತಿ ಆಧಾರಿತ ಲೆಕ್ಕಾಚಾರ ಇಲ್ಲಿದೆ.
ಎಂಟು ಮಂದಿ ಲಿಂಗಾಯತರು
ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟದಲ್ಲಿ ಎಂಟು ಮಂದಿ ಸೇರ್ಪಡೆಯಾಗಿದ್ದಾರೆ. ಮೊದಲ ಪಟ್ಟಿಯಲ್ಲಿ ಏಳು ಮಂದಿ ಲಿಂಗಾಯತರಿಗೆ ಆದ್ಯತೆ ನೀಡಲಾಗಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ ಮತ್ತು ಶಶಿಕಲಾ ಜೊಲ್ಲೆ ಸಂಪುಟ ಸೇರಿದ ಲಿಂಗಾಯತರಾಗಿದ್ದಾರೆ. ಶೇ 44ರಷ್ಟು ಶಾಸಕರು ಲಿಂಗಾಯತರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ, ಹೈದರಾಬಾದ್ ಕರ್ನಾಟಕ ಭಾಗದಿಂದ ಯಾವ ಲಿಂಗಾಯತರಿಗೂ ಸಚಿವ ಸ್ಥಾನ ದೊರಕಿಲ್ಲ.
ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಒಲಿದು ಬಂದ ಸಚಿವ ಸ್ಥಾನ!
ಮೂವರು ಒಕ್ಕಲಿಗರು
ಲಿಂಗಾಯತರ ಬಳಿಕ ಒಕ್ಕಲಿಗ ಶಾಸಕರಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ. ಮೂವರು ಒಕ್ಕಲಿಗ ಶಾಸಕರು ಯಡಿಯೂರಪ್ಪ ಸಂಪುಟ ಸೇರಿದ್ದಾರೆ. ಮಲ್ಲೇಶ್ವರಂ ಶಾಸಕ ಸಿಎನ್ ಅಶ್ವತ್ಥ ನಾರಾಯಣ, ಪದ್ಮನಾಭ ನಗರ ಶಾಸಕ ಆರ್. ಅಶೋಕ, ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರಿಗೆ ಅವಕಾಶ ನೀಡಲಾಗಿದೆ.
ಬೇರೆ ಸಮುದಾಯಗಳಿಗೆ ಒಂದೊಂದು ಸ್ಥಾನ
ದಲಿತ ಸಮುದಾಯದ ಇಬ್ಬರಿಗೆ ಸಂಪುಟದಲ್ಲಿ ಜಾಗ ನೀಡಲಾಗಿದೆ. ಮುಧೋಳ ಶಾಸಕ ಗೋವಿಂದ ಕಾರಜೋಳ ಮತ್ತು ಮುಳಬಾಗಿಲಿನ ಪಕ್ಷೇತರ ಶಾಸಕ ಸಂಪುಟದಲ್ಲಿ ದಲಿತ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಕುರುಬ ಸಮುದಾಯದಿಂದ ಕೆ.ಎಸ್. ಈಶ್ವರಪ್ಪ, ವಾಲ್ಮೀಕಿ ಸಮುದಾಯದಿಂದ ಶ್ರೀರಾಮುಲು, ಬ್ರಾಹ್ಮಣ ಸಮುದಾಯದಿಂದ ಸುರೇಶ್ ಕುಮಾರ್, ಬಿಲ್ಲವ ಸಮುದಾಯದಿಂದ ಕೋಟಾ ಶ್ರೀನಿವಾಸ ಪೂಜಾರಿ, ಲಂಬಾಣಿ ಸಮುದಾಯದಿಂದ ಪ್ರಭು ಚೌಹಾಣ್ ಸ್ಥಾನ ಪಡೆದಿದ್ದಾರೆ.
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರು ಯಾರಿದ್ದಾರೆ? ಸಂಪೂರ್ಣ ಪಟ್ಟಿ
ಕರಾವಳಿಗೆ ಸಿಗದ ಆದ್ಯತೆ
ಬಿಜೆಪಿಗೆ ಅಧಿಕ ಸೀಟುಗಳನ್ನು ಗೆದ್ದುಕೊಟ್ಟಿರುವ ಕರಾವಳಿಯ ಜಿಲ್ಲೆಗಳಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ಸಿಕ್ಕಿಲ್ಲ. ಈ ಭಾಗದಿಂದ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಅದೂ ವಿಧಾನಪರಿಷತ್ ಸದಸ್ಯರಾಗಿರುವ ಕೋಟಾ ಶ್ರೀನಿವಾಸಪೂಜಾರಿ ಅವರಿಗೆ ಮಾತ್ರ. ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಅವರ ಹೊರತು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಯಾರಿಗೂ ಅವಕಾಶ ದೊರಕಿಲ್ಲ. ಹಳೆ ಮೈಸೂರು ಭಾಗದಲ್ಲಿ ಎಂಟು ಶಾಸಕರಿದ್ದು, ಅವರಿಗೆ ಕೂಡ ಸಚಿವ ಸ್ಥಾನ ಸಿಕ್ಕಿಲ್ಲ.