ಕೇಂದ್ರದ ಉದ್ಯೋಗಗಳಲ್ಲಿ ಕನ್ನಡಿಗರು ಹಿಂದೆ: ಯಡಿಯೂರಪ್ಪ ಕಳವಳ
ಬೆಂಗಳೂರು, ಆಗಸ್ಟ್ 24: ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಸ್ಥಾನ ದೊರಕದೆ ಇರುವುದರ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಭಾಷೆಗಳಲ್ಲಿಯೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವಂತೆ ಕೇಂದ್ರಕ್ಕೆ ಸರ್ಕಾರ ಒತ್ತಡ ಹೇರುತ್ತಲೇ ಇದೆ ಎಂದೂ ಅವರು ಹೇಳಿದ್ದಾರೆ.
ಆದರೆ, ರಾಜ್ಯ ಸರ್ಕಾರ ಯಾವ ರೀತಿಯ ಒತ್ತಡಗಳನ್ನು ಹೇರಿದೆ ಮತ್ತು ಅದಕ್ಕೆ ಕೇಂದ್ರದ ನಾಯಕರ ಸ್ಪಂದನೆ ಯಾವ ರೀತಿ ಇದೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.
SSC ನೇಮಕಾತಿ 2019: ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿವೆ
'ಕೇಂದ್ರೀಯ ನೇಮಕಾತಿಯಲ್ಲಿ ಕನ್ನಡಿಗರು ಹಿಂದುಳಿಯುತ್ತಿರುವುದು ತೀವ್ರ ಕಳವಳ ಉಂಟುಮಾಡಿದೆ. ಎಲ್ಲಾ ಕೇಂದ್ರೀಯ ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲೇ ನಡೆಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರವು ಒತ್ತಡ ಹೇರುತ್ತಲೇ ಇದೆ. ಇದೇ ವೇಳೆ ಪರೀಕ್ಷಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ನಡೆಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಲು ಶ್ರಮಿಸಬೇಕು' ಎಂದು ಯಡಿಯೂರಪ್ಪ ಟ್ವಿಟ್ಟರ್ನಲ್ಲಿ ಸಲಹೆ ನೀಡಿದ್ದಾರೆ.
ಯಡಿಯೂರಪ್ಪ ಅವರ ಹೇಳಿಕೆಗೆ ವಿವಿಧ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಮುಖ್ಯಮಂತ್ರಿಗಳೇ, ಕನ್ನಡದಲ್ಲಿ ಪರೀಕ್ಷೆ ನಡೆಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ಏನು ಪ್ರಯತ್ನ ಮಾಡಿದೆ? ಎಷ್ಟು ಬಾರಿ ಸರ್ವ ಪಕ್ಷಗಳ ನಿಯೋಗವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ? ಈ ವಿಷಯದ ಮೇಲೆ ಹೆಚ್ಚು ಗಮನ ಹರಿಸುವಂತೆ ಮಂತ್ರಿಯಾದರೂ ನೇಮಕಗೊಂಡಿದ್ದಾರೆಯೇ?ಕನ್ನಡಿಗರು ಹೆಚ್ಚು ಶ್ರಮ ಪಡುವುದೆಂದರೆ ಹಿಂದಿ ಕಲಿಯಬೇಕೆಂಬುದೇ? ಎಂದು ಶ್ರುತಿ ಎಚ್.ಎಂ. ಎಂಬುವವರು ಪ್ರಶ್ನಿಸಿದ್ದಾರೆ.
HPCL ನೇಮಕಾತಿ 2019: 164 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆ
ಮಾನ್ಯರೇ, ಗೋಕಾಕ್/ಮಹಿಷಿ ಮಾದರಿಯ ಆಯೋಗಗಳನ್ನು ನಿರ್ಮಿಸಿ ಭಾಷೆ ಮತ್ತು ಪ್ರಾದೇಶಿಕತೆಯ ಹಿತ ಹೇಗೆ ಕಾಪಾಡಬಹುದು ಎಂದು ಆಮೂಲಾಗ್ರವಾಗಿ ವಿಚಾರಿಸುವ ಅವಶ್ಯಕತೆ ಇದೆ. ದಯವಿಟ್ಟು ಇತ್ತ ಗಮನಹರಿಸಿ. ನಿಶ್ಚಿತ ಸಮಯದಲ್ಲಿ ಜನರ ಸಲಹೆ ಸ್ವೀಕರಿಸಿ ಬದಲಾವಣೆ ಸೂಚಿಸಲಿ ಎಂದು ವಿಕಾಸ ಆಕಳವಾಡಿ ಸಲಹೆ ನೀಡಿದ್ದಾರೆ.
ಎಲ್ಲರೂ ಕಷ್ಟಪಟ್ಟು ಓದುತ್ತಾರೆ. ಆದರೆ ಬೇರೆ ರಾಜ್ಯದ ಜನಕ್ಕೆ ನಮ್ಮ ರಾಜ್ಯ ಅಂದರೇ ಅಷ್ಟು ಇಷ್ಟ ಅಂತ ಕಾಣಿಸುತ್ತದೆ. ಇಲ್ಲೇ ಅರ್ಜಿ ಹಾಕುತ್ತಾರೆ. ಅವರವರ ರಾಜ್ಯದಲ್ಲೇ ಅರ್ಜಿ ಹಾಕುವಹಾಗೆ ಮಾಡಬೇಕು ನೀವು. ನಮ್ಮ ರಾಜ್ಯದ ಕೆಲಸ ನಮ್ಮವರಿಗೇ ಸಿಗಬೇಕು ಹಾಗೇ ಮಾಡಿ. ಅವಾಗ ಕನ್ನಡಿಗರ ಮುಖ್ಯಮಂತ್ರಿ ನೀವಾಗಬಹುದು ಎಂದು ನಂದಿ ಎಂಬುವವರು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ 30ಹುದ್ದೆಗಳಿಗೆ ನೇಮಕಾತಿ
ಸರ್ವಪಕ್ಷಗಳ ನಿಯೋಗದೊಂದಿಗೆ ದೆಹಲಿ ಗೆ ಹೋಗಿ ಒತ್ತಡ ಹೇರಿದರೆ ಕನ್ನಡಕ್ಕೆ ಸಮ್ಮತಿ ನೀಡಬಹುದು.... ಮೋದಿ ಅವರು ಸರ್ವಪಕ್ಷಗಳ ನಿಯೋಗದ ಒತ್ತಡಕ್ಕೆ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ ಎಂದು ಮುರಳೀಧರ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಿಗರಿಗೆ ಉಚಿತ ತರಬೇತಿ ಸರಕಾರದ ಕಡೆಯಿಂದ ಕೊಡುವ ಪ್ರಯತ್ನ ಮಾಡಿ... ಕನ್ನಡಿಗರಿಗೆ ಮೀಸಲಾತಿ ಬಗ್ಗೆ ಯೋಚಿಸಿ ಎಂದು ಪವನ್ ಕುಮಾರ್ ಸಲಹೆ ನೀಡಿದ್ದಾರೆ.