ಬೇಕಾದ ಖಾತೆಯ ಪಟ್ಟಿ ಸಿಎಂ ಗೆ ನೀಡಿರುವ ಬೈರತಿ ಬಸವರಾಜ್
ಬೆಂಗಳೂರು, ಡಿಸೆಂಬರ್ 10: ಉಪಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಬೈರತಿ ಬಸವರಾಜ್ ಗೆದ್ದ ಇಪ್ಪತ್ನಾಲ್ಕು ಗಂಟೆ ಒಳಗೇ ಸಚಿವ ಸ್ಥಾನದ ಡಿಮ್ಯಾಂಡ್ ಮುಂದಿಟ್ಟಿದ್ದಾರೆ. ಇಂತಹುದ್ದೇ ಖಾತೆ ಕೊಡಿರೆಂದು ಸಿಎಂ ಅವರಲ್ಲಿ ಮನವಿಯೂ ಮಾಡಿದ್ದಾರೆ.
ಕೆ.ಆರ್.ಪುರಂ ಕ್ಷೇತ್ರದಿಂದ ಗೆದ್ದಿರುವ ಬೈರತಿ ಬಸವರಾಜ್ ಅವರು ಬೆಂಗಳೂರಿನ ಮೇಲೆಯೇ ಕಣ್ಣಿಟ್ಟಿದ್ದಾರೆ. ಅವರಿಗೆ ಬೆಂಗಳೂರಿಗೆ ನಗರಾಭಿವೃದ್ಧಿ ಖಾತೆ ಬೇಕಂತೆ.
ಯಡಿಯೂರಪ್ಪಗೆ ತಲೆನೋವಾದ ಸಂಪುಟ ವಿಸ್ತರಣೆ: ಆಕಾಂಕ್ಷಿಗಳು ಯಾರ್ಯಾರು?
'ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುವಂತೆ ಸಿಎಂ ಯಡಿಯೂರಪ್ಪ ಬಳಿ ಕೇಳಿಕೊಂಡಿದ್ದೇನೆ. ಆ ಖಾತೆ ಕೊಟ್ಟರೆ ಚೆನ್ನಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ' ಎಂದು ಬೈರತಿ ಬಸವರಾಜ್ ಇಂದು ಹೇಳಿದ್ದಾರೆ.
'ಬೆಂಗಳೂರು ನಗರಾಭಿವೃದ್ಧಿ ಖಾತೆ ಜೊತೆಗೆ ಇನ್ನೂ ಕೆಲವು ಖಾತೆಗಳ ಪಟ್ಟಿಯನ್ನು ಸಿಎಂ ಅವರಿಗೆ ನೀಡಿದ್ದೇನೆ, ಅವುಗಳಲ್ಲಿ ಯಾವುದನ್ನಾದರೂ ಸಿಎಂ ಅವರು ನೀಡಬಹುದು, ಯಾವ ಖಾತೆ ಕೊಟ್ಟರೂ ಅದನ್ನು ಚೆನ್ನಾಗಿ ನಿರ್ವಹಿಸುತ್ತೇನೆ' ಎಂದು ಬೈರತಿ ಬಸವರಾಜ್ ಹೇಳಿದ್ದಾರೆ.
'ಯಡಿಯೂರಪ್ಪ ಅವರು ಕೊಟ್ಟ ಮಾತು ತಪ್ಪುವವರಲ್ಲ, ಅವರ ಮೇಲೆ ವಿಶ್ವಾಸವಿದೆ. ಸಚಿವ ಸ್ಥಾನ ಕೊಡುತ್ತೇನೆಂದು ಭರವಸೆ ನೀಡಿದ್ದಾರೆ ಅದರಂತೆಯೇ ಅವರು ನಡೆದುಕೊಳ್ಳುತ್ತಾರೆ' ಎಂದು ಬೈರತಿ ಬಸವರಾಜ್ ಹೇಳಿದ್ದಾರೆ.
ಯಡಿಯೂರಪ್ಪ ಛಲದಂಕ ಮಲ್ಲ: ಡಿಕೆಶಿ ಮಾತು ವೈರಲ್
ಉಪಚುನಾವಣೆಯಲ್ಲಿ ಸೋತಿರುವ ಎಂಟಿಬಿ ನಾಗರಾಜು, ವಿಶ್ವನಾಥ್ ಬಗ್ಗೆ ಮಾತನಾಡಿದ ಬೈರತಿ ಬಸವರಾಜು, 'ಅವರೊಂದಿಗೆ ನಾವಿದ್ದೇವೆ. ಸಿಎಂ ಅವರು ಅವರಿಗೆ ಮೋಸ ಮಾಡುವುದಿಲ್ಲ' ಎಂದರು.
ಬೆಂಗಳೂರು ನಗರಾಭಿವೃದ್ಧಿ ಖಾತೆ ಪ್ರಸ್ತುತ ಯಡಿಯೂರಪ್ಪ ಬಳಿಯೇ ಇದೆ. ಆ ಖಾತೆಗೆ ಈಗಾಗಲೇ ಹಲವರು ಲಾಭಿ ನಡೆಸುತ್ತಿದ್ದಾರೆ. ಆರ್.ಅಶೋಕ್ ಸಹ ಅದೇ ಖಾತೆಯ ಮೇಲೆ ಕಣ್ಣಿಟ್ಟಿದ್ದರು.