ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಬಸ್ ಬುಕ್: ಸಾರ್ವಜನಿಕರ ಪ್ರಯಾಣಕ್ಕೆ ಬಸ್ ಕೊರತೆ
ಬೆಂಗಳೂರು ಮೇ 14: ಜೆಡಿಎಸ್ ಆಯೋಜಿಸಿದ್ದ ಜನತಾ ಜಲಧಾರೆಯ ಸಮಾವೇಶದಿಂದ ಸಾರ್ವಜನಿಕರ ಪ್ರಯಾಣಕ್ಕೆ ಬಸ್ ಕೊರತೆಯನ್ನು ಎದುರಿಸಿದ್ದಾರೆ.
ನೀರಾವರಿ ಯೋಜನೆಗಳ ಕುರಿತು ಜಾಗೃತಿ, ಜೆಡಿಎಸ್ ಬಲವರ್ಧನೆಗೆ ಏ.16ರಂದು ಆರಂಭವಾದ ಜನತಾ ಜಲಧಾರೆಯ ಸಮಾವೇಶ ನೆಲಮಂಗಲದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಕಾರ್ಯಕರ್ತರನ್ನು ಕರೆತರಲು ಜೆಡಿಎಸ್ 3,000 ಬಸ್ಗಳನ್ನು ಬಾಡಿಗೆಗೆ ಪಡೆದುಕೊಂಡಿತ್ತು. ಇದರಿಂದಾಗಿ ಸಾರ್ವಜನಿಕರ ಪ್ರಯಾಣಕ್ಕೆ ಬಸ್ ಕೊರತೆ ಎದುರಾಗಿದ್ದು ಕಂಡುಬಂದಿದೆ. ಪಕ್ಷ ಹಳೆ ಮೈಸೂರು ಪ್ರದೇಶದಲ್ಲಿ ದಿನಕ್ಕೆ ಒಟ್ಟು 3,000 ಕೆಎಸ್ಆರ್ಟಿಸಿ ಬಸ್ಗಳನ್ನು ಬಾಡಿಗೆಗೆ ತೆಗೆದುಕೊಂಡಿದೆ. ಇದರಿಂದ ಎಂದಿನಂತೆ ಕೆಲಸಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಬಸ್ ಕೊರತೆ ಎದುರಾಗಿತ್ತು
ಕಾರ್ಯಕ್ರಮಕ್ಕೆ ರಾಮನಗರ ಜಿಲ್ಲೆಯಿಂದ ಪಕ್ಷದ ಕಾರ್ಯಕರ್ತರನ್ನು ಕರೆದೊಯ್ಯುವ ಸಲುವಾಗಿ ಕೆಎಸ್ಆರ್ಟಿಸಿ ಬಸ್ಗಳನ್ನು ಪಕ್ಷದ ವತಿಯಿಂದ ಬುಕ್ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರ ಪ್ರಯಾಣಕ್ಕೆ ಬಸ್ ಕೊರತೆ ಎದುರಾಗಿತ್ತು. ಸರಿಯಾದ ಸಮಯಕ್ಕೆ ಬಸ್ ಸಿಗದೆ ಪರದಾಡುತ್ತಿದ್ದ ದೃಶ್ಯ ಜಿಲ್ಲೆಯಾದ್ಯಂತ ಕಂಡುಬಂದಿದೆ. ಹಾಗಾಗಿ, ಜನತೆ ನಿಗದಿತ ಸಮಯಕ್ಕೆ ತೆರಳಲು ಸಾಧ್ಯವಾಗದೆ ಪರಿತಪಿಸಿದರು.
