ಲೋಕಾಯುಕ್ತ ಕಾಯ್ದೆ ತಿದ್ದುಪಡಿ, ಇನ್ನಷ್ಟು ಕಷ್ಟವಾಗಲಿದೆ ತೆರಿಗೆ ವಂಚನೆ
ಬೆಂಗಳೂರು, ಜನವರಿ 03: ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡಲು ಸಚಿವ ಸಂಪುಟ ತೀರ್ಮಾನಿಸಿದ್ದು, ಇನ್ನು ಮುಂದೆ ಸರ್ಕಾರಿ ನೌಕರರು, ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರದ ಜೊತೆಗೆ ಕುಟುಂಬದ ಆಸ್ತಿ ವಿವರವನ್ನೂ ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಲಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ, ಈ ಬಗ್ಗೆ ಸಭೆ ಬಳಿಕ ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ತಿದ್ದುಪಡಿಯ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಇನ್ನು ಮುಂದೆ ತಮ್ಮ ಆಸ್ತಿಯ ವಿವರದ ಜತೆಗೆ ಅವಲಂಬಿತ ತಂದೆ, ತಾಯಿ, ಮಕ್ಕಳ ಹೆಸರಿನಲ್ಲಿರುವ ಸ್ಥಿರ ಮತ್ತು ಚರಾಸ್ತಿ, ನಗದು, ಬ್ಯಾಂಕ್ ಖಾತೆ ವಿವರಗಳನ್ನು ಪ್ರತಿ ವರ್ಷ ಲೋಕಾಯುಕ್ತಕ್ಕೆ ಸಲ್ಲಿಸುವುದು ಕಡ್ಡಾಯವಾಗಲಿದೆ.
ಈ ವರೆಗೆ ಇದ್ದ ನಿಯಮಗಳ ಅನುಸಾರ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿರುವ ಆಸ್ತಿ ಮತ್ತು ಸಾಲದ ವಿವರಗಳನ್ನಷ್ಟೇ ನೀಡಬೇಕಿತ್ತು. ನೌಕರ, ಆತನ ಪತ್ನಿ, ತಂದೆ, ತಾಯಿ ಹಾಗೂ ಎಲ್ಲ ಮಕ್ಕಳ ಹೆಸರು, ಅವರ ಹೆಸರಿನಲ್ಲಿರುವ ಆಸ್ತಿ, ಅವರೆಲ್ಲರ ಬ್ಯಾಂಕ್ ಖಾತೆಗಳ ವಿವರ, ವಿವಿಧ ರೂಪದ ಉಳಿತಾಯ, ರೂಪಾಯಿ 10,000 ಮೌಲ್ಯಕ್ಕೂ ಮೇಲ್ಪಟ್ಟ ವಸ್ತುಗಳ ವಿವರ, ರೂಪಾಯಿ 25,000 ಮೌಲ್ಯಕ್ಕೂ ಮೇಲ್ಪಟ್ಟ ಗೃಹೋಪಯೋಗಿ ವಸ್ತುಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ಸದ್ಯದ ನಿಯಮಗಳ ಪ್ರಕಾರ ಆಸ್ತಿ ಮೌಲ್ಯಗಳ ವಿವರ ನೀಡುವಾಗ, ಆಸ್ತಿ ಖರೀದಿಸಿದಾಗ ಪಾವತಿಸಿದ್ದ ಮೊತ್ತ ಎಷ್ಟು ಎಂಬ ವಿವರ ನೀಡಿದರೆ ಸಾಕಾಗುತ್ತಿತ್ತು. ಹೊಸ ನಿಯಮದ ಪ್ರಕಾರ ಮಾರ್ಗಸೂಚಿ ದರದ ಆಧಾರದಲ್ಲಿ ವಿವರ ಸಲ್ಲಿಸಬೇಕಾಗುತ್ತದೆ.