ಅಭ್ಯರ್ಥಿಗಳು ಕುಟುಂಬದವರ ವಿರುದ್ಧ ಕೇಸ್ ಇದ್ದರೂ ಬಹಿರಂಗಪಡಿಸುವುದು ಕಡ್ಡಾಯ
ಬೆಂಗಳೂರು, ಮಾರ್ಚ್ 20: ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ ಈ ಕುರಿತು ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಅವರ ಸಮ್ಮುಖದಲ್ಲಿ ಸಭೆ ನಡೆದಿದ್ದು ಕೆಲವು ನಿರ್ದೇಶನಗಳನ್ನು ನೀಡಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ನಾಮಪತ್ರದೊಂದಿಗೆ ತಮ್ಮ ಕುಟುಂಬದವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆಯೂ ಕಡ್ಡಾಯವಾಗಿ ವಿವರಗಳನ್ನು ಒದಗಿಸಬೇಕು ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ಮತ್ತು ಅವಲಂಬಿತರ ಆಸ್ತಿ ವಿವರ, ಐದು ವರ್ಷದ ಆದಾಯ ತೆರಿಗೆ, ಆಸ್ತಿ ತೆರಿಗೆ ಪಾವತಿ ಮತ್ತು ಪ್ರಕರಣಗಳ ವಿವರಗಳನ್ನು ನೀಡಬೇಕಿದೆ. ಹಾಗೆಯೇ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತಂತೆ ಮೂರು ಬಾರಿ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕಿದೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ಮೂರು ತಿಂಗಳೊಳಗೆ ತೆಗೆಸಿದ ಭಾವಚಿತ್ರ ನೀಡಬೇಕು. ಯಾವುದೇ ಕಾಲಂ ಅನ್ನು ಖಾಲಿ ಬಿಡಬಾರದು. 25 ಸಾವಿರ ರೂ.ಠೇವಣಿ ಇಡಬೇಕು. ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಒಬ್ಬರು ಸೂಚಕರು ಸಹಿ ಹಾಕಬೇಕು. ಪ್ರತ್ಯೇಕ ಬ್ಯಾಂಕ್ ಖಾತೆ ವಿವರ ನೀಡಿ, ಅದರಿಂದಲೇ ನಿಗದಿಪಡಿಸಿರುವ 70 ಲಕ್ಷ ರೂ ಪ್ರಚಾರಕ್ಕೆ ವೆಚ್ಚ ಮಾಡಬೇಕು ಎಂದು ತಿಳಿಸಲಾಗಿದೆ.