ದೇಶದ ರಕ್ಷಣೆಗಾಗಿ ಇತರೆ ದೇಶಗಳ ಮೇಲೆ ಅವಲಂಬನೆ ಸಾಧ್ಯವಿಲ್ಲ: ರಾಜನಾಥ್ ಸಿಂಗ್
ಬೆಂಗಳೂರು,ಫೆಬ್ರವರಿ 02: ನಮ್ಮ ದೇಶದ ರಕ್ಷಣೆಗಾಗಿ ಇತರೆ ದೇಶಗಳ ಮೇಲೆ ಅವಲಂಬನೆ ಮುಂದುವರೆಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಫೆಬ್ರವರಿ 3 ರಿಂದ 5ರವರೆಗೆ ಏರೋ ಶೋ ನಡೆಯಲಿದ್ದು, ಅದರ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ರಕ್ಷಣೆಗೆ ಇತರೆ ರಾಷ್ಟ್ರಗಳ ಮೇಲಿನ ಅವಲಂಬನೆ ಹೀಗೆಯೇ ಮುಂದುವರೆಸಲು ಸಾಧ್ಯವಿಲ್ಲ ಎಂದರು.
ಏರೋ ಇಂಡಿಯಾ 2021: ಯಲಹಂಕ ವಾಯುನೆಲೆಯಲ್ಲಿ ಅಂತಿಮ ತಾಲೀಮು
ಬೆಂಗಳೂರಿಗೆ ಆಗಮಿಸಿರುವ ರಾಜನಾಥ್ ಸಿಂಗ್ ಅವರು, ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) ಹಗರು ಯುದ್ಧ ವಿಮಾನ (ಎಲ್ಸಿಎ) ತಯಾರಿಕಾ ಎರಡನೇ ಕಾರ್ಯಕ್ಷೇತ್ರವನ್ನು ಉದ್ಘಾಟಿಸಿದರು.
ದೇಶದ ರಕ್ಷಣೆಗೆ ಬೇರೆ ರಾಷ್ಟ್ರಗಳ ಮೇಲೆ ಅವಲಂಬಿತವಾಗುವುದು ತಪ್ಪು
ನಮ್ಮ ದೇಶದ ರಕ್ಷಣೆಗೆ ನಾವು ಇತರೆ ರಾಷ್ಟ್ರಗಳ ಮೇಲೆ ಹೀಗೆಯೇ ಅವಲಂಬನೆಯಾಗುವುದನ್ನು ಮುಂದುವರೆಸಲು ಸಾಧ್ಯವಿಲ್ಲ. ತೇಜಸ್ ಎಂ1ಎ ಖರೀದಿಗೆ ಸಾಕಷ್ಟು ರಾಷ್ಟ್ರಗಳು ಆಸಕ್ತಿ ತೋರಿಸುತ್ತಿವೆ ಎಂಬುದಾಗಿ ತಿಳಿದುಬಂದಿದೆ. ಶೀಘ್ರದಲ್ಲಿಯೇ ಇತರೆ ರಾಷ್ಟ್ರಗಳಿಂದ ಆರ್ಡರ್ ಗಳನ್ನು ಪಡೆಯಲಿದ್ದೀರಿ ಎಂದು ಎಚ್ಎಎಲ್ಗೆ ತಿಳಿಸಿದ್ದಾರೆ.
ಎಚ್ಎಎಲ್ಗೆ ಹೆಚ್ಚು ಆರ್ಡರ್ ಬರುವಂತೆ ಮಾಡುತ್ತೇವೆ
ಎಚ್ಎಎಲ್ ಹೆಚ್ಚೆಚ್ಚು ಆರ್ಡರ್ ಬರುವಂತೆ ಮಾಡಲು ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತದೆ. ಕೊರೋನಾ ಸಾಂಕ್ರಾಮಿಕ ರೋಗದ ನಡುವಲ್ಲೂ ಹೆಚ್ಎಎಲ್ ರೂ.48,000 ಕೋಟಿ ಆರ್ಡರ್ ಗಳನ್ನು ಪಡೆದುಕೊಂಡಿದೆ. ಸ್ಥಳೀಯ ರಕ್ಷಣಾ ಸಂಗ್ರಹದ ದೃಷ್ಟಿಯಲ್ಲಿ ನೋಡುವುದಾದರೆ, ಇದೊಂಡು ಅತೀದೊಡ್ಡ ಗಳಿಕೆಯೆಂದೇ ಹೇಳಬಹುದು. ಈ ಬೆಳವಣಿಗೆಯು ಭಾರತೀಯ ಏರೋಸ್ಪೇಸ್ ಕ್ಷೇತ್ರವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ.
ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ
ಮುಂದಿನ 3-4 ವರ್ಷಗಳಲ್ಲಿ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ 1.75 ಲಕ್ಷ ಕೋಟಿ ರೂ.ಗಳ ಗುರಿ ಸಾಧಿಸುತ್ತೇವೆಂಬ ವಿಶ್ವಾಸ ನನಗಿದೆ ಎಂದಿದ್ದಾರೆ. ತೇಜಸ್ ಯುದ್ಧ ವಿಮಾನ ಸ್ಥಳೀಯ ವಿಮಾನವಷ್ಟೇ ಅಲ್ಲ, ಎಂಜಿನ್ ಸಾಮರ್ಥ್ಯ, ರೇಡಾರ್ ವ್ಯವಸ್ಥೆ, ದೃಶ್ಯ ವ್ಯಾಪ್ತಿಯನ್ನೂ ಮೀರಿ ಹಲವಾರು ನಿಯತಾಂಕಗಳಲ್ಲಿ ವಿದೇಶಿ ವಿಮಾನಗಳಿಗಿಂತ ಉತ್ತಮವಾಗಿದೆ ಮತ್ತು ಅಗ್ಗದ ದರವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಏರೋ ಇಂಡಿಯಾದಲ್ಲಿ ಬದಲಾವಣೆ
ಈ ಬಾರಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸುಮಾರು 600ಕ್ಕೂ ಹೆಚ್ಚು ಪ್ರದರ್ಶಕರಿದ್ದು, ಇದರಲ್ಲಿ 78 ವಿದೇಶಿ ಕಂಪನಿಗಳಿವೆ. ದೇಶದ ರಕ್ಷಣಾ ಸಂಸ್ಥೆಗಳಾದ ಡಿಆರ್ಡಿಒ,ಎಲ್ಆರ್ ಡಿಇ ಇಸ್ರೋ, ಎನ್ಎಎಲ್, ಎಚ್ಎಎಲ್, ಬಿಎಚ್ಇಎಲ್,ಬಿಇಎಲ್ ಸೇರಿದಂತೆ ಹಲವು ಸಂಸ್ಥೆಗಳು ಜಾಗತಿಕ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದೆ. ಈಗಾಗಲೇ ಭಾರತೀಯ ವಾಯುಪಡೆಗೆ ತೇಜಸ್ ಸೇರ್ಪಡೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ತೇಜಸ್ನ 2ನೇ ಆವೃತ್ತಿಗೆ ಕಾರ್ಯ ಯೋಜನೆಯೂ ಶುರುವಾಗಿದೆ.
Recommended Video