ಸಿದ್ಧಾರ್ಥ ಸಾವು: 'ತೆರಿಗೆ ಭಯೋತ್ಪಾದನೆ' ಬಗ್ಗೆ ಉದ್ಯಮಿಗಳ ಆತಂಕ
ಬೆಂಗಳೂರು, ಆಗಸ್ಟ್ 1: ಕೆಫೆ ಕಾಫಿಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಅಸಹಜ ಸಾವಿನ ಹಿನ್ನೆಲೆಯಲ್ಲಿ ಭಾರತದಲ್ಲಿನ ಉದ್ಯಮಗಳು ಮತ್ತು ಅವುಗಳನ್ನು ನಿಯಂತ್ರಿಸುವ ಸಂಸ್ಥೆಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.
ಮುಖ್ಯವಾಗಿ ಭಾರತದಲ್ಲಿ ಉದ್ಯಮ ಸ್ಥಾಪಿಸುವುದು, ಅದನ್ನು ವಿಸ್ತರಿಸುವುದು ಮತ್ತು ನಡೆಸುವುದು, ಅದಕ್ಕೆ ಸಂಬಂಧಿಸಿದಂತೆ ಹಣಕಾಸಿನ ವಹಿವಾಟು ನಡೆಸುವುದು ಮುಂತಾದವುಗಳಿಗೆ ಎಷ್ಟೆಲ್ಲ ನಿಯಂತ್ರಣ ಕಟ್ಟುಪಾಡುಗಳಿವೆ. ಮುಖ್ಯವಾಗಿ ಆದಾಯ ತೆರಿಗೆ ಇಲಾಖೆ ಹಾಗೂ ತನಿಖಾ ಸಂಸ್ಥೆಗಳು ಉದ್ದಿಮೆಗಳ ಹಿನ್ನಡೆಗೆ ಹೇಗೆಲ್ಲ ಕಾರಣಕರ್ತವಾಗುತ್ತಿವೆ ಎಂಬ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಹಿನ್ನೆಲೆಯಲ್ಲಿಯೇ ಸಿದ್ಧಾರ್ಥ ಅವರ ಸಾವು ಸಂಭವಿಸಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿರುವುದರಿಂದ ಉದ್ದಿಮೆದಾರರಲ್ಲಿ ಭಾರತದ ತೆರಿಗೆ ವ್ಯವಸ್ಥೆಯ ಕುರಿತು ಧ್ವನಿ ಎತ್ತಲು ವೇದಿಕೆಯೊಂದು ಕೂಡ ದೊರೆತಂತಾಗಿದೆ.
ಸಿದ್ದಾರ್ಥ ಸಾವು; ಕಂಕನಾಡಿ ಪೊಲೀಸರಿಂದ ಐಟಿ ಇಲಾಖೆ ಮುಖ್ಯಸ್ಥರ ವಿಚಾರಣೆ?
ನೂರಾರು ಜನರಿಗೆ ಮಾದರಿಯಾಗಿದ್ದ ಸಿದ್ಧಾರ್ಥ ಅವರ ಸಾವು ಉದ್ಯಮವಲಯವನ್ನು ಕಂಗೆಡಿಸಿದೆ. 'ಇದು ಭಾರತದ ಕಾರ್ಪೊರೇಟ್ ವಲಯಕ್ಕೆ ದೊಡ್ಡ ಆಘಾತ' ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ಸಿದ್ಧಾರ್ಥ ಸಾವಿನಿಂದ ವ್ಯವಸ್ಥೆ ಅನಾವರಣ
'ಒಬ್ಬ ಸಾಹಸೋದ್ಯಮಿ ಮೇಲೆ ಕಲೆಕ್ಟಿವ್ ಆಗಿ ಮುಗಿಬಿದ್ದು ಅವರ ಉದ್ಯಮವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ತಾವು ಅನುಭವಿಸಿದ ಒತ್ತಡದಿಂದ ಹೊರಬರಲು ಅವರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿತ್ತು' ಎಂದು 'ದಿ ಕ್ವಿಂಟ್' ವೆಬ್ತಾಣದೊಂದಿಗೆ ಮಾತನಾಡಿರುವ ಕಿರಣ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಉದ್ಯಮಿಗಳನ್ನು ವ್ಯವಸ್ಥೆ ನಡೆಸಿಕೊಳ್ಳುತ್ತಿರುವ ಬಗೆ ಮತ್ತು ಅವರ ಮೇಲೆ ಒತ್ತಡಕ್ಕೆ ಕಾರಣವಾಗುವ ಸಂಕೀರ್ಣ ಅಂಶಗಳನ್ನು ಸಿದ್ಧಾರ್ಥ ಅವರ ಸಾವು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
ಸಿದ್ಧಾರ್ಥ್ ಮೃತದೇಹದ ಕುರಿತು ವ್ಯಕ್ತವಾಗಿದೆ ಹಲವು ಅನುಮಾನ
ಒತ್ತಡ ಹೇರಿರುವ ಸಾಧ್ಯತೆ ಹೆಚ್ಚು