ಚನ್ನಪಟ್ಟಣದ ಜನ ರೈಲು ಅವಲಂಬಿಸಿದ್ದರು
ಕೆಲವರು ಬೇರೆ ದಾರಿ ಇಲ್ಲದೆ ರೈಲು, ಖಾಸಗಿ ಬಸ್ ಅಥವಾ ವಾಹನಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ. ರಾಮನಗರ ಜಿಲ್ಲೆಯಿಂದ ಅತಿ ಹೆಚ್ಚು ಮಂದಿ ಉದ್ಯೋಗಿಗಳು ನಿತ್ಯ ಕೆಲಸಕ್ಕಾಗಿ ರಾಜಧಾನಿ ಬೆಂಗಳೂರಿಗೆ ತೆರಳುತ್ತಾರೆ. ಇವರಲ್ಲಿ ಬಹುತೇಕರು ಬಸ್ಗಳನ್ನೇ ಅವಲಂಭಿಸಿದ್ದಾರೆ. ಜಿಲ್ಲಾ ಕೇಂದ್ರ ರಾಮನಗರ, ತಾಲೂಕು ಕೇಂದ್ರ ಕನಕಪುರ ಮತ್ತು ಮಾಗಡಿ ಭಾಗದಿಂದ ಸುಮಾರು 25ಸಾವಿರಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ಕೆಲಸಕ್ಕಾಗಿ ನಿತ್ಯ ಪ್ರಯಾಣ ಬೆಳೆಸುತ್ತಾರೆ. ಇದನ್ನು ಹೊರುತು ಪಡಿಸಿದರೇ, ಚನ್ನಪಟ್ಟಣದ ಜನ ರೈಲು ಅವಲಂಬಿಸಿದ್ದರು.
ಬಸ್ ಅವಲಂಬಿಸಿದವರು, ಶುಕ್ರವಾರ ಬೆಳಗ್ಗೆ ಎಂದಿನಂತೆ ನಿಲ್ದಾಣಕ್ಕೆ ಭೇಟಿ ನೀಡಿದಾಗ, ಬಸ್ ಇಲ್ಲದ್ದನ್ನು ಕಂಡು ದಿಗ್ಭ್ರಾಂತರಾದರು. ಸಾಮಾನ್ಯವಾಗಿ ಬೆಳಗ್ಗೆ 6ರಿಂದ 11ಗಂಟೆವರೆಗೆ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳು ಅಪರೇಟ್ ಆಗುತ್ತವೆ. ಇದನ್ನೆ ನೆಚ್ಚಿಕೊಂಡವರ ಪರಿಸ್ಥಿತಿ ಹೇಳತೀರದಾಗಿತ್ತು.
ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜೂನ್, ಜುಲೈ ತಿಂಗಳಲ್ಲಿ ಮತ್ತೊಂದು ಸುತ್ತಿನ ರಥಯಾತ್ರೆ ನಡೆಸುತ್ತೇನೆ ಎಂದು ಘೋಷಿಸಿದರು. ಹಳ್ಳಿ, ಹಳ್ಳಿಗಳಲ್ಲಿ ರಥಯಾತ್ರೆ ನಡೆಸುತ್ತೇವೆ. ನಾನೇ ಜನರ ಮುಂದೆ ಬರುತ್ತೇನೆ ಎಂದರು. ನಮ್ಮ ಪಕ್ಷದಿಂದಲೇ ಬೆಳೆದು ಹೋದವರು ಜೆಡಿಎಸ್ ಮುಗಿದೇ ಹೋಯಿತು ಎಂದಿದ್ದರು. ಆದರೆ ಜನತಾ ಜಲಧಾರೆ ಸಮಾವೇಶ ಅವರಿಗೆ ಉತ್ತರ ಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 90 ವರ್ಷ ವಯಸ್ಸಿನಲ್ಲೂ ನಾಡಿನ ಜನರಿಗಾಗಿ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ. ರಾಜಕೀಯದ ಬೆಳವಣಿಗೆಗಳ ಪರಿಣಾಮವಾಗಿ ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆದೆ. ಆದರೆ ಯಾವುದೇ ಕಾರ್ಯಕ್ರಮ ಕೊಡಲು ಸ್ವತಂತ್ರ ಅಧಿಕಾರ ಇರಲಿಲ್ಲ. ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ನೋವು ಅನುಭವಿದ್ದು ನನಗೆ ಮಾತ್ರ ಗೊತ್ತು ಎಂದರು. ಹೀಗಾಗಿ ಮೈತ್ರಿ ಸರ್ಕಾರದ ಸಹವಾಸ ಬೇಡ ಬದಲಾಗಿ ಸ್ವತಂತ್ರ ಸರ್ಕಾರ ತರಲು ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.