ಉಪ ಚುನಾವಣೆ; ಸುಪ್ರೀಂ ಮೆಟ್ಟಿಲೇರಲಿದ್ದಾರೆ ಮುನಿರತ್ನ
ಬೆಂಗಳೂರು, ಸೆಪ್ಟೆಂಬರ್ 24 : ರಾಜರಾಜೇಶ್ವರಿ ನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಉಪ ಚುನಾವಣೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದಾರೆ. ಚುನಾವಣಾ ಆಯೋಗ ಕ್ಷೇತ್ರಕ್ಕೆ ಉಪ ಚುನಾವಣೆ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ.
ಬುಧವಾರ ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿಯ ವಿಚಾರಣೆ ನಡೆಯಲಿದೆ. ಮುನಿರತ್ನ ಅರ್ಜಿಯ ವಿಚಾರಣೆ ವೇಳೆ ಹೊಸ ಅರ್ಜಿಯನ್ನು ಸಲ್ಲಿಕೆ ಮಾಡಲಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೂ ಉಪ ಚುನಾವಣೆ ಘೋಷಣೆ ಮಾಡುವಂತೆ ಮನವಿ ಮಾಡಲಿದ್ದಾರೆ.
ಅನರ್ಹ ಶಾಸಕ ಮುನಿರತ್ನಗೆ ಸಂಕಷ್ಟ ತಂದಿಟ್ಟ ಬಿಜೆಪಿ ಮುಖಂಡ
ಕರ್ನಾಟಕದ 15 ಕ್ಷೇತ್ರಗಳಿಗೆ ಈಗಾಗಲೇ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಮುನಿರತ್ನ ವಿರುದ್ಧದ ಮತ್ತೊಂದು ದೂರು ಹಿಂಪಡೆದ ಬಿಜೆಪಿ ಕಾರ್ಯಕರ್ತ
ರಾಜರಾಜೇಶ್ವರಿ ನಗರ ಮತ್ತು ಮುಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಬುಧವಾರ ನಡೆಯಲಿದ್ದು, ಅನರ್ಹಗೊಂಡ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.
ಆರ್.ಆರ್. ನಗರದಲ್ಲಿ 25 ಸಾವಿರ ಮತಗಳ ಅಂತರದಿಂದ ಗೆದ್ದ ಮುನಿರತ್ನ
ಚುನಾವಣೆ ಏಕೆ ಘೋಷಣೆಯಾಗಿಲ್ಲ?
ಬೆಂಗಳೂರಿನ ಆರ್. ಆರ್. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿಲ್ಲ. ವಿಧಾನಸಭೆ ಚುನಾವಣೆ ವೇಳೆ ಅಕ್ರಮ ಮತದಾರರ ಗುರುತಿನ ಚೀಟಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸಿಕ್ಕಿತ್ತು. ಈ ಕುರಿತ ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಆದ್ದರಿಂದ, ಚುನಾವಣೆ ಘೋಷಣೆಯಾಗಿಲ್ಲ.
ಮುನಿರತ್ನ ಮನವಿ ಏನು?
ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಿರುವ ಮುನಿರತ್ನ 15 ವಿಧಾನಸಭಾ ಕ್ಷೇತ್ರಗಳ ಜೊತೆ ರಾಜರಾಜೇಶ್ವರಿ ನಗರಕ್ಕೂ ಚುನಾವಣೆ ನಡೆಸಬೇಕು ಎಂದು ಮನವಿ ಸಲ್ಲಿಸಲಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ನ್ಯಾಯಾಲಯ ಪರಿಗಣಿಸಲಿದೆಯೇ? ಕಾದು ನೋಡಬೇಕು.
ಮುನಿರತ್ನ ಗೆದ್ದಿದ್ದರು
2018ರಲ್ಲಿ ನಡೆದ ಚುನಾವಣೆಯಲ್ಲಿ ಆರ್. ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಮುನಿರತ್ನ 108065 ಮತಗಳನ್ನು ಪಡೆದು ಜಯಗಳಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.
ಸ್ಪೀಕರ್ ಆದೇಶದ ಬಗ್ಗೆ ವಿಚಾರಣೆ
ಸ್ಪೀಕರ್ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ಮುನಿರತ್ನ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಸ್ಪೀಕರ್ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದರೆ ಉಪ ಚುನಾವಣೆ ನಡೆಯಬೇಕು. ಬುಧವಾರ 17 ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.