ಮಂಡ್ಯದ ಜನತೆಯನ್ನು ನಿಂದಿಸಿದ ಸಚಿವ ತಮ್ಮಣ್ಣಗೆ ಬಿಎಸ್ವೈ ಏನಂದ್ರು?
ಬೆಂಗಳೂರು, ಜೂನ್ 8: ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮತ ಹಾಕದ್ದಕ್ಕೆ ಮಂಡ್ಯದ ಜನತೆಯನ್ನು ನಿಂದಿಸಿದ ಸಚಿವ ಡಿಸಿ ತಮ್ಮಣ್ಣಗೆ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಶನಿವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮಣ್ಣ ರಾಜ್ಯದ ಮಂತ್ರಿಯಾಗಿ ರಾಜ್ಯ, ತಮ್ಮ ಜಿಲ್ಲೆಯಲ್ಲೂ ಓಡಾಡುವುದಿಲ್ಲ, ಈ ರೀತಿ ಹಗುರವಾದ ಮಾತುಗಳನ್ನಾಡುತ್ತಾ ತಿರುಗುತ್ತಿದ್ದಾರೆ. ಅವರಿಗೆ ಕಳಕಳಿಯೂ ಇಲ್ಲ, ಜನರ ಸಮಸ್ಯೆಯ ಬಗೆಹರಿಸಬೇಕು ಎಂದೂ ಇಲ್ಲ ಇಂತಹ ಬೇಜವಾಬ್ದಾರಿ ಸಚಿವರು ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದಾರೆ, ಇಂಥವರಿಗೆ ಜನತೆಯೇ ಬುದ್ಧಿ ಕಲಿಸಲಿದೆ ಎಂದು ಹೇಳಿದರು.
ಓಟು ಅವರಿಗೆ, ಕೆಲಸ ನಮ್ಮಿಂದಲಾ?; ಜನರ ಮೇಲೆ ಹರಿಹಾಯ್ದ ಸಚಿವ ತಮ್ಮಣ್ಣ
ಘಟನೆ ಏನು? ಮಂಡ್ಯದಲ್ಲಿ ನಡದ ಕಾರ್ಯಕ್ರಮವೊಂದರಲ್ಲಿ ಸಚಿವ ಡಿಸಿ ತಮ್ಮಣ್ಣ ತೆರಳಿದ್ದಾಗ ತಮಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಜನರು ಕೇಳಿಕೊಂಡ ಸಂದರ್ಭದಲ್ಲಿ ನೀವು ನಿಖಿಲ್ ಗೆ ಮತ ಹಾಕಿಲ್ಲ, ಈಗ ಕೇಳೋಕೆ ಬರ್ತಿರಾ ಎಂದು ಬೈದಿದ್ದಾರೆ. ಇನ್ನೇನು ಜೋಡೆತ್ತುಗಳು ಬರುತ್ತವೆ ಕರೆದು ಹತ್ತಿಸಿಕೊಳ್ಳಿ ಎಂದು ಪರೋಕ್ಷವಾಗಿ ದರ್ಶನ್ -ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಓಟ್ ಹಾಕಲ್ಲ, ಈಗ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಬೈದಿದಿದ್ದಾರೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.