ಟ್ಯಾಂಕರ್ ನೀರು ಸರಬರಾಜಿಗೆ ವೇಳಾಪಟ್ಟಿ ಪ್ರಕಟಿಸಿದ ಜಲಮಂಡಳಿ
ಬೆಂಗಳೂರು, ಮಾರ್ಚ್ 21: ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆ ಆರಂಭವಾಗಿರುವ ಕಾರಣ ಈಗಾಗಲೇ ಅಂತರ್ಜಲ ಬತ್ತಲು ಆರಂಭವಾಗಿದ್ದು ಟ್ಯಾಂಕರ್ ನೀರನ್ನೇ ನಂಬಬೇಕಾಗಿದೆ.
ಹೀಗಾಗಿ ಟ್ಯಾಂಕರ್ ನೀರು ಸರಬರಾಜಿಗೆ ಜಲಮಂಡಳಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜಲಮಂಡಳಿಯ 68 ಟ್ಯಾಂಕರ್ಗಳಿಂದ ನೀರು ಪೂರೈಕೆ ನಡೆಯುತ್ತದೆ. ಅಧಿಕಾರಿಗಳು ತಮಗಿಷ್ಟ ಬಂದಲ್ಲಿ ನೀರು ಪೂರೈಸುವುದನ್ನು ತಪ್ಪಿಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
ನೀರಿನ ಮಿತ ಬಳಕೆ ಜಾಗೃತಿಗೆ 'ಹಾಫ್ ಬಕೆಟ್ ಚಾಲೆಂಜ್': ನೀವೂ ಸ್ವೀಕರಿಸಿ
110 ಹಳ್ಳಿಗಳಲ್ಲಿ ಬಿಬಿಎಂಪಿ ವತಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಜಲಮಂಡಳಿಯು ತನ್ನ ವ್ಯಾಪ್ತಿಯಲ್ಲಿ ನೀರು ಪೂರೈಸುತ್ತಿದೆ. ಈ ಹಿಂದೆ ನೀರಿಗಾಗಿ ಅಧಿಕಾರಿಗಳ ಮೂಲಕ ಅಥವಾ ಬಿಬಿಎಂಪಿ ಸದಸ್ಯರ ಮೂಲಕ ಬಡಾವಣೆಗಳ ನಿವಾಸಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು.
ಜಲಮಂಡಳಿಯ ನೀರಿನ ಟ್ಯಾಂಕರ್ಗಳಿಗೆ ಮೇ ವರೆಗೆ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದು, ಆಯಾ ಪ್ರದೇಶಗಳಿಗೆ ಅದೇ ದಿನದಂದು ಕಡ್ಡಾಯವಾಗಿ ಉಚಿತ ನೀರು ಪೂರೈಕೆ ಮಾಡಲಾಗುತ್ತದೆ.ಬೆಳ್ಳಂದೂರು ಸುತ್ತಮುತ್ತಲಿರುವ ಬೋರ್ವೆಲ್ಗಳು ಬತ್ತುತ್ತಿದ್ದು, ಟ್ಯಾಂಕರ್ ನೀರಿಗೆ ಹೆಚ್ಚು ಬೆಲೆ ತೆರಬೇಕಾಗಿದೆ.
ಬೇಡಿಕೆ ಹೆಚ್ಚಾದಂತೆ ನೀರಿನ ಬೆಲೆಯೂ ಹೆಚ್ಚಳವಾಗುತ್ತಿದೆ. ಈ ಮೊದಲು 6000 ಲೀಟರ್ ನೀರಿರುವ ಟ್ಯಾಂಕರ್ 500 ರೂ ಗೆ ದೊರೆಯುತ್ತಿತ್ತು. ಆದರೆ ಇದೀಗ ಅದೇ ನೀರಿಗೆ 1500 ರೂ ನೀಡಬೇಕಿದೆ.
ಬೆಳ್ಳಂದೂರು ಸುತ್ತಲಿರುವ ಕಸವನಹಳ್ಳಿ, ವರ್ತೂರು ಪ್ರದೇಶಗಳಿಗೆ ಕಾವೇರಿ ಸರಬರಾಜು ಕೂಡ ಇಲ್ಲ, ಈ ಪ್ರದೇಶದ ಜನರು ಬಿಬಿಎಂಪಿಯ ಬೋರ್ವೆಲ್ ಅಥವಾ ತಮ್ಮ ಮನೆಯ ಸ್ವಂತ ಬೋರ್ವೆಲ್ಗಳನ್ನೇ ನಂಬಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ಜನಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಹಾಗಾಗಿ ಇರುವ ಬೋರ್ವೆಲ್ಗಳೆಲ್ಲವೂ ಒಣಗಿ ಹೋಗಿವೆ. ವಾಟರ್ ಟ್ಯಾಂಕರ್ ಓನರ್ ಗಳಲ್ಲಿಯೂ ಕೂಡ ಸ್ಪರ್ಧೆ ಏರ್ಪಟ್ಟಿದೆ. ಪ್ರತಿ ದಿನವೂ ಟ್ಯಾಂಕರ್ ನೀರಿನ ಬೆಲೆ ಹೆಚ್ಚಳವಾಗುತ್ತಿದೆ.