ಬಿಜೆಪಿ ಮುಖಂಡರು ದಿಗಿಲು ಬೀಳುವ ಬೈರತಿ ಬಸವರಾಜ್ ಡಿಮಾಂಡ್: ಬಿಎಸ್ವೈಗೆ ದೊಡ್ಡ ತಲೆನೋವು
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಅನರ್ಹರಲ್ಲಿ ಬಹುತೇಕರು ಅರ್ಹರಾಗಿ ಶಾಸಕರಾಗಿ ಚುನಾಯಿತರಾದರು. ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್ ಹೊರತು ಪಡಿಸಿ ಮಿಕ್ಕೆಲ್ಲರೂ ಆಯ್ಕೆಯಾದರು.
ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿ, ಅವರನ್ನೆಲ್ಲಾ ದಡ ಸೇರಿಸುವಲ್ಲಿ ಯಶಸ್ವಿಯಾದರು. ಸರಕಾರ ಏನೋ ಸೇಫ್ ಆಯಿತು, ಆದರೆ, ಗೆದ್ದು ಬಂದವರ ಡಿಮಾಂಡ್ ಅನ್ನು ಈಡೇರಿಸುವುದು ಮುಖ್ಯಮಂತ್ರಿಗಳಿಗೆ ಅಷ್ಟೇ ಕಷ್ಟವಾಗುತ್ತಿದೆ ಎನ್ನುವುದು ಅಷ್ಟೇ ಸತ್ಯ ಕೂಡಾ..
ಇದರ ಜೊತೆಗೆ, ಸೋತವರಿಗೂ ಸಚಿವ ಸ್ಥಾನ ನೀಡಬೇಕೇ, ಬೇಡವೇ ಎನ್ನುವ ಧರ್ಮಸಂಕಟದಲ್ಲಿ ಮುಖ್ಯಮಂತ್ರಿಗಳಿದ್ದಾರೆ. ನೂತನವಾಗಿ ಆಯ್ಕೆಯಾದ ಶಾಸಕರು, ಒಂದೊಂದು ಖಾತೆಯನ್ನು ಇಟ್ಟುಕೊಂಡುಲ್ಲಿ ಲಾಬಿ ಮಾಡುತ್ತಿದ್ದಾರೆ. ಅವರು ಬಯಸುತ್ತಿರುವುದೆಲ್ಲಾ ಆಯಕಟ್ಟಿನ ಖಾತೆಗಳೇ..
ಸಚಿವ ಸ್ಥಾನ ಆಕಾಂಕ್ಷಿಗಳಿಂದ ಸಿಎಂ ಭೇಟಿ: ಗರಿಗೆದರಿದ ರಾಜ್ಯ ರಾಜಕೀಯ
ಅವರು ಬಯಸಿದ್ದನ್ನು ಕೊಟ್ಟರೆ, ಮೂಲ ಬಿಜೆಪಿಗರನ್ನು ಎದುರು ಹಾಕಿಕೊಳ್ಳಬೇಕಾದ ಸಂದಿಗ್ದ ಪರಿಸ್ಥಿತಿ ಮುಖ್ಯಮಂತ್ರಿಗಳಿದ್ದಾರೆ. ಕೆ.ಆರ್.ಪುರ ಶಾಸಕ, ಬೈರತಿ ಬಸವರಾಜ್ ಕೇಳುತ್ತಿರುವ ಖಾತೆಗೆ ಬಿಜೆಪಿ ಹಿರಿಯ ಮುಖಂಡರೇ ದಿಗಿಲು ಬಿದ್ದಿದ್ದಾರೆ.
ಜಾಣ ನಡೆಯಿಟ್ಟಿದ್ದ ಮುಖ್ಯಮಂತ್ರಿ
ಕಳೆದ ಬಾರಿ ಸಚಿವ ಸಂಪುಟ ರಚನೆಯಾದಾಗ, ಬೆಂಗಳೂರು ನಗರ ಅಭಿವೃದ್ದಿ ಖಾತೆಯನ್ನು ಯಾರಿಗೂ ನೀಡದೇ ಮುಖ್ಯಮಂತ್ರಿ ಯಡಿಯೂರಪ್ಪ ಜಾಣ ನಡೆಯಿಟ್ಟಿದ್ದರು. ಇದಕ್ಕೆ ಕಾರಣ ಇಲ್ಲದಿಲ್ಲ. ಯಾಕೆಂದರೆ, ಅದರ ಮೇಲೆ, ಬಿಜೆಪಿಯ ಹಲವು ಮುಖಂಡರಿಗೆ ಕಣ್ಣಿತ್ತು.
ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆರ್. ಅಶೋಕ್
ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಪಕ್ಷದ ಪ್ರಭಾವಿ ಮುಖಂಡ ಆರ್. ಅಶೋಕ್ ಅವರಿಗೆ ಕಂದಾಯ ಇಲಾಖೆಯ ಉಸ್ತುವಾರಿಯನ್ನು ನೀಡಲಾಗಿತ್ತು. ಇದರಿಂದ, ಅಶೋಕ್ ಶ್ಯಾಣೆ ಕೋಪಿಸಿಕೊಂಡಿದ್ದರು. ಸ್ವಲ್ಪದಿನ, ಪಕ್ಷದ ಮುಖಂಡರ ಜೊತೆಗೂ ಅಶೋಕ್ ಅಂತರ ಕಾಯ್ಡುಕೊಂಡಿದ್ದರು. ಆಮೇಲೆ, ಹಾಗೋ, ಹೀಗೋ ಅವರನ್ನು ಸಮಾಧಾನ ಮಾಡಲಾಗಿತ್ತು.
ಬೇಕಾದ ಖಾತೆಯ ಪಟ್ಟಿ ಸಿಎಂ ಗೆ ನೀಡಿರುವ ಬೈರತಿ ಬಸವರಾಜ್
ಬೆಂಗಳೂರು ಉಸ್ತುವಾರಿ
ಹೀಗಿರುವಾಗ, ಡಿಸಿಎಂ ಸ್ಥಾನದ ಜೊತೆ ಅವರು ಬಯಸಿದ್ದ ಬೆಂಗಳೂರು ಉಸ್ತುವಾರಿಯನ್ನು ಇನ್ನೊಬ್ಬರಿಗೆ ನೀಡಿದರೆ, ಇನ್ನಷ್ಟು ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ ಎಂದು ಆ ಪ್ರಭಾವೀ ಇಲಾಖೆಯನ್ನು, ಮುಖ್ಯಮಂತ್ರಿಗಳು ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದರು. ಆಗ, ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಎಲ್ಲರೂ ಸುಮ್ಮನಾಗಿದ್ದರು.
ಆ ಖಾತೆ ಕೊಟ್ಟರೆ ಒಳ್ಳೆಯದು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ
ಈಗ, ಬೆಂಗಳೂರು ನಗರಾಭಿವೃದ್ದಿ ಎನ್ನುವ ಸಮೃದ್ದ ಖಾತೆಯ ಮೇಲೆ ಬೈರತಿ ಬಸವರಾಜ್ ಅವರಿಗೆ ಕಣ್ಣುಬಿದ್ದಿದೆ. ಆ ಖಾತೆ ಕೊಟ್ಟರೆ ಒಳ್ಳೆಯದು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದನ್ನು ಹೊರತಾಗಿ, ಬೇರೆ ಖಾತೆಯನ್ನು ನೀಡಿದರೂ, ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಬೈರತಿ ಹೇಳಿದ್ದಾರೆ. ಆದರೆ, ಅದೇ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯಿದೆ.
ಬೈರತಿ ಬಸವರಾಜು ಅವರ ಡಿಮಾಂಡ್
ಬೈರತಿ ಬಸವರಾಜ್ ಅವರ ಡಿಮಾಂಡ್, ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ಅಶ್ವಥ್ ನಾರಾಯಣ್, ಆರ್. ಅಶೋಕ್, ವಿ.ಸೋಮಣ್ಣ ಮತ್ತು ಸುರೇಶ್ ಕುಮಾರ್ ಅವರಿಗೆ ಬೇಸರ ತಂದಿದೆ ಎನ್ನುವ ಮಾಹಿತಿಯಿದೆ. ಹಾಗಾಗಿ, ಬೈರತಿ ಬಸವರಾಜ್ ಅವರ ಈ ಬೇಡಿಕೆ ಮುಖ್ಯಮಂತ್ರಿಗಳಿಗೆ ದೊಡ್ಡ ತಲೆನೋವಾಗಿ ಕೂತಿದೆ.