ಇಂದು ತೆರಿಗೆ ಭಯೋತ್ಪಾದನೆ ಕುರಿತು ಆರೋಪಿಸುತ್ತಿರುವ ಉದ್ಯಮಗಳನ್ನು 'ಹಣ ವಂಚಕರು' ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಸಿದ್ಧಾರ್ಥ ಅವರ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯು, 'ನೀವು ಸಿಸಿಡಿಯನ್ನು ಮುಚ್ಚಿಬಿಡಿ. ನೀವು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದೀರಿ ಎಂಬುದು ನಮಗೆ ಬೇಕಾಗಿಲ್ಲ' ಎಂದು ಅವರಿಗೆ ಹೇಳಿದಂತೆ ಭಾಸವಾಗುತ್ತದೆ. ಇದು ನಡೆದಿರಬಹುದಾದ ಸಂಕೇತಗಳಿರಬಹುದು. ಅದು ಹಾಗೆ ಆಗಿರಬಾರದಿತ್ತು. ಆದರೆ, ಈ ವಿಚಾರದಲ್ಲಿ ಸ್ಥಿರ ಮನಸ್ಥಿತಿ ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಪಿಇಗಳನ್ನೂ ತನಿಖೆ ಮಾಡಬೇಕು
ಕಾರ್ಪೊರೇಟ್ ಒತ್ತಡದ ಕುರಿತು ಆಡಳಿತ ವರ್ಗದೆಡೆಗೆ ಬೊಟ್ಟು ಮಾಡುವ ಜತೆಗೆ ಪ್ರೈವೇಟ್ ಈಕ್ವಿಟಿ ಹೊಂದಿರುವವರ ಪಾತ್ರವನ್ನೂ ಶಾ ಪ್ರಶ್ನಿಸಿದ್ದಾರೆ. ಹಣಕಾಸಿನ ಒತ್ತಡದಲ್ಲಿ ಸಿದ್ಧಾರ್ಥ ಅವರು ಪಿಇಗಳಿಂದಾಗಿ ಷೇರುಗಳನ್ನು ಮರಳಿ ಖರೀದಿ ಮಾಡುವಂತಾಯಿತು. ಹೀಗಾಗಿ ನನ್ನ ಪ್ರಕಾರ ಪ್ರವೈಟ್ ಈಕ್ವಿಟಿ ಹೂಡಿಕೆದಾರರನ್ನೂ ತನಿಖೆಗೆ ಒಳಪಡಿಸಬೇಕು. ಅವರು ಎಲ್ಲ ತೊಂದರೆಗಳಿಗೂ ಎದುರಾಗುವಂತೆ ಅವರು ಬಯಸಿದ್ದಂತೆ ಕಾಣಿಸುತ್ತದೆ. ಇದು ಸರಿಯಲ್ಲ. ಏಕೆಂದರೆ ಪ್ರೈವೇಟ್ ಈಕ್ವಿಟಿ ಎನ್ನುವುದು ತೊಂದರೆಯನ್ನು ಹಂಚಿಕೊಳ್ಳುವುದರ ಕುರಿತಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ಆಯಾಮಗಳಲ್ಲೂ ಸಿದ್ಧಾರ್ಥ್ ಆತ್ಮಹತ್ಯೆ ಪ್ರಕರಣ ತನಿಖೆ: ಸಂದೀಪ್ ಪಾಟೀಲ್
ಅಧಿಕಾರಿಗಳಿಂದ ದುರ್ಬಳಕೆಯೇ ಹೆಚ್ಚು
'ತೆರಿಗೆ ಅಧಿಕಾರಿಗಳ ಬಗ್ಗೆ ಅನೇಕ ಜನರು ಭಯಪಟ್ಟುಕೊಳ್ಳುವುದು ನನಗೆ ತಿಳಿದಿದೆ. ತೆರಿಗೆ ಅಧಿಕಾರಿಗಳು ಬಂದು ಅವರನ್ನು ಕೆಳಕ್ಕೆ ತಳ್ಳುತ್ತಾರೆ. ಹಿರಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ವಿವಾದಗಳು ನಡೆದಿವೆ. ತೆರಿಗೆ ವ್ಯವಸ್ಥೆಯು ಒಡೆದುಹೋಗಿದೆ. ಉದ್ಯಮಿಗಳಿಗೆ ಇರುವುದು ಅಲ್ಪಮಟ್ಟಿನ ಚಿಕಿತ್ಸೆ ಮಾತ್ರ ಎಂದು ಉದ್ಯಮಿ ಮೋಹನ್ ದಾಸ್ ಪೈ ಹೇಳಿದ್ದಾರೆ.
ತೆರಿಗೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿರುವುದು ಅದರ ದುರ್ಬಳಕೆಗೆ ಕಾರಣವಾಗಬಹುದು. ಅಧಿಕಾರಿಗಳುಗೆ ಬಂಧನದ ಅಧಿಕಾರ ನೀಡಬಾರದಿತ್ತು. ಕೇವಲ ನ್ಯಾಯಾಲಯ ಬಂಧನದ ಕುರಿತು ವಾರಂಟ್ ಹೊರಡಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.