ಜಾರಕಿಹೊಳಿ 'ಸಿಡಿ' ಸ್ಫೋಟದ ಮಧ್ಯೆ ಇಂದಿನಿಂದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ
ಬೆಂಗಳೂರು, ಮಾ. 04: 'ಸಿಡಿ' ಸ್ಫೋಟದ ಮಧ್ಯೆ ಇಂದಿನಿಂದ ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ 'ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತು ವಿಶೇಷ ಚರ್ಚೆಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಜೆಂಡಾ ನಿಗದಿ ಮಾಡಿದ್ದಾರೆ. ಇಂದು ಮತ್ತು ನಾಳೆ ಇದೇ ವಿಷಯದ ಮೇಲೆ ಚರ್ಚೆಗೆ ಕಾಲ ನಿಗದಿ ಮಾಡಲಾಗಿದೆ.
ಆದರೆ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಕಲಾಪದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಸ್ಫೋಟವಾಗುವ ಎಲ್ಲ ಸಾಧ್ಯತೆಗಳಿವೆ. ಸಿಡಿ ಸ್ಫೋಟಕ್ಕೆ ಮೊದಲ ದಿನದ ಕಲಾಪ ಬಲಿಯಾಗಲೂ ಬಹುದು. ಅಥವಾ ಈಗಾಗಲೇ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿರುವುದರಿಂದ ಆ ವಿಚಾರ ಮುಗಿದ ಅಧ್ಯಾಯ ಎಂದು ಬಿಜೆಪಿ ತಿರುಗೇಟು ಕೊಡಬಹುದು.
ಒಟ್ಟು 19 ದಿನಗಳ ಕಾಲ ನಡೆಯಲಿರುವ ಬಜೆಟ್ ಅಧಿವೇಶದನಲ್ಲಿ ಮಾ. 08 ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆ ನಂತರ ಮಾರ್ಚ್ 31ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಕೊರೊನಾ ಮಾರ್ಗಸೂಚಿಗಳಂತೆಯೆ ಕಲಾಪ ನಡೆಯಲಿದೆ.
Recommended Video
ಎರಡು ದಿನಗಳ ಕಾಲ 'ಒಂದು ರಾಷ್ಟ್ರ ಒಂದು ಚುನಾವಣೆ' ವಿಷಯದ ಮೇಲೆ ಚರ್ಚೆ ನಡೆಯುವ ಸಂದರ್ಭದಲ್ಲಿ ಪ್ರಶ್ನೋತ್ತರ ಸೇರಿದಂತೆ ಇನ್ಯಾವುದೇ ಕಲಾಪ ಇರುವುದಿಲ್ಲ ಎಂದು ಸ್ಪೀಕರ್ ಕಚೇರಿ ತಿಳಿಸಿದೆ.