ಎಲ್ಲಾ ಮುಸ್ಲೀಮರಿಗೆ ಆಶ್ರಯ ನೀಡಲು ಭಾರತ ಧರ್ಮಛತ್ರವಲ್ಲ: ಪ್ರಹ್ಲಾದ ಜೋಶಿ
ಬೆಂಗಳೂರು, ಡಿಸೆಂಬರ್ 23: ಎಲ್ಲಾ ದೇಶಗಳ ಮುಸ್ಲೀಮರಿಗೆ ಆಶ್ರಯ ನೀಡಲು ಭಾರತ ಧರ್ಮಛತ್ರವಲ್ಲ ಎಂದು ಬಿಜೆಪಿ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪೌರತ್ವ ಕಾಯ್ದೆ ಜಾರಿಗೆ ಬಂದ ನಂತರವೂ ನೆರೆಯ ರಾಷ್ಟ್ರಗಳ ಮುಸ್ಲೀಮರು ಅರ್ಜಿ ಸಲ್ಲಿಸಿದರೆ ಅವರಿಗೆ ಭಾರತಕ್ಕೆ ಪೌರತ್ವ ನೀಡಲಾಗುತ್ತದೆ. ಆದರೆ ಎಲ್ಲ ದೇಶದ ಮುಸ್ಲೀಮರಿಗೆ ಅವಕಾಶ ನೀಡಲಾಗುವುದಿಲ್ಲ' ಎಂದು ಹೇಳಿದರು.
'ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ರಾಷ್ಟ್ರಗಳಲ್ಲಿ ಮತೀಯ ಕಾರಣಕ್ಕೆ ತುಳಿತಕ್ಕೆ ಒಳಗಾಗಿರುವ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಪಾರ್ಸಿ ಧರ್ಮದವರಿಗೆ ಭಾರತ ಪೌರತ್ವ ನೀಡುತ್ತಿದೆ. ಸುಮಾರು 5 ಲಕ್ಷ ಕುಟುಂಬಗಳಿಗೆ ಭಾರತೀಯ ಪೌರತ್ವ ಸಿಗಲಿದೆ' ಎಂದು ಅವರು ಹೇಳಿದರು.
'1947ರಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ 18.7% ಇತ್ತು ಆದರೆ ಈಗ ಆ ಸಂಖ್ಯೆ 1.6% ಕ್ಕೆ ಇಳಿದಿದೆ. ಬಾಂಗ್ಲಾ ವಿಮೋಚನೆ ಆದಾಗ ಅಲ್ಲಿ ಹಿಂದೂಗಳ ಸಂಖ್ಯೆ 22% ಇತ್ತು ಆದರೆ ಈಗ ಅದು 8.5% ಕ್ಕೆ ಇಳಿದಿದೆ, ಅಪ್ಘಾನಿಸ್ತಾನದಲ್ಲಿ 22 ಸಾವಿರ ಇದ್ದ ಹಿಂದೂ, ಸಿಖ್ ರ ಸಂಖ್ಯೆ ಈಗ ಕೇವಲ 500 ಎಂದು ಅವರು ಮಾಹಿತಿ ನೀಡಿದರು.
'ಪೌರತ್ವ ಕಾಯ್ದೆ ವಿರುದ್ಧ ಜನಮತಗಣನೆ ಮಾಡಲು ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಬೇಕು ಎಂದಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ದೇಶದ್ರೋಹಿ ಹೇಳಿಕೆ' ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದರು.