ಜೊಮ್ಯಾಟೋ ಪ್ರಕರಣ: ಆರೋಪ ಮಾಡಿದ್ದ ಯುವತಿ ಮೇಲೆ ಬಿತ್ತು ಕೇಸ್
ಬೆಂಗಳೂರು, ಮಾರ್ಚ್ 15: ಆಹಾರ ಡೆಲಿವರಿ ವಿಳಂಬವಾಗಿದ್ದನ್ನು ಪ್ರಶ್ನಿಸಿದ ಯುವತಿ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದರು ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ವಿರುದ್ಧ ದೂರು ದಾಖಲಿಸಲಾಗಿದೆ.
ನಗರದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಆರೋಪ ಮಾಡಿದ್ದ ಹಿತೇಶಾ ಚಂದ್ರಾನಿ ವಿರುದ್ಧ ಜೊಮ್ಯಾಟೋ ಡೆಲಿವರ್ ಬಾಯ್ ಕಾಮರಾಜ್ ದೂರು ದಾಖಲಿಸಿದ್ದಾರೆ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ನೇತೃತ್ವದಲ್ಲಿ ದೂರು ದಾಖಲಿಸಲಾಗಿದೆ. ವಕೀಲ ವಿಕ್ರಂ ಅವರು ಎಫ್ಐಆರ್ ದಾಖಲಿಸಲು ಕಾಮರಾಜ್ಗೆ ನೆರವಾಗಿದ್ದಾರೆ.
ಯುವತಿ ಮೇಲೆ ಹಲ್ಲೆ: ಜೊಮ್ಯಾಟೋ ಡೆಲಿವರಿ ಬಾಯ್ ಹೇಳಿದ್ದೇನು?
ಮಾರ್ಚ್ 9ರ ಮಧ್ಯಾಹ್ನ ಈ ಘಟನೆ ನಡೆದಿತ್ತು. ಆಹಾರ ಆರ್ಡರ್ ಮಾಡಿ ತುಂಬಾ ಸಮಯವಾದರೂ ಡೆಲಿವರಿ ಆಗಿರಲಿಲ್ಲ. ಆರ್ಡರ್ ಕ್ಯಾನ್ಸಲ್ ಮಾಡುವುದಕ್ಕಾಗಿ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡುವ ವೇಳೆ ಡೆಲಿವರಿ ಬಾಯ್ ಕಾಮರಾಜ್ ಮನೆಗೆ ಬಂದಿದ್ದ. ತಡವಾಗಿದ್ದರಿಂದ ಕೋಪಗೊಂಡಿದ್ದ ನಾನು ಜೊಮ್ಯಾಟೊದಿಂದ ಕರೆ ಬರುವವರೆಗೂ ಇಲ್ಲಿಯೇ ಇರಿ ಎಂದಿದ್ದಕ್ಕೆ ಆತ ಕೋಪದಿಂದ ಹಲ್ಲೆ ನಡೆಸಿದ್ದ ಎಂದು ಹಿತೇಶಾ ಚಂದ್ರಾನಿ ಎಂಬ ಯುವತಿ ಆರೋಪಿಸಿದ್ದಳು. ಆನಂತರ ಪ್ರಕರಣ ಬೇರೆಯದ್ದೇ ಆಯಾಮ ಪಡೆದುಕೊಂಡಿತ್ತು. ಯುವತಿಯೇ ಕಾಮರಾಜ್ ಮೇಲೆ ಚಪ್ಪಲಿ ಎಸೆದು ಹಲ್ಲೆ ನಡೆಸಿದ್ದಳು ಎಂಬ ಆರೋಪ ಕೇಳಿಬಂದಿತ್ತು. ಇದೀಗ ಯುವತಿ ಮೇಲೆ ದೂರು ದಾಖಲಾಗಿದೆ. ಮುಂದೆ ಓದಿ...
ವಿಡಿಯೋ ಮಾಡಿ ಹಲ್ಲೆ ಆರೋಪ ಮಾಡಿದ್ದ ಯುವತಿ
ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ವಿರುದ್ಧ ಯುವತಿ ಹಿತೇಶಾ ಚಂದ್ರಾನಿ ವಿಡಿಯೋ ಮಾಡಿ ಹಲ್ಲೆ ಆರೋಪ ಮಾಡಿದ್ದರು. ಮೂಗಿನ ಮೇಲೆ ರಕ್ತ ಸುರಿಯುತ್ತಿದ್ದು, ಅಳುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಹಲವರು ಯುವತಿ ಪರ ದನಿ ಎತ್ತಿದ್ದರು. ನಂತರ ನಗರ ಪೊಲೀಸರು ಕಾಮರಾಜ್ನನ್ನು ಬಂಧಿಸಿದ್ದರು. ಜೊಮ್ಯಾಟೋ ಕೂಡ ಕಾಮರಾಜ್ನನ್ನು ಅಮಾನತು ಮಾಡಿತ್ತು.
ಈ ಪ್ರಕರಣದಲ್ಲಿ ತಾನು ಮುಗ್ಧ ಎಂದಿದ್ದ ಕಾಮರಾಜ್
ಆನಂತರ ಹೇಳಿಕೆ ನೀಡಿದ್ದ ಕಾಮರಾಜ್, ಹಿತೇಶಾ ಆರೋಪಿಸಿರುವಂತೆ ತಾನು ಅವರ ಮೇಲೆ ಹಲ್ಲೆ ನಡೆಸಿಲ್ಲ. ಹಿತೇಶಾ ಅವರೇ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದಿದ್ದರು ಎಂದಿದ್ದರು. ನಾನು ಆಹಾರ ಡೆಲಿವರಿ ತಡವಾಗಿದ್ದಕ್ಕೆ ಕ್ಷಮೆ ಕೇಳಿದೆ. ಆದರೆ ಅವರು ಬಹಳ ಒರಟಾಗಿ ವರ್ತಿಸಿದರು. ಹಣ ನೀಡಲು ನಿರಾಕರಿಸಿದರು. ನಾನು ಹಣ ನೀಡುವಂತೆ ಬೇಡಿಕೊಂಡೆ. ಆಗ 'ಗುಲಾಮ' ಎಂದು ನನ್ನನ್ನು ಹೀಯಾಳಿಸಿದರು. ಜೊಮ್ಯಾಟೋ ಸಪೋರ್ಟ್ ಕಡೆಯಿಂದ ನನಗೆ ಫೋನ್ ಬಂತು. ಆಕೆ ತಮ್ಮ ಕಡೆಯಿಂದ ಆರ್ಡರ್ ರದ್ದು ಮಾಡಿದ್ದಾರೆ ಎಂದು. ಹೀಗಾಗಿ ಆಹಾರದ ಪ್ಯಾಕೆಟ್ ವಾಪಸ್ ನೀಡುವಂತೆ ಕೋರಿದೆ. ಆದರೆ ಅವರು ಅದಕ್ಕೆ ಸಹಕರಿಸಲಿಲ್ಲ. ವಾಪಸ್ ಅಲ್ಲಿಂದ ಹೊರಡುವಾಗ ಇದ್ದಕ್ಕಿದ್ದಂತೆ ನನ್ನ ಕಡೆಗೆ ಚಪ್ಪಲಿ ಎಸೆದು ನನಗೆ ಹೊಡೆಯತೊಡಗಿದರು. ಅವರ ಹೊಡೆತದಿಂದ ತಪ್ಪಿಸಿಕೊಳ್ಳಲು ನನ್ನ ಕೈಗಳನ್ನು ಅಡ್ಡಹಿಡಿದೆ. ನನ್ನ ಕೈಗಳನ್ನು ತಳ್ಳಲು ಅವರು ಪ್ರಯತ್ನಿಸಿದಾಗ ಆಕೆಯ ಕೈಯಲ್ಲಿದ್ದ ಉಂಗುರ ಆಕಸ್ಮಿಕವಾಗಿ ಅವರ ಮೂಗಿಗೆ ತಾಗಿ ರಕ್ತ ಸುರಿಯಲು ಶುರುವಾಯ್ತು ಎಂದು ಹೇಳಿದ್ದರು.
ಡೆಲಿವರಿ ಬಾಯ್ನಿಂದ ಯುವತಿ ಮೇಲೆ ಹಲ್ಲೆ: ಯಾರದ್ದು ಸರಿ, ಯಾರದ್ದು ತಪ್ಪು?
ಸಾಮಾಜಿಕ ಜಾಲತಾಣದಲ್ಲಿ ಕಾಮರಾಜ್ ಪರ ಅಭಿಯಾನ
ಈ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದ್ದವು. ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಪರ ಅಭಿಯಾನವೂ ಆರಂಭಗೊಂಡಿತ್ತು. ಅವರನ್ನು ಕೆಲಸದಿಂದ ವಜಾ ಮಾಡಿದ್ದರ ವಿರುದ್ಧ ಜೊಮ್ಯಾಟೊ ವಿರುದ್ಧವೂ ಅಭಿಯಾನ ನಡೆಸಲಾಗಿತ್ತು. ಜೊಮ್ಯಾಟೋ ಮತ್ತೆ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು.
Recommended Video
"ನ್ಯಾಯಕ್ಕಷ್ಟೇ ಬೆಂಬಲ ನೀಡಿ"
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಮರಾಜ್, ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಹಿತೇಶಾ ಚಂದ್ರಾನಿ ವಿರುದ್ಧ ದೂರು ದಾಖಲಿಸಿದ್ದಾರೆ. ಸುಳ್ಳು ಆರೋಪ ಮಾಡಿ ತಮ್ಮನ್ನು ಈ ಸ್ಥಿತಿಗೆ ತಂದಿದ್ದಾರೆ. ನನಗೂ ಬೆಂಬಲ ನೀಡಬೇಡಿ, ಹಿತೇಶಾ ಅವರಿಗೂ ಬೆಂಬಲ ನೀಡಬೇಡಿ. ನ್ಯಾಯಕ್ಕಷ್ಟೇ ಬೆಂಬಲ ನೀಡಿ ಎಂದು ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.