ಹೋಟೆಲ್ ಮಾಡಿ ಸೋನಿಯಾ ಗಾಂಧಿ ಹೆಸರಿಡಿ: ಸಿ.ಟಿ. ರವಿ ವ್ಯಂಗ್ಯ
ಬೆಂಗಳೂರು, ಡಿಸೆಂಬರ್ 19: ಇಂದಿರಾ ಕ್ಯಾಂಟೀನ್ನ ಒಂದೊಂದು ಕಟ್ಟಡಕ್ಕೆ 1 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ. ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಕಾಂಗ್ರೆಸ್ಸಿನವರು ಕೊಳ್ಳೆ ಹೊಡೆದಿದ್ದಾರೆ. ಅದರ ತನಿಖೆ ನಡೆಯಲಿದೆ. ಎಲ್ಲರ ಬಣ್ಣ ಬಯಲಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದುಡ್ಡಿನಲ್ಲಿಯೇ ಇಂದಿರಾ ಕ್ಯಾಂಟೀನ್ ನಡೆಸುವುದಾದರೆ ಯಾರ ಅಭ್ಯಂತರವೂ ಇಲ್ಲ. ಹಣ ಕೊಳ್ಳೆ ಹೊಡೆದ ಪಾಪಕ್ಕೆ ಪ್ರಯಶ್ಚಿತ ಮಾಡಿದಂತಾಗುತ್ತದೆ. ಬೇಕಾದರೆ ಮಾಂಸಾಹಾರದ ಹೋಟೆಲ್ ಆರಂಭಿಸಿ ಅದಕ್ಕೆ ಸೋನಿಯಾ ಗಾಂಧಿ ಅವರ ಹೆಸರನ್ನೂ ಇಟ್ಟುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಬದುಕಿರುವವರೆಗೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾಗಲು ಬಿಡೆವು: ಡಿಕೆಶಿ
ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಕೀಯ ದ್ವೇಷ ಮಾಡುತ್ತಿಲ್ಲ. ಒಂದು ಕ್ಯಾಂಟೀನ್ ನಿರ್ಮಾಣಕ್ಕೆ ದರಪಟ್ಟಿ ಹೆಚ್ಚಿಸಿ ಒಂದು ಕೋಟಿ ರೂ ಖರ್ಚು ಮಾಡಿದ್ದಾರೆ. ಅದರಲ್ಲಿ ಏನು ಬೆಳ್ಳಿ ಇಟ್ಟಿಗೆ ಇಟ್ಟಿದ್ದಾರೆಯೇ? 20 ಜನರಿಗೆ ಊಟ ಸಿದ್ಧಮಾಡಿ 200 ಊಟದ ಬಿಲ್ ಮಾಡುತ್ತಿದ್ದಾರೆ. ಯಾವ ಬೀಗರಿಗೆ ಗುತ್ತಿಗೆ ನೀಡಿದ್ದಾರೆ ಎನ್ನುವುದು ಸಹ ಗೊತ್ತಿದೆ ಎಂದರು.
ವಾಜಪೇಯಿ ಫಲಕ ಕಿತ್ತವರು
ಕ್ಯಾಂಟೀನ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ನವರು ನಮಗೆ ಪಾಠ ಮಾಡುವುದು ಸರಿಯಲ್ಲ. ಸುವರ್ಣ ಚತುಷ್ಪಥ ರಸ್ತೆಯಲ್ಲಿ ಇದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಫಲಕ ಕಿತ್ತುಹಾಕಲು ನೂರಾರು ಕೋಟಿ ರೂ ಖರ್ಚು ಮಾಡಿದ ಖದೀಮರು ಅವರು ಎಂದು ಕಿಡಿಕಾರಿದರು.
ಅನ್ನಪೂರ್ಣೇಶ್ವರಿ ಎಂದು ಬದಲಿಸಿ
ಇಂದಿರಾ ಕ್ಯಾಂಟೀನ್ ಹೆಸರನ್ನು ವಾಲ್ಮೀಕಿ ಅನ್ನ ಕುಟೀರ ಎಂದು ಬದಲಿಸಲು ಸರ್ಕಾರ ನಿರ್ಧರಿಸಿಲ್ಲ. ಹೀಗೆ ಹೆಸರು ಬದಲಿಸಬಹುದು ಎಂದು ಮನವಿ ಬಂದಿದೆಯಷ್ಟೇ. ಆದರೆ ಹೆಸರು ಬದಲಿಸುವ ಮೊದಲೇ ಗುಲ್ಲೆಬ್ಬಿಸಲಾಗಿದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವುದಾದರೆ 'ಅನ್ನಪೂರ್ಣೇಶ್ವರಿ' ಎಂದು ಹೆಸರಿಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
'ಬಿಜೆಪಿ ತನ್ನ ಸಣ್ಣ ಬುದ್ಧಿ ಬದಲಾಯಿಸಲಿ, ಕ್ಯಾಂಟೀನ್ ಹೆಸರನಲ್ಲ'
ಮುಚ್ಚುವುದೇ ಒಳಿತು
ಕಾಂಗ್ರೆಸ್ಸಿಗರು ದುಡ್ಡು ಹೊಡೆಯಲು ಮಾಡಿದ ಸಂಚಿನ ಫಲವೇ ಇಂದಿರಾ ಕ್ಯಾಂಟೀನ್. ಇದರ ಹೆಸರಿನಲ್ಲಿ ಸರ್ಕಾರದ ದುಡ್ಡನ್ನು ಪೋಲು ಮಾಡಲು ಬಿಡುವುದಿಲ್ಲ. ಅದಕ್ಕಾಗಿ ಅದನ್ನು ಮುಚ್ಚುವುದೇ ಒಳ್ಳೆಯದು. ಸರ್ಕಾರದ ಹಣದಲ್ಲಿ ಕ್ಯಾಂಟೀನ್ ಮುಂದುವರಿಯುವುದು ಬೇಡ. ಮುಂದುವರಿಸುವುದಾದರೆ ಹೆಸರು ಬದಲಾವಣೆ ಮಾಡಲಿ ಎಂದರು.
ಯಡಿಯೂರಪ್ಪ ಸ್ಪಷ್ಟನೆ
ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಅಂತಹ ಆಲೋಚನೆಯನ್ನು ಕೂಡ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮುಂದಾದ ಬಿಜೆಪಿ ಸರ್ಕಾರ
ಈ ಕ್ಯಾಂಟೀನ್ಗಳಲ್ಲಿ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಆಗುತ್ತಿದೆ. ಇಲ್ಲಿ ಊಟ ಮಾಡುತ್ತಿರುವವರ ಸಂಖ್ಯೆಗೂ ಗುತ್ತಿಗೆದಾರರು ಕೊಡುತ್ತಿರುವ ಲೆಕ್ಕಕ್ಕೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಸಚಿವ ಆರ್. ಅಶೋಕ ಅರೋಪಿಸಿದ್ದಾರೆ.