ಚಿನ್ನದ ಪದಕ ನೀಡುವುದಾಗಿ ಹೇಳಿ 500 ರೂ ಕೊಟ್ಟರು!
ಬೆಂಗಳೂರು, ಫೆಬ್ರವರಿ 09 : ಬೆಂಗಳೂರು ವಿಶ್ವವಿದ್ಯಾಲಯ 53ನೇ ಘಟಿಕೋತ್ಸವ ಅಕ್ಷರಶಃ ಅಧ್ವಾನವಾಗಿತ್ತು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆದ ಘಟಿಕೋತ್ಸವಕ್ಕೆ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜೂಭಾಯಿ ವಾಲಾ ಮತ್ತು ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಗೈರಾಗಿದ್ದರು.
ಬೆಂಗಳೂರು ವಿಶ್ವವಿದ್ಯಾಲಯ: ಈ ಬಾರಿ ಯಾರಿಗೂ ಗೌರವ ಡಾಕ್ಟರೇಟ್ ಇಲ್ಲ
ಘಟಿಕೋತ್ಸವದಲ್ಲಿ ಚಿನ್ನದ ಪದಕ ಸಿಗದ ವಿದ್ಯಾರ್ಥಿಗಳು ನಮಗೆ ಚಿನ್ನದ ಪದಕ ಬೇಕು, ಅಲ್ಲದೆ ರ್ಯಾಂಕ್ ಪಟ್ಟಿಯಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ ಎಂದು ಅತಿಥಿಗಳು ಊಟ ಮಾಡುತ್ತಿದ್ದ ಸ್ಥಳಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾತ್ಕಾಲಿಕ ಪಟ್ಟಿಯಲ್ಲಿ 380 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಘೋಷಣೆ ಮಾಡಲಾಗಿತ್ತು. ಆದರೆ,112 ವಿದ್ಯಾರ್ಥಿಗಳಿಗೆ ಮಾತ್ರ ಚಿನ್ನದ ಪದಕ ವಿತರಿಸಲಾಯಿತು.
ಉಳಿದ 268 ವಿದ್ಯಾರ್ಥಿಗಳಿಗೆ ಪದಕದ ಬದಲಿಗೆ 500 ರೂ ನಗದು ಬಹುಮಾನವಾಗಿ ಮಾರ್ಪಾಡು ಮಾಡಲಾಗಿತ್ತು. ಆದರೆ, ಇದನ್ನು ವಿದ್ಯಾರ್ಥಿಗಳಿಗೆ ತಿಳಿಸಿರಲಿಲ್ಲ. ಅಂತಿಮ ಪಟ್ಟಿಯನ್ನು ವೆಬ್ ಸೈಟ್ ನಲ್ಲೇ ಪ್ರಕಟಿಸಲಾಗಿದೆ. ಚಿನ್ನದ ಪದಕ ನೀಡುವುದು ವಿವಾದವಾದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ನಗದು ಬಹುಮಾನ ನೀಡಲು ತೀರ್ಮಾಣನಿಸಲಾಯಿತು ಎಂದು ಮೌಲ್ಯಮಾಪನ ಕುಲಸಚಿವ ಸಿ. ಶಿವರಾಜು ಸ್ಪಷ್ಟನೆ ನೀಡಿದ್ದಾರೆ. 23,846 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 19,704 ಪ್ರಥಮ ದರ್ಜೆ, 6,168 ದ್ವಿತೀಯ ದರ್ಜೆ ಪಡೆದಿದ್ದು, ಒಟ್ಟಾರೆ 55,780 ವಿದ್ಯಾರ್ಥಿಗಳು ಪದವಿಗೆ ಭಾಜನರಾಗಿದ್ದಾರೆ.