ಖಾದರ್ ವಿರುದ್ದ ಪ್ರಕರಣ ದಾಖಲು, ರಾಜಕೀಯ ಮಾಡಲ್ಲ: ಸಿಎಂ
ಬೆಂಗಳೂರು, ಡಿಸೆಂಬರ್ 22: ಮಾಜಿ ಸಚಿವ ಯು.ಟಿ.ಖಾದರ್ ಅವರ ವಿರುದ್ದ ಪ್ರಕರಣ ದಾಖಲಾಗಿರುವ ಬಗ್ಗೆ, ಇದರಲ್ಲಿ ಸರ್ಕಾರ ರಾಜಕೀಯ ಮಾಡಲು ಹೋಗಲ್ಲ, ಎಲ್ಲವನ್ನೂ ಸ್ಥಳೀಯ ಆಡಳಿತಕ್ಕೆ ಬಿಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಲ್ಲಿ ಪ್ರತಿಭಟನೆ ಮಾಡುತ್ತಿದ್ದ ವೇಳೆಯಲ್ಲಿ ಗೋಲಿಬಾರ್ ಗೆ ಬಲಿಯಾದ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂ, ಪರಿಹಾರ ಘೋಷಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿ ಮಾತನಾಡಿದರು,
ಮಂಗಳೂರು ಗೋಲಿಬಾರ್; ಮೃತಪಟ್ಟವರಿಗೆ 10 ಲಕ್ಷ ಪರಿಹಾರ
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ, ಮುಂದಿನ ತಿಂಗಳ ಸಂಕ್ರಮಣಕ್ಕೆ ಸಿಹಿ ಸುದ್ದಿ ನೀಡುತ್ತೇವೆ, ಇದೇ ತಿಂಗಳ ಕೊನೆಯಲ್ಲಿ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಮಂಗಳೂರಿಗೆ ಯಾವ ನಾಯಕರಾದರೂ ಹೋಗಲಿ, ಬೇಡ ಅನ್ನಲ್ಲ. ಈ ಗಲಭೆ ವೇಳೆಯಲ್ಲಿ ಹೋಗಿ ಪರಿಸ್ಥಿತಿ ಹದಗೇಡಿಸುವುದು ಬೇಡ ಎಂದರು. ಈ ಗಲಭೆಯ ಹೋರಾಟದ ನೇತೃತ್ವ ವಹಹಿಸುತ್ತೇನೆ ಅಂತಾ ಖುದ್ದು ಸೋನಿಯಾ ಗಾಂಧಿಯವರೇ ಹೇಳಿದ್ದಾರೆ ಇದು ಪ್ರಧಾನಿಯವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಕೆಟ್ಟ ಅಭಿಪ್ರಾಯ ಮೂಡಸೋ ಯತ್ನ ನಡೆದಿದೆ ಎಂದರು.
ಇದೇ ಸಂದರ್ಭದಲ್ಲಿ ಕಳಸಾ ಬಂಡೂರಿ ವಿಚಾರದ ಬಗ್ಗೆಯೂ ಮಾತನಾಡಿದ ಯಡಿಯೂರಪ್ಪ, ಕೇಂದ್ರದ ನೀರಾವರಿ ಸಚಿವರೊಂದಿಗೆ ಮಾತನಾಡಿದ್ದೇನೆ. ಶೀಘ್ರವೇ ಕೇಂದ್ರ ಗೃಹ ಸಚಿವರು ಹಾಗೂ ಜಲ ಸಂಪನ್ಮೂಲ ಸಚಿವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.