ಕಾರ್ಮಿಕನ ಕಣ್ಣಿಗೆ ಹಾನಿ; ಜಲಮಂಡಳಿ ಕೊಟ್ಟಿಲ್ಲ ಪರಿಹಾರ
ಬೆಂಗಳೂರು, ಮೇ 17; ಬೆಂಗಳೂರು ನಗರವನ್ನು ಸ್ವಚ್ಛವಾಗಿಡಲು ಜಲಮಂಡಳಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕಾರ್ಮಿಕನೊಬ್ಬ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾನೆ. ಬ್ಲೀಚಿಂಗ್ ಪೌಡರ್ ಮಿಶ್ರಿತ ನೀರಿನಿಂದಾಗಿ ಕಣ್ಣಿಗೆ ಹಾನಿಯಾಗಿದೆ.
ಮುನಿಕೃಷ್ಣ ಎಂಬ ಸಿಬ್ಬಂದಿ ಕಳೆದ ವರ್ಷವೇ ಕಣ್ಣಿನ ಸಮಸ್ಯೆಯಿಂದಾಗಿ ಕೆಲಸ ಕಳೆದುಕೊಂಡಿದ್ದಾನೆ. ಆದರೆ ಇದುವರೆಗೂ ಜಲಮಂಡಳಿಯಿಂದ ಪರಿಹಾರ ಸಿಕ್ಕಿಲ್ಲ. ಹಲವು ಕಾರ್ಮಿಕರು ಇಂತಹ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಬ್ಲೀಚಿಂಗ್ ಪೌಡರ್ ಮಿಶ್ರಿತ ನೀರು ಬಲಗಣ್ಣಿಗೆ ಹೋದಾಗ ಊರಿ ಆರಂಭವಾಗಿದೆ. ಜಲಮಂಡಳಿ ಅಧಿಕಾರಿಗಳಿಗೆ ಹೇಳಿದಾಗ ಇದು ಚಿಕ್ಕ ಸಮಸ್ಯೆ ಸರಿಹೋಗುತ್ತದೆ ಎಂದು ಹೇಳಿದ್ದಾರೆ. ಆದರೆ ಈಗ ಕಣ್ಣಿಗೆ ಹಾನಿಯಾಗಿದೆ.
ನಾರಾಯಣ ನೇತ್ರಾಲಯದಲ್ಲಿ ಪರೀಕ್ಷೆ ಮಾಡಿಸಿದಾಗ ರೆಟಿನಾಕ್ಕೆ ರಕ್ತ ಪೂರೈಕೆ ಮಾಡುವ ನರಗಳಿಗೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಒಂದು ಕಣ್ಣಿನ ಚಿಕಿತ್ಸೆಗೆ ಸುಮಾರು 25 ಸಾವಿರೂ. ಬೇಕು, ತಕ್ಷಣ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ವಾಸವಾಗಿರುವ ಮುನಿಕೃಷ್ಣ ಅವರೇ ಸಂಸಾರಕ್ಕೆ ದಿಕ್ಕು. ಮನೆಯಲ್ಲಿದ್ದ ಟಿವಿ, ಪತ್ನಿಯ ಮಂಗಳ ಸೂತ್ರ ಮಾರಿ ಸುಮಾರು 75 ಸಾವಿರ ಹೊಂದಿಸಿದರು. ಆದರೆ ವಿವಿಧ ಪರೀಕ್ಷೆಗಳಿಗೆ ಹಣ ಖರ್ಚಾಯಿತು.
ಸಹೋದರ ಸಹ ಸಕಾಲಕ್ಕೆ ಸಹಾಯ ಮಾಡದ ಕಾರಣ ಚಿಕಿತ್ಸೆಗೆ 50 ಸಾವಿರ ಹೊಂದಿಸುವುದು ಕಷ್ಟವಾಯಿತು. ಕಣ್ಣು ಸರಿಯಾಗಿ ಕಾಣದ ಕಾರಣ ಮುನಿಕೃಷ್ಣ ಕೆಲಸ ಕಳೆದುಕೊಂಡರು. ಕುಟುಂಬ ಸಂಕಷ್ಟಕ್ಕೆ ಸಿಲುಕಿತು.
ಮುರುಳಿ ಕೃಷ್ಣ ಹಿರಿಯ ಪುತ್ರ ದ್ವಿತೀಯ ಪಿಯುಸಿ ಓದುತ್ತಿದ್ದ,ಆತ ಓದು ನಿಲ್ಲಿಸಿ ಕೆಲಸಕ್ಕೆ ಹೋಗಲು ತೀರ್ಮಾನಿಸಿದೆ. ಆದರೆ ಕೆಲಸ ಸಿಗಲಿಲ್ಲ. ಮುರಳಿ ಕೃಷ್ಣ ನವೋದಯ ಸರ್ವೀಸ್ ಸೆಂಟರ್ಗೆ ಮನವಿ ಮಾಡಿ ಮಗನಿಗೆ ಅಲ್ಲಿ ಕೆಲಸ ಕೊಡಿಸಿದ್ದು ಮಾಸಿಕ 14,500 ವೇತನ ಬರುತ್ತಿದೆ.
ಜಲಮಂಡಳಿ ಕಾರ್ಮಿಕರ ಸುರಕ್ಷತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂಬ ಆರೋಪವಿದೆ. ಔಷಧ ಯುಕ್ತ ನೀರನ್ನು ಸಿಂಪಡಣೆ ಮಾಡುವಾಗ ಅವರಿಗೆ ಸರಿಯಾದ ಸುರಕ್ಷತಾ ಸಾಧನಗಳನ್ನು ಸಹ ನೀಡುವುದಿಲ್ಲ.
ಜಲಮಂಡಳಿಯಲ್ಲಿ ಕೆಲಸ ಮಾಡುವ ಸುಮಾರು 600 ಸ್ವಚ್ಛತಾ ಸಿಬ್ಬಂದಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಕುರಿತು ಕಾರ್ಮಿಕರ ಒಕ್ಕೂಟ ಸುಮಾರು ದೂರುಗಳನ್ನು ನೀಡಿದೆ. ಯಾವುದೂ ಸಹ ಇನ್ನೂ ಇತ್ಯರ್ಥವಾಗಿಲ್ಲ.
Recommended Video
ಮುನಿ ಕೃಷ್ಣ ಪ್ರಕರಣದ ಬಗ್ಗೆ ಜಲಮಂಡಳಿ ಅಧ್ಯಕ್ಷ ಎನ್. ಜಯರಾಮ್ ಪ್ರತಿಕ್ರಿಯೆ ನೀಡಿದ್ದು, "ಈ ಘಟನೆ ತಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುವೆ. ಸುರಕ್ಷತಾ ಸಾಧನಗಳನ್ನು ನೀಡಿಲ್ಲ ಎಂಬುದು ಗಂಭೀರ ಆರೋಪವಾಗಿದೆ. ಕಾರ್ಮಿಕರು ಈ ಸಮಸ್ಯೆ ಬಗ್ಗೆ ಮಾತನಾಡಿಲ್ಲ" ಎಂದು ಹೇಳಿದ್ದಾರೆ.