ಸಾರಿಗೆ ಮುಷ್ಕರ : ಬಿಎಂಟಿಸಿ ಪಾಸು ಖರೀದಿ ಮಾಡಿದವರಿಗೆ ಮಹಾ ಮೋಸ !
ಬೆಂಗಳೂರು, ಏಪ್ರಿಲ್ 10: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರು ಮತ್ತು ಇಲಾಖೆ ನಡುವೆ ಉಂಟಾಗಿರುವ ಸಮರದಲ್ಲಿ ಬಡ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ. ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ಬಸ್ ಗಳನ್ನು ನಂಬಿಕೊಂಡು ಮಾಸಿಕ ಪಾಸು ಖರೀದಿ ಮಾಡಿರುವ ಲಕ್ಷಾಂತರ ಪ್ರಯಾಣಿಕರು ಇದೀಗ ನಷ್ಟ ಅನುಭವಿಸುವಂತಾಗಿದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇಲ್ಲಿ ನೌಕರರ ಮತ್ತು ಇಲಾಖೆ ನಡುವಿನ ಮುಷ್ಕರದಲ್ಲಿ ಪ್ರಯಾಣಿಕರು ಬಡವರಾಗಿದ್ದಾರೆ.
ಸಾವಿರಾರು ಪಾಸು : ರಾಜಧಾನಿ ಬೆಂಗಳೂರಿನಲ್ಲಿ ಬಸ್ ಗಳಲ್ಲಿ ಸಂಚರಿಸುವರು ಲಕ್ಷಾಂತರ ಮಂದಿ ಮಧ್ಯಮ ವರ್ಗದವರು. ಕೆಲಸಕ್ಕೆ ಹೋಗುವರು, ಖಾಸಗಿ ಕಂಪನಿಯಲ್ಲಿ ದುಡಿಯುವರು ಬಿಎಂಟಿಸಿ ಬಸ್ ಗಳನ್ನೇ ನಂಬಿದ್ದಾರೆ. ಕನಕಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಹೊಸಕೋಟೆ, ಕೋಲಾರ, ತುಮಕೂರು, ಮಂಡ್ಯ, ರಾಮನಗರ, ಆನೇಕಲ್ ಮತ್ತಿತರ ಕಡೆಯಿಂದ ಕೆಎಸ್ಆರ್ ಟಿಸಿ ಬಸ್ ನಲ್ಲೇ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೆ. ಇವರೆಲ್ಲರೂ ಬಹುತೇಕ ಮಾಸಿಕ ಪಾಸ್ ಇಲ್ಲವೇ ವಾರ್ಷಿಕ ಪಾಸ್ ಪಡೆದುಕೊಂಡಿದ್ದಾರೆ. ಮುಷ್ಕರದಿಂದ ಇದೀಗ ಎಲ್ಲರೂ ಕೆಲಸಕ್ಕೂ ಹೋಗಲಾಗದೇ ತೊಂದರೆಗೆ ಈಡಾಗಿದ್ದಾರೆ. ಮಾಸಿಕ, ವಾರ್ಷಿಕ ಪಾಸು ಗಳಿಗೆ ಬಿಎಂಟಿಸಿ, ಕೆಎಸ್ ಆರ್ಟಿಸಿ ಜನರಿಂದ ಶುಲ್ಕ ವಸೂಲಿ ಮಾಡಿದೆ. ಈ ಹಿಂದೆ ಮುಷ್ಕರ ನಡೆದಾಗ ನಾಲ್ಕು ದಿನ, ಈ ಬಾರಿ ನಾಲ್ಕು ದಿನ, ನಷ್ಟವನ್ನು ಭರಿಸುವರ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಪಾಸ್ ಹೊಂದಿದವರಿಗೆ ಆಗಿರುವ ನಷ್ಟವನ್ನು ಸಂಸ್ಥೆಗಳು ಕಟ್ಟಿಕೊಡಲಿ ಎಂಬ ಕೂಗು ಕೇಳಿ ಬರುತ್ತಿದೆ.
ರಾಮನಗರ: ಮುಷ್ಕರ ನಿರತ ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ
ವಿದ್ಯಾರ್ಥಿನಿಯೊಬ್ಬಳು ಸಾರಿಗೆ ಮುಷ್ಕರದಿಂದ ನನಗೆ ಅನ್ಯಾಯವಾಗಿದೆ. ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದರಿಂದ ನನ್ನ ಭವಿಷ್ಯವೇ ಹಾಳಾಗಿದೆ. ಹತ್ತು ಲಕ್ಷ ರೂ. ಪರಿಹಾರ ಕಟ್ಟಿಕೊಡಿ ಎಂದು ಬಿಎಂಟಿಸಿಗೆ ವಿದ್ಯಾರ್ಥಿನಿಯೊಬ್ಬಳು ದೂರು ನೀಡಿದ್ದಾಳೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದ್ದು, ಇನ್ನೂ ಕೆಲವರು ಸಂಸ್ಥೆಗಳ ವಿರುದ್ಧ ಗ್ರಾಹಕ ವೇದಿಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಮುಂದುವರೆದ ಮುಷ್ಕರ: ಇನ್ನು ಸಾರಿಗೆ ನೌಕರರ ಮುಷ್ಕರ ಆರಂಭವಾಗಿ ಮೂರು ದಿನ ಮುಗಿದಿದೆ. ಸರ್ಕಾರ ಕೂಡ ಸೊಪ್ಪು ಹಾಕುತ್ತಿಲ್ಲ. ಸಾರಿಗೆ ನೌಕಕರರು ಕೂಡ ಪಟ್ಟು ಬಿಡುತ್ತಿಲ್ಲ. ಇದರ ನಡುವೆ ರಸ್ತೆಗಳಿಗೆ ಇಳಿದಿರುವ ಖಾಸಗಿ ಬಸ್ ಗಳು ಜನರಿಂದ ಅನಿವಾರ್ಯವಾಗಿ ಸುಲಿಗೆ ಮಾಡಲು ಇಳಿದಿವೆ. ಶನಿವಾರ ಕೂಡ ಸಾರಿಗೆ ನೌಕರರು ಕೆಲಸ ತ್ಯಜಿಸಿ ಮುಷ್ಕರ ಮುಂದುವರೆಸಿದ್ದಾರೆ. ಸರ್ಕಾರದ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದರೂ ಈ ಬಾರಿ ಮಣಿಯುತ್ತಿಲ್ಲ. ಬದಲಿಗೆ ಖಾಸಗಿವರಿಗೆ ಮಣೆ ಹಾಕಿದೆ. ಇನ್ನೂ ಅನೇಕ ದಿನ ಮುಷ್ಕರ ಮುಂದುವರೆಯುವ ಸಾಧ್ಯತೆಯಿದ್ದು, ದಂಪತಿ ಜಗಳದಲ್ಲಿ ಕೂಸು ಬಡವಾದಂತೆ ಸಾರಿಗೆ ನೌಕರರ ಮತ್ತು ಸರ್ಕಾರದ ನಡುವಿನ ಗಲಾಟೆಯಲ್ಲಿ ಪ್ರಯಾಣಿಕರು ಬಡವರಾದಂತಾಗಿದೆ.
Recommended Video