ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಕಾರ್ಯಕ್ರಮಗಳಿಗೆ ಬಿಎಸ್ ವೈ ಚಾಲನೆ
ಬೆಂಗಳೂರು, ಜನವರಿ 5: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಕಾರ್ಯಕ್ರಮಗಳಿಗೆ ಬುಧವಾರ (ಜನವರಿ 6, 2021) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಈ ಕುರಿತು ಮಂಡಳಿಯ ಅಧ್ಯಕ್ಷರಾದ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ವೇಳೆ, ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ 287 ಕೋಟಿ ರುಪಾಯಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿರುವುದಾಗಿ ಹೇಳಿದ್ದರು.
ಅಂದ ಹಾಗೆ ಬುಧವಾರದಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಸಾಂದೀಪನಿ ಶಿಷ್ಯವೇತನ ಯೋಜನೆ, ಪುರುಷೋತ್ತಮ ಯೋಜನೆ, ಅರುಂಧತಿ, ಅನ್ನದಾತ ಹಾಗೂ ಮೈತ್ರೇಯಿ ಯೋಜನೆಗಳಿಗೆ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿಯನ್ನು ಸಹ ಅವರು ಹಂಚಿಕೊಂಡಿದ್ದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಯೋಜನೆ ವಿವರಗಳು ಹೀಗಿವೆ:
* ಐನೂರು ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ.
* ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ, ಒಂದು ಜಿಲ್ಲೆಗೆ ತಲಾ ಮೂವರು ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ.
* ಚಾಣಕ್ಯ ಆಡಳಿತ ತರಬೇತಿ ಯೋಜನೆಯ ಅಡಿಯಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ.
* ಉನ್ನತ ಶಿಕ್ಷಣ ಪೂರ್ಣಗೊಳಿಸುವ 7500 ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಾಂದೀಪನಿ ಶಿಷ್ಯವೇತನದ ಅಡಿಯಲ್ಲಿ ಆರ್ಥಿಕ ನೆರವು.
* ಅರುಂಧತಿ ಯೋಜನೆಯ ಹೆಸರಲ್ಲಿ ಬಡ ಹೆಣ್ಣುಮಕ್ಕಳ ಮದುವೆಗೆ 25 ಸಾವಿರ ರುಪಾಯಿ.
* ಅನ್ನದಾತ ಯೋಜನೆ ಹೆಸರಲ್ಲಿ ಐದು ಎಕರೆಗಿಂತ ಕಡಿಮೆ ಜಮೀನು ಇರುವ ರೈತರಿಗೆ ಕೊಳವೆಬಾವಿ ಕೊರೆಸುವುದಕ್ಕೆ, ಟ್ರ್ಯಾಕ್ಟರ್ ಖರೀದಿಗೆ ಮತ್ತು ಹೈನುಗಾರಿಕೆಗೆ ಧನಸಹಾಯ.
* ಮೈತ್ರೇಯಿ ಯೋಜನೆ ಅಡಿಯಲ್ಲಿ ಅರ್ಚಕರು, ಪುರೋಹಿತರನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ 3 ಲಕ್ಷ ರುಪಾಯಿಯ ಬಾಂಡ್ ನೀಡಲಾಗುತ್ತದೆ.
Recommended Video
* ಬ್ರಾಹ್ಮಣರ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ ಜಿಲ್ಲೆಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯುವುದಕ್ಕೆ ಚಿಂತನೆ.