ಬಿಜೆಪಿ ಸರ್ಕಾರ ರಚನೆ ವಿಳಂಬ : ಎಚ್ಡಿಕೆ - ರಾಮಲಿಂಗಾರೆಡ್ಡಿ ಮಹತ್ವದ ಭೇಟಿ
ಬೆಂಗಳೂರು, ಜುಲೈ 25: ಬೆಂಗಳೂರಿನ ಕೆಲ ಶಾಸಕರು ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸಿಗ ರಾಮಲಿಂಗಾರೆಡ್ಡಿಯವರನ್ನು ಹಂಗಾಮಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಈ ಅತೃಪ್ತ ಶಾಸಕರನ್ನು ಹಿಂದೆ ಕರೆತರಲು ಸಾಧ್ಯವೇ, ಬಿಜೆಪಿಗೆ ಬೆಂಬಲ ನೀಡದಿರಲು ಅವರನ್ನು ತಡೆಯಬಹುದೇ ಎಂಬ ಬಗ್ಗೆ ರಾಮಲಿಂಗಾರೆಡ್ಡಿ ಜೊತೆ ಕುಮಾರಸ್ವಾಮಿ ಚರ್ಚಿಸಿದ್ದು, ಈ ಮೂಲಕ ಬಿಜೆಪಿ ಸರ್ಕಾರ ರಚನೆಯಾಗದಂತೆ ರಣತಂತ್ರ ರೂಪಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದೇವೇಗೌಡರನ್ನು ಭೇಟಿ ಮಾಡಿದ ರಾಮಲಿಂಗಾ ರೆಡ್ಡಿ: ಗುಪ್ತ್ ಗುಪ್ತ್ ಚರ್ಚೆ
ಈ ಹಿಂದೆ ಈ ಅತೃಪ್ತ ಶಾಸಕರೊಂದಿಗೆ ರಾಮಲಿಂಗಾರೆಡ್ಡಿ ಕೂಡ ಸೇರಿಕೊಂಡಿದ್ದರು. ಆದರೆ ಕಾಂಗ್ರೆಸ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ , ಸಿದ್ದರಾಮಯ್ಯ ಸೇರಿ ಇತರೆ ನಾಯಕರು ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆ ಮಧ್ಯಸ್ಥಿಕೆ ವಹಿಸಿ ಚರ್ಚೆ ನಡೆಸಿದ ಬಳಿಕ ರಾಮಲಿಂಗಾರೆಡ್ಡಿ ಅತೃಪ್ತ ಗುಂಪಿನಿಂದ ಹೊರಬಂದಿದ್ದರು.
ಹಾಗೆಯೇ ಮೊನ್ನೆ ನಡೆದ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿಯೂ ಕುಮಾರಸ್ವಾಮಿ ಪರವಾಗಿ ಮತ ಯಾಚಿಸಿದ್ದರು.ಈ ಹಿನ್ನೆಲೆಯಲ್ಲಿ ಅತೃಪ್ತರ ಮನವೊಲಿಸಲು ಸಾಧ್ಯವೇ ಎನ್ನುವುದನ್ನು ಸರ್ಕಾರ ಬಿದ್ದ ಬಳಿಕವೂ ಕುಮಾರಸ್ವಾಮಿ ಮುಂದುವರೆಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಎಬ್ಬಿಸಿದೆ.
ಇನ್ನೊಂದೆಡೆ ನಾವು ಯಾವ ಬಿಜೆಪಿ ನಾಯಕರ ಜೊತೆ ಸಂಪರ್ಕವಿಲ್ಲ. ಸದ್ಯ ರಾಜ್ಯದಲ್ಲಿ ಆಗುತ್ತಿರುವ ಬಿಜೆಪಿ ಸರ್ಕಾರ ರಚನೆಯ ಬೆಳವಣಿಗೆಗೆ ನಮಗೆ ಯಾವುದೇ ಸಂಬಂಧ ಇಲ್ಲ. ನಾವು ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇವೆ. ಇಂದಿಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ನಾನು ರಾಜೀನಾಮೆಯನ್ನು ಮೊನ್ನೆಯೇ ವಾಪಸ್ ಪಡೆದಿದ್ದೇನೆ: ರಾಮಲಿಂಗಾರೆಡ್ಡಿ
ಶಾಸಕ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ರಾಜೀನಾಮೆ ಅಂಗೀಕಾರ ಬಳಿಕ ಎಲ್ಲರೂ ಒಟ್ಟಿಗೆ ಸೇರಿ ತೀರ್ಮಾನ ಮಾಡುತ್ತೇವೆ. ಸ್ಪೀಕರ್ ಅವರಿಗೆ ಮನವಿ ಮಾಡಿದ್ದು, ಅವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಮ್ಮ ಮುಂದಿನ ತೀರ್ಮಾನ ಇರುತ್ತದೆ ಎಂದು ಹೇಳಿದರು.