ಯಡಿಯೂರಪ್ಪ ವಿರುದ್ಧ ಪ್ರಕರಣ: ನವೆಂಬರ್ 7 ಕ್ಕೆ ವಿಚಾರಣೆ
ಬೆಂಗಳೂರು, ಅಕ್ಟೋಬರ್ 26: ಸಿಎಂ ಯಡಿಯೂರಪ್ಪ ವಿರುದ್ಧ ಯುವ ಜೆಡಿಎಸ್ನ ಪ್ರಧಾನ ಕಾರ್ಯದರ್ಶಿ ಶರಣಗೌಡ ಕುಂದಕೂರ ದಾಖಲಿಸಿದ್ದ ಪ್ರಕರಣದ ವಿಚಾರಣೆ ನವೆಂಬರ್ 7 ಕ್ಕೆ ಮುಂದೂಡಲಾಗಿದೆ.
ಬಿಜೆಪಿ ಅಧ್ಯಕ್ಷರಾಗಿದ್ದಾಗ ಯಡಿಯೂರಪ್ಪ ಅವರು ಆಪರೇಷನ್ ಕಮಲಕ್ಕೆ ಯತ್ನಿಸಿ ಗುರ್ಮಿಟ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಕುಂದಕೂರು ಅವರನ್ನು ಬಿಜೆಪಿಗೆ ಸೆಳೆಯಲು ಅವರ ಪುತ್ರ ಶರಣಗೌಡ ಕುಂದಕೂರು ಅವರಿಗೆ ಕೋಟ್ಯಂತರ ರೂಪಾಯಿ ಹಣದ ಆಮಿಷ ಒಡ್ಡಿದ್ದರು. ಈ ಬಗ್ಗೆ ಆಡಿಯೋ ಸಹ ಬಿಡುಗಡೆ ಆಗಿತ್ತು.
ತಮಗೆ ಹಣದ ಆಮಿಷ ಒಡ್ಡಿದ ಯಡಿಯೂರಪ್ಪ ವಿರುದ್ಧ ಶರಣಗೌಡ ಕುಂದಕೂರು ಅವರು ದೂರು ದಾಖಲಿಸಿದ್ದರು. ಆದರೆ ನಂತರ ಯಡಿಯೂರಪ್ಪ ವಿರುದ್ಧ ಎಫ್ಐಆರ್ ಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ಎಫ್ಐಆರ್ ಗೆ ನೀಡಿರುವ ತಡೆಯನ್ನು ತೆಗೆದು ಪ್ರಕರಣದ ವಿಚಾರಣೆ ಮುಂದುವರೆಸಬೇಕು ಎಂದು ಶರಣಗೌಡ ಕುಂದಕೂರು ಹೈಕೋರ್ಟ್ ಮೆಟ್ಟಲೇರಿದ್ದರು. ಪ್ರಕರಣವನ್ನು ಹೈಕೋರ್ಟ್ನ ಕಲಬುರ್ಗಿ ಪೀಠದಲ್ಲಿ ನವೆಬರ್ 7 ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಲಾಗಿದೆ.
ಇದೇ ಪ್ರಕರಣದಲ್ಲಿ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ, ಶಾಸಕ ಶಿವನಗೌಡ ನಾಯಕ, ಯಡಿಯೂರಪ್ಪ ಆಪ್ತ ಎಂ.ಬಿ.ಮರಮಕಲ್ ವಿರುದ್ಧವೂ ಶರಣಗೌಡ ಕಂದಕೂರು ಪ್ರಕರಣ ದಾಖಲಿಸಿದ್ದರು.
ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಯಡಿಯೂರಪ್ಪ ಅವರು ಬಿಜೆಪಿ ಶಾಸಕರ ಜೊತೆ ಸೇರಿ ಶರಣಗೌಡ ಕಂದಕೂರು ಅವರನ್ನು ಭೇಟಿಯಾಗಿ ಅವರ ತಂದೆಯಾದ ಶಾಸಕ ನಾಗನಗೌಡ ಕಂದಕೂರು ಅವರನ್ನು ಬಿಜೆಪಿಗೆ ಸೇರಿಸುವಂತೆ ಮನವಿ ಮಾಡಿದ್ದರು. ಶರಣಗೌಡ ಅವರಿಗೆ ಹತ್ತು ಕೋಟಿ ಹಣದ ಆಮಿಷವನ್ನು ಒಡ್ಡಲಾಗಿತ್ತು.