ಬೆಂಗಳೂರಿನಲ್ಲಿ ಬಿಲ್ಡರ್ ಆತ್ಮಹತ್ಯೆ
ದೊಡ್ಡಬೊಮ್ಮಸಂದ್ರದ ನಿವಾಸಿಯಾದ ಸುರೇಶ್ಬಾಬು ನಾಯ್ಡು (52) ಆತ್ಮಹತ್ಯೆ ಮಾಡಿಕೊಂಡವರು. ದೊಡ್ಡಬೊಮ್ಮಸಂದ್ರ ಬಳಿಯ ಅಪೂರ್ವ ಅಪಾರ್ಟ್ಮೆಂಟ್ ಕೆಳಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ನಾಯ್ಡು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಸುರೇಶ್ ಬಾಬು ನಾಯ್ಡು ಅಪೂರ್ವ ಕನ್ ಷ್ಟ್ರಕ್ಷನ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಲ್ಲಿ ಮಾಡುತ್ತಿದ್ದರು. ದೊಡ್ಡಬೊಮ್ಮಸಂದ್ರದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ನಿವಾಸದ ಸ್ಪಲ್ಪ ದೂರದಲ್ಲೇ 'ಅಪೂರ್ವ' ಹೆಸರಿನ ಅಪಾರ್ಟ್ಮೆಂಟ್ ಕೂಡಾ ಹೊಂದಿದ್ದಾರೆ.
ಅಪೂರ್ವ ಅಪಾರ್ಟ್ ಮೆಂಟ್ ನಲ್ಲಿ ನಾಯ್ಡು ಅವರ ಕಚೇರಿ ಇದೆ. ಇದೇ ಕಚೇರಿಯಲ್ಲಿ ಅವರು ಸೋಮವಾರ ಸಂಜೆ ವ್ಯವಹಾರದ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿಯೇ ತಮ್ಮ ಬಳಿ ಇದ್ದ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡಿದ್ದಾರೆ.
ಗುಂಡಿನ ಶಬ್ದ ಕೇಳಿ ಸ್ಥಳೀಯರು ನಾಯ್ಡು ಅವರನ್ನು ಆಸ್ಪತ್ರೆಗೆ ಕರೆದೊಯ್ಯಯಲು ಪ್ರಯತ್ನಿಸಿದ್ದಾರೆ. ಆದರೆ, ದಾರಿಯ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಗುಂಡು ಹೊಡೆದುಕೊಂಡದ್ದರಿಂದ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.
ವ್ಯಪಾರದಲ್ಲಿ ನಷ್ಟ : ಕೆಲವು ದಿನಗಳಿಂದ ನಾಯ್ಡು ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು, ಸಾಲದ ಸುಳಿಗೆ ಸಿಲುಕಿ ಖಿನ್ನತೆ ಅನುಭವಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.