ಅನುದಾನ ಕಡಿತಗೊಳಿಸಿದ ಯಡಿಯೂರಪ್ಪ ಸರ್ಕಾರ: ಸೆ. 26ಕ್ಕೆ ರಾಮಲಿಂಗಾ ರೆಡ್ಡಿ ಪ್ರತಿಭಟನೆ
ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರು ನಗರದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನದ ಪ್ರಮಾಣವನ್ನು ಬಿಜೆಪಿ ಭಾರಿ ಮಟ್ಟದಲ್ಲಿ ಕಡಿತಗೊಳಿಸಿದೆ ಎಂದು ಆರೋಪಿಸಿ ಸೆ. 26ರಂದು ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಹೆಚ್ಚಿನ ಅನುದಾನ ಪ್ರಕಟಿಸಲಾಗಿತ್ತು. ಆದರೆ ಈಗ ಶೇ 50ಕ್ಕೂ ಹೆಚ್ಚು ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಬಿಟಿಎಂ ಲೇಔಟ್ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಈ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.
ಆನರ್ಹ ಶಾಸಕರ ಕ್ಷೇತ್ರಗಳಿಗೆ ರಾಜ್ಯ ಸರಕಾರದಿಂದ ಕೋಟಿ ಕೋಟಿ ಅನುದಾನ
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಲಾಗಿದ್ದ ಅನುದಾನದ ಮೊತ್ತವನ್ನು ಕಡಿತಗೊಳಿಸಿ ಅದನ್ನು ಬಿಜೆಪಿ ಶಾಸಕರು ಮತ್ತು ಅನರ್ಹ ಶಾಸಕರ ಕ್ಷೇತ್ರಗಳಿಗೆ ಹಂಚಲಾಗಿದೆ ಎಂದು ಆರೋಪಿಸಲಾಗಿದೆ. ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಲಾಗಿತ್ತು, ಎಷ್ಟು ಹಣವನ್ನು ಕಡಿತಗೊಳಿಸಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ಹೊಸದಾಗಿ ನೀಡಲಾಗಿದೆ ಎಂಬ ಪಟ್ಟಿಯನ್ನು ನೀಡಲಾಗಿದೆ. ಬಿಟಿಎಂ ವಿಧಾನಸಭೆ ಕ್ಷೇತ್ರದ ನಾಗರಿಕರು, ನಾಗರಿಕ ಹಿತರಕ್ಷಣಾ ಸಮಿತಿಗಳು, ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
387 ಕೋಟಿ ರೂ.ದಲ್ಲಿ ಕೊಟ್ಟಿದ್ದು 143.41 ಕೋಟಿ ರೂ.
ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆಗಳು, ಮೇಲ್ಸೇತುವೆ, ಉದ್ಯಾನ, ಆಟದ ಮೈದಾನ, ಕೆರೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಬೃಹತ್ ಮಳೆ ನೀರುಗಾಲುವೆ, ಬಡವರ ಮನೆ ನಿರ್ಮಾಣ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗಾಗಿ 2018-19ನೇ ಸಾಲಿನಲ್ಲಿ ಫೆ.1ರಂದು ನಡೆದ ಸಮ್ಮಿಶ್ರ ಸರ್ಕಾರದ ಸಂಪುಟ ಸಭೆಯಲ್ಲಿ 387 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಬಳಿಕ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರವು 387 ಕೋಟಿ ರೂ. ಅನುದಾನದಲ್ಲಿ 243.59 ಕೋಟಿ ರೂ. ಕಡಿತಗೊಳಿಸಿ ಕೇವಲ 143.41 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಶಾಸಕ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ಕಡಿತಗೊಂಡ ಅನುದಾನ ಬಿಜೆಪಿ ಶಾಸಕರ ಕ್ಷೇತ್ರಕ್ಕೆ
ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಅಭಿವೃದ್ಧಿ ಕಾರ್ಯಗಳಿಗೆ ಸಿಗಬೇಕಿದ್ದ ಅನುದಾನಗಳನ್ನು ಕಡಿತಗೊಳಿಸಿ ಅಭಿವೃದ್ಧಿ ಆಗಬೇಕಿದ್ದ ಕ್ಷೇತ್ರಗಳಿಗೆ ಹಂಚಿದ್ದರೆ ಅದಕ್ಕೆ ಯಾವ ಆಕ್ಷೇಪವೂ ಇರಲಿಲ್ಲ. ಆದರೆ ಹೀಗೆ ಕಡಿತಗೊಳಿಸಿದ ಅನುದಾನವನ್ನು ಬಿಜೆಪಿ ಶಾಸಕರು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳಲ್ಲಿನ ಈಗಾಗಲೇ ಚೆನ್ನಾಗಿ ಅಭಿವೃದ್ಧಿಯಾಗಿರುವ ಉದ್ಯಾನ, ಕೆರೆ, ರಸ್ತೆ ಮುಂತಾದ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಚುನಾವಣೆ; ಮೇಯರ್ ಪಟ್ಟದ ಹೊಸ್ತಿಲಲ್ಲಿ ಬಿಜೆಪಿ
ಮೇಲುಸೇತುವೆ ಕಾಮಗಾರಿ ಸ್ಥಗಿತ
ಈಜೀಪುರದಿಂದ ಕೇಂದ್ರೀಯ ಸದನದವರೆಗಿನ ಮೇಲುಸೇತುವೆ ರಸ್ತೆ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ ಕೇವಲ 10 ಕೋಟಿ ರೂ. ಮೀಸಲಿಡಲಾಗಿತ್ತು. ಈ ಕಾಮಗಾರಿಯು 2020ರ ಏಪ್ರಿಲ್ ತಿಂಗಳೊಳಗೆ ಮುಕ್ತಾಯವಾಗಿ, ಇಲ್ಲಿ ಸಂಚಾರ ನಡೆಯುವಂತಾಗಬೇಕು. ಆದರೆ ಕಳೆದ ಎರಡು ತಿಂಗಳಿನಿಂದ ಈ ಕಾಮಗಾರಿಕೆ ಹಣಪಾವತಿಯಾಗಿಲ್ಲ. ಹೀಗಾಗಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆರೋಪಿಸಿದ್ದಾರೆ.
ಅನರ್ಹ ಶಾಸಕರ ಕ್ಷೇತ್ರಕ್ಕೆ ಭರ್ಜರಿ ಅನುದಾನ
ಅನರ್ಹಗೊಂಡಿರುವ ಬೆಂಗಳೂರಿನ ಶಾಸಕರ ಕ್ಷೇತ್ರಗಳ ಪೈಕಿ ಮಹಾಲಕ್ಷ್ಮೀ ಲೇಔಟ್ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಕೆಆರ್ ಪುರ ಕ್ಷೇತ್ರಕ್ಕೆ 288 ಕೋಟಿ ರೂ., ಆರ್ಆರ್ ನಗರ 316.90 ಕೋಟಿ, ಶಿವಾಜಿನಗರ 25.50 ಕೋಟಿ ಮತ್ತು ಯಶವಂತಪುರ ವಿಧಾನಸಭೆ ಕ್ಷೇತ್ರಕ್ಕೆ 424.40 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಮಹಾಲಕ್ಷ್ಮಿ ಲೇಔಟ್ಗೆ ಸಮ್ಮಿಶ್ರ ಸರ್ಕಾರದಲ್ಲಿ ನೀಡಲಾಗಿದ್ದ 424.50 ಕೋಟಿ ರೂ.ನಲ್ಲಿ 70 ಕೋಟಿ ಕಡಿತ ಮಾಡಲಾಗಿದೆ.
ಕೆಜೆ ಜಾರ್ಜ್ ಗೆ ಹಿನ್ನಡೆ, ಎಂಬೆಸ್ಸಿ ಸಂಸ್ಥೆ ಮಂಜೂರಾಗಿದ್ದ ಟೆಂಡರ್ ರದ್ದು
ರಾಜೀವ್ ಚಂದ್ರಶೇಖರ್ ಟೀಕೆ
ಶಾಸಕ ರಾಮಲಿಂಗ ರೆಡ್ಡಿ ಅವರು ನಾಳೆ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸಬೇಕೆಂದು ಕರೆ ನೀಡಿದ್ದು ಅತ್ಯಂತ ನಗೆಪಾಟಲು ಮತ್ತು ಖಂಡನೀಯ ಎಂದು ಸಂಸದ ರಾಜೀವ್ ಚಂದ್ರಶೇಖರ್ ಟೀಕಿಸಿದ್ದಾರೆ.
ಬಿಬಿಎಂಪಿ ಹಣಕಾಸಿನ ಆಂತರಿಕ ಲೆಕ್ಕಪರಿಶೋಧನೆ ನಡೆಸದಿದ್ದಾಗ ಅವರು ಪ್ರತಿಭಟಿಸಲಿಲ್ಲ. ಕಳೆದ 6 ವರ್ಷಗಳಲ್ಲಿ, ಬಿಬಿಎಂಪಿ ಸುಮಾರು 50,000.00 ಸಿಆರ್ ಖರ್ಚು ಮಾಡಿದೆ. ಬಿಬಿಎಂಪಿ ಅಧಿಕಾರಿಗಳ ನಿರಾಸಕ್ತಿ ಮತ್ತು ನಿರ್ಲಕ್ಷ್ಯದಿಂದಾಗಿ 25 ಕ್ಕೂ ಹೆಚ್ಚು ಮುಗ್ಧ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಾಗ ಅವರು ಪ್ರತಿಭಟಿಸಲಿಲ್ಲ ಎಂದು ಟೀಕಿಸಿದ್ದಾರೆ.
ಗುತ್ತಿಗೆದಾರ ಸ್ನೇಹಿತರ ಪರವಾಗಿ ಪ್ರತಿಭಟನೆ
ವೈಟ್ ಟಾಪಿಂಗ್ ರಸ್ತೆಗಳ ಹೆಸರಿನಲ್ಲಿ ತೆರಿಗೆದಾರರ ಹಣವನ್ನು ವ್ಯರ್ಥ ಮಾಡಿದಾಗ ಅವರು ಪ್ರತಿಭಟಿಸಲಿಲ್ಲ. ರಸ್ತೆ ಗುಂಡಿಗಳನ್ನು ತುಂಬಲು ತೆರಿಗೆದಾರರ ಹಣವನ್ನು ವ್ಯರ್ಥ ಮಾಡಿದಾಗ ಅವರು ಪ್ರತಿಭಟಿಸಲಿಲ್ಲ. ಉಕ್ಕಿನ ಸೇತುವೆಗಾಗಿ 2224 ಮರಗಳನ್ನು ಕತ್ತರಿಸಲು ಪ್ರಸ್ತಾಪಿಸಿದಾಗ ಅವರು ಪ್ರತಿಭಟಿಸಲಿಲ್ಲ.
ಮೇಸ್ತ್ರಿಪಾಳ್ಯ ಕೆರೆ ಜಲಾನಯನ ಪ್ರದೇಶವನ್ನು ಸ್ಥಳೀಯ ನಿವಾಸಿಗಳ ಇಚ್ಛೆಗೆ ವಿರುದ್ಧವಾಗಿ ಉದ್ಯಾನವನಕ್ಕೆ ಪರಿವರ್ತಿಸಿದಾಗ ಅವರು ಪ್ರತಿಭಟಿಸಲಿಲ್ಲ. ಮಡಿವಾಳ ಕೆರೆಗೆ ಒಳಚರಂಡಿ ನೀರು ಮತ್ತು ಕಸ ಹಾಕಿದಾಗ ಅವರು ಪ್ರತಿಭಟಿಸಲಿಲ್ಲ. ಬೆಂಗಳೂರಿನ ಎಲ್ಲಾ ಸರೋವರಗಳು ಮತ್ತು ರಾಜಕಾಲುಗಳನ್ನು ತಮ್ಮ ಬಿಲ್ಡರ್ ಸ್ನೇಹಿತರು ಅತಿಕ್ರಮಿಸಿದಾಗ ಅವರು ಪ್ರತಿಭಟಿಸಲಿಲ್ಲ.
ಇಂದು ಅವರು ಕೇವಲ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಲು ತಮ್ಮ ಗುತ್ತಿಗೆದಾರ ಸ್ನೇಹಿತರ ಪರವಾಗಿ ಪ್ರತಿಭಟಿಸುತ್ತಿದ್ದಾರೆ. ಈ ಮನಸ್ಥಿತಿಯನ್ನು ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳು ಯಾವುದೇ ನಗರ ಅಥವಾ ರಾಜಕೀಯ ಪಕ್ಷಗಳಿಗೆ ಹಾನಿಕರ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.