ಬೆಂಗಳೂರಿನಲ್ಲಿ ಸಾರಿಗೆ ಮುಷ್ಕರ ಬಿಸಿ; ಹೇಗಿದೆ ನಗರದ ಚಿತ್ರಣ?
ಬೆಂಗಳೂರು, ಏಪ್ರಿಲ್ 7: ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಬುಧವಾರ ರಾಜ್ಯಾದ್ಯಂತ ನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದು, ಮುಷ್ಕರದ ಬಿಸಿ ಈಗಾಗಲೇ ಸಾರ್ವಜನಿಕರಿಗೆ ತಟ್ಟಿದೆ.
Recommended Video
ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಬೇರೆ ಊರುಗಳಿಂದ ಬಂದು ಬಸ್ ಸಿಗದೆ ನೂರಾರು ಪ್ರಯಾಣಿಕರು ಪರದಾಡುತ್ತಿರುವ ದೃಶ್ಯ ಬೆಳಿಗ್ಗೆ ಕಂಡುಬಂದಿದೆ. ಮುಷ್ಕರದಿಂದಾಗಿ ಮೆಜಿಸ್ಟಿಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿವೆ. ಸರ್ಕಾರ ಬಸ್ ನಿಲ್ದಾಣದಲ್ಲಿ ಆರಕ್ಕೂ ಹೆಚ್ಚು ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಿದ್ದು, ಆಟೋಗಳ ಸಂಚಾರವೂ ಹೆಚ್ಚಾಗಿದೆ. ಸದ್ಯಕ್ಕೆ ಏರ್ ಪೋರ್ಟ್ ಗೆ ಎರಡು ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರಿಗೆ ನೌಕರರ ಮುಷ್ಕರಕ್ಕೆ ಸಡ್ಡು ಹೊಡೆಯಲು ಸರ್ಕಾರದ 'ಖಾಸಗಿ' ಅಸ್ತ್ರ ತೆಗೆದುಕೊಂಡಿದೆ. ಮುಂದೆ ಓದಿ...
1 ಲಕ್ಷದ 30 ಸಾವಿರ ಸಾರಿಗೆ ಸಿಬ್ಬಂದಿ ಪ್ರತಿಭಟನೆ
1 ಲಕ್ಷದ 30 ಸಾವಿರ ಸಾರಿಗೆ ಸಿಬ್ಬಂದಿ ಇಂದು ಆರನೇ ವೇತನ ಆಯೋಗ ಜಾರಿ ಆಗ್ರಹಿಸಿ ಬಸ್ ಬಂದ್ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯವ್ಯ, ಈಶಾನ್ಯ ಸಾರಿಗೆ ನಿಗಮಗಳ ನೌಕರರಿಂದ ಬಸ್ ಬಂದ್ ಆಗಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿದೆ. ಸರ್ಕಾರ ಆರನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ ಎಂದು ಈಗಾಗಲೇ ತಿಳಿಸಿದ್ದು, ಇದರ ಹೊರತು ಇತರೆ 8 ಬೇಡಿಕೆಗಳನ್ನು ಈಡೇರಿಸಲಾಗಿದೆ ಎನ್ನುತ್ತಿದೆ. ಆದರೆ 8 ಬೇಡಿಕೆಯನ್ನೂ ಸರ್ಕಾರ ಈಡೇರಿಸಿಲ್ಲ ಎಂದು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಮಂಗಳವಾರವೇ ಬಸ್ ಗಳನ್ನು ಡಿಪೋದಲ್ಲಿ ಬಿಟ್ಟು ನೌಕರರು ಮನೆಗೆ ತೆರಳಿದ್ದು, ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕ ಬಸ್ ಮುಷ್ಕರ: ವಿವಿಧ ಜಿಲ್ಲೆಗಳ ಪರಿಸ್ಥಿತಿ ಏನು?
ಮುಷ್ಕರಕ್ಕೆ ಮುಂದಾದವರ ಮೇಲೆ ಕಠಿಣ ಕ್ರಮದ ಎಚ್ಚರಿಕೆ
ಮುಷ್ಕರಕ್ಕೆ ಮುಂದಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ವೇತನ ಕಡಿತ, ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದು, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಇಂದು ಸಾರಿಗೆ ನೌಕರರ ಸಂಘದ ಒಕ್ಕೂಟ ಮುಷ್ಕರ ನಡೆಸುತ್ತಿದೆ. ಸಾರಿಗೆ ನೌಕರರ ಮುಷ್ಕರಕ್ಕೆ ಸಡ್ಡು ಹೊಡೆಯಲು ಸರ್ಕಾರದ 'ಖಾಸಗಿ' ಅಸ್ತ್ರ ಪ್ರಯೋಗಿಸಿದ್ದು, ಇಂದು ಖಾಸಗಿ ಬಸ್ ಹಾಗೂ ಶಾಲಾ ಬಸ್ ಗಳನ್ನು ನಿಲ್ದಾಣಕ್ಕೆ ತಂದು ನಿಲ್ಲಿಸಲು ಸೂಚನೆ ನೀಡಲಾಗಿದೆ.
ಸಾರಿಗೆ ನೌಕರರ ಬೇಡಿಕೆಗಳು ಏನೇನು..?
ಕಳೆದ ಡಿಸೆಂಬರ್ನಲ್ಲಿ ಇದೇ ರೀತಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದ ಸಾರಿಗೆ ನೌಕರರು ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿ ಸರ್ಕಾರಕ್ಕೆ ಮೂರು ತಿಂಗಳ ಗುಡವು ನೀಡಿದ್ದರು. ಬೇಡಿಕೆ ಈಡೇರದ ಹಿನ್ನೆಲೆ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳು ಏನೇನು..?
- ಜ್ಯೋತಿ ಸಂಜೀವಿನಿ ವಿಮಾ ಯೋಜನೆ ಜಾರಿ
- ಕೊರೊನಾದಿಂದ ಮೃತಪಟ್ಟರೆ ₹30ಲಕ್ಷ ಪರಿಹಾರ
- ನಿಗಮದಲ್ಲಿ HRMS ಪದ್ಧತಿ ಜಾರಿ
- ಸಾರಿಗೆ ಸಿಬ್ಬಂದಿಗೆ ಭತ್ಯೆ ನೀಡಲು ಕ್ರಮ
- ನೌಕರರಿಗೆ ಕಿರುಕಳ ತಪ್ಪಿಸಲು ಸೂಕ್ತ ಕ್ರಮ
- NINC ಪುನರ್ ಪರಿಶೀಲನೆಗೆ ಒಪ್ಪಿಗೆ
- ಅಂತರ್ ನಿಗಮ ವರ್ಗಾವಣೆಗೆ ಆದೇಶ
- ತರಬೇತಿ ಅವಧಿ 1 ವರ್ಷಕ್ಕೆ ಇಳಿಕೆ
- 6ನೇ ವೇತನ ಆಯೋಗ ಜಾರಿ
ಸಾರಿಗೆ ನೌಕರರ ಮುಷ್ಕರ; ಸರ್ಕಾರಿ ಬಸ್ಗಳ ಸಂಚಾರ ಸ್ತಬ್ಧ
ಬೆಂಗಳೂರಿನಲ್ಲಿ ಆರು ಸಾವಿರ ಬಸ್ಗಳ ಸಂಚಾರ ರದ್ದು
ಬೆಂಗಳೂರಿನಲ್ಲಿ ಪ್ರತಿನಿತ್ಯ ಸಂಚರಿಸುತ್ತಿದ್ದ ಆರು ಸಾವಿರ ಬಸ್ಸುಗಳ ಸಂಚಾರ ಇಂದು ಸ್ತಬ್ಧವಾಗಿವೆ. ಹೀಗಾಗಿ ಇಂದು ಮೂವತ್ತು ಲಕ್ಷ ಪ್ರಯಾಣಿಕರಿಗೆ ಭಾರೀ ತೊಂದರೆ ಎದುರಾಗಿದೆ. ರಾಜ್ಯಾದ್ಯಂತ ಒಂದು ಕೋಟಿ ಮಂದಿಗೆ ಮುಷ್ಕರದಿಂದ ತೀವ್ರ ತೊಂದರೆಯಾಗಿದೆ. ರಾಜ್ಯಾದ್ಯಂತ ಸುಮಾರು ಇಪ್ಪತ್ತು ಸಾವಿರ ಬಸ್ಸುಗಳ ಸಂಚಾರ ಬಂದ್ ಆಗಿದೆ. ಮುರ್ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಬಸ್ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗಲಿದೆ.
ಬೆಂಗಳೂರಿನಲ್ಲಿ ಮೆಟ್ರೋ ಹೆಚ್ಚುವರಿ ಸೇವೆ
ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಸೇವೆ ನೀಡಲು ತೀರ್ಮಾನಿಸಿದ್ದು, ಹೆಚ್ಚು ಮೆಟ್ರೊ ರೈಲುಗಳನ್ನು ಓಡಿಸಲಾಗುತ್ತಿದೆ. ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಹೆಚ್ಚುವರಿ ಟ್ರಿಪ್ ಓಡಿಸಲು ನಿರ್ಧಾರಿಸಲಿದ್ದು ರೈಲುಗಳ ಓಡಾಟದ ಅಂತರ ತಗ್ಗಿಸುವ ಮೂಲಕ ಹೆಚ್ಚುವರಿ ಸೇವೆ ನೀಡಲಾಗುತ್ತಿದೆ. ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೂ ಹೆಚ್ಚು ರೈಲುಗಳು ಓಡಾಡಲಿವೆ. ನೇರಳೆ ಮಾರ್ಗದಲ್ಲಿ ಪ್ರತಿ 4.5 ನಿಮಿಷ, ಹಸಿರು ಮಾರ್ಗದಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸಲಿದೆ.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿವಿ ಪದವಿ, ಡಿಪ್ಲೊಮಾ ತರಗತಿ ಸೇರಿದಂತೆ ಎಲ್ಲ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಬಸ್ ವ್ಯತ್ಯಯದ ಕುರಿತು ವಿದ್ಯಾರ್ಥಿಗಳ ಮನವಿ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದೆ.
ಬಸ್ ನಿಲ್ದಾಣದಲ್ಲೇ ವ್ಯಕ್ತಿ ಸಾವು
ಬಿಎಂಟಿಸಿ ಇಂದು ಬೆಳಿಗ್ಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಆನೇಕಲ್ನ ಜಿಗಣಿಯಿಂದ ಬಂದಿದ್ದ ಚನ್ನಪ್ಪ (77) ಎಂಬ ವ್ಯಕ್ತಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಟೀ ಕುಡಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ಆದರೆ ವ್ಯಕ್ತಿ ಸತ್ತು 20 ನಿಮಿಷಗಳಾದರೂ ಅಧಿಕಾರಿಗಳು ಸುಳಿದಿರಲಿಲ್ಲ. ಚನ್ನಪ್ಪ ಅವರ ಅಳಿಯನಿಗೆ ಫೋನ್ ಮಾಡಿ ಪೋಲಿಸರು ಮಾಹಿತಿ ನೀಡಿದ್ದಾರೆ.