ಬಿಎಸ್ಆರ್, ಬಿಜೆಪಿ ವಿಲೀನಕ್ಕೆ ವೇದಿಕೆ ಸಜ್ಜು!
ಬೆಂಗಳೂರು, ಸೆ.23 : ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆತರುವ ಪ್ರಯತ್ನ ಬಿಜೆಪಿಯಲ್ಲಿ ಜಾರಿಯಲ್ಲಿರುವಾಗಲೇ, ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು ಅವರು ಪಕ್ಷಕ್ಕೆ ಮರಳಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ, ಅದಕ್ಕಾಗಿ ಅವರು ಷರತ್ತುಗಳನ್ನು ಮುಂದಿಟ್ಟಿದ್ದಾರೆ.
ಲೋಕಸಭೆ ಚುನಾವಣೆ ವೇಳೆಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗುವುದು ಬಹುತೇಖ ಖಚಿತವಾಗಿದೆ. ಆದರೆ, ಶ್ರೀರಾಮುಲು ಅವರ ಷರತ್ತುಗಳಿಂಗಾದಿ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ. ಬಿಎಸ್ಆರ್ ಬಿಜೆಪಿಯೊಂದಿಗೆ ಸೇರಿದರೆ, ಬಿಜೆಪಿ ಬಲ ವಿಧಾನಸಭೆಯಲ್ಲಿ ಹೆಚ್ಚಾಗಲಿದೆ.
ಆದ್ದರಿಂದ, ಜೆಡಿಎಸ್ ಪಾಲಾಗಿರುವ ಪ್ರತಿಪಕ್ಷ ಸ್ಥಾನ ಬಿಜೆಪಿಗೆ ಒಲಿಯುತ್ತದೆ. ನಿಮ್ಮ ಜೊತೆ ಕೈ ಜೋಡಿಸಿದರೆ, ವಿಧಾನಸಭೆಯಲ್ಲಿ ಪ್ರತಿಪಕ್ಷ ಉಪ ನಾಯಕರ ಸ್ಥಾನವನ್ನು ನನಗೆ ನೀಡಬೇಕು ಎಂದು ಶ್ರೀರಾಮುಲು ಷರತ್ತು ಹಾಕಿದ್ದಾರೆ.
ಶ್ರೀರಾಮುಲು ಅವರ ಬೇಡಿಕೆಗಳ ಕುರಿತು ಬಿಜೆಪಿಯಲ್ಲಿ ಚರ್ಚೆಗಳು ಪ್ರಾರಂಭವಾಗಿದೆ. ಆದರೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲು ಒಪ್ಪಿಗೆ ನೀಡುತ್ತಾರೆಯೇ? ಎಂಬ ಪ್ರಶ್ನೆ ಸದ್ಯಕ್ಕೆ ಕಾಡುತ್ತಿದೆ. ಎರಡೂ ಪಕ್ಷಗಳ ನಡುವಿನ ವಿಲೀನಕ್ಕೆ ವೇದಿಕೆಯಂತೂ ಸಜ್ಜುಗೊಂಡಿದೆ. ಶ್ರೀರಾಮುಲು ಷರತ್ತುಗಳು
ಉಪ ನಾಯಕನ ಸ್ಥಾನ
ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ಬಿಜೆಪಿಯಲ್ಲಿ ವಿಲೀನಗೊಳ್ಳುವುದರಿಂದ ಬಿಜೆಪಿಗೆ ವಿಧಾನಸಭೆಯ ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನ ಲಭ್ಯವಾಗಲಿದೆ. ಆದ್ದರಿಂದ ವಿರೋಧ ಪಕ್ಷದ ಉಪನಾಯಕನ ಸ್ಥಾನ ತಮಗೆ ನೀಡಬೇಕು ಎಂಬುದು ಶ್ರೀರಾಮುಲು ಅವರ ಮೊದಲ ಷರತ್ತು.
ಕೋರ್ ಕಮಿಟಿಗೆ ಸೇರ್ಪಡೆ
ಬಿಜೆಪಿ ರಾಜ್ಯ ಘಟಕ ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ ತಮ್ಮನ್ನೂ ಮುಖ್ಯವಾಗಿ ಪರಿಗಣಿಸಬೇಕು. ಇದಕ್ಕೆ ಪೂರಕವಾಗಿ ರಾಜ್ಯ ಸಮಿತಿಯಲ್ಲಿ ಹಾಗೂ ಕೋರ್ ಕಮಿಟಿಯಲ್ಲಿ ಸ್ಥಾನಾವಕಾಶ ಕಲ್ಪಿಸಬೇಕು ಎಂದು ಶ್ರೀರಾಮುಲು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಷರತ್ತುಗಳೇ ಸಮಸ್ಯೆ
ಬಿಎಸ್ಆರ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ಷರತ್ತುಗಳೇ ಪ್ರಮುಖ ಸಮಸ್ಯೆಯಾಗಿದೆ. ಬಿಜೆಪಿ ನಾಯಕರು ಬಿಎಸ್ಆರ್ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದ್ದು, ರಾಷ್ಟ್ರೀಯ ನಾಯಕರ ಅನುಮತಿ ದೊರೆಯಬೇಕಾಗಿದೆ.
ಅಶೋಕ್ ವಿರೋಧ
ಶ್ರೀರಾಮುಲು ಮೊದಲ ಬೇಡಿಕೆಗೆ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕನ ಸ್ಥಾನವನ್ನು ಅವರ ಬಳಿ ಇದೆ. ಅಶೋಕ್ ಕೈಯಿಂದ ಕಿತ್ತು ಅದನ್ನು ಶ್ರೀರಾಮುಲು ಅವರಿಗೆ ಕೊಡುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಬಿಜೆಪಿ ನಾಯಕರಿಗೆ ತಿಳಿದಿದೆ.
ಸುಷ್ಮಾ ಸ್ವರಾಜ್ ಅಡ್ಡಗಾಲು
ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ನಾಯಕರ ಸಭೆಯಲ್ಲಿ ಬಿಎಸ್ಆರ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಕುರಿತು ಚರ್ಚೆ ನಡೆದಿದೆ. ಸಭೆಯಲ್ಲಿ ಹಾಜರಿದ್ದ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ವಿಚಾರದಲ್ಲಿ ಬಿಜೆಪಿ ಅಂತಿಮ ತೀರ್ಮಾನ ಕೈಗೊಂಡಿಲ್ಲ.