ಹಳದಿ, ಕೆಂಪು ಬದಲು ತ್ರಿವರ್ಣ ಧ್ವಜ: ಕನ್ನಡಪರರ ಆಕ್ರೋಶ
ಬೆಂಗಳೂರು, ಫೆಬ್ರವರಿ 07 : ಸರಕಾರದ ನೂತನ ಕನ್ನಡ ಧ್ವಜ ವಿರೋಧಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಒಂದು ಲಕ್ಷ ಮಂದಿ ಹಳದಿ ಕೆಂಪು ಬಾವುಟ ಹಿಡಿದು ಮೆರವಣಿಗೆ ನಡೆಸುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ರಾಜ್ಯದ ಜನಮಾನಸದಲ್ಲಿ ಮನೆ ಮಾಡಿರುವ ಹಳದಿ-ಕೆಂಪು ಧ್ವಜವನ್ನು ಬದಲಿಸಿ ಮೂರು ಬಣ್ಣಗಳ ಧ್ವಜ ರೂಪಿಸಲುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಕನ್ನಡ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಧ್ವಜವನ್ನೇ ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾದರೆ ನಾಡಿನಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೊಸ ಬಾವುಟ ಜಾರಿಗೆ ತಂದರೆ ದಂಗೆ ಏಳಬೇಕಾಗುತ್ತದೆ. ಕೆಂಪು ಹಳದಿ ಬಾವುಟವೇ ಅಂತಿಮ. ಸಮಿತಿ ಕೊಟ್ಟಿರುವ ಮೂರು ಬಣ್ಣದ ಬಾವುಟ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಾಟಾಳ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಹಳದಿ ಕೆಂಪು ಬಾವುಟ ಬದಲಿಸುವ ಯಾವ ಪ್ರಯತ್ನವನ್ನು ಒಪ್ಪಿಕೊಳ್ಳುವುದಿಲ್ಲ. ಬೇರೆ ಬಣ್ಣಗಳನ್ನು ಈ ಧ್ವಜಕ್ಕೆ ಸೇರಿಸುವುದಕ್ಕೆ ಕನ್ನಡಿಗರ ಒಪ್ಪಿಗೆ ಇಲ್ಲ. ಅಂತಹ ಪ್ರಯತ್ನ ನಡೆದರೆ ಸರ್ಕಾರದ ಮೇಲ ಎಒತ್ತಡ ಹಾಕಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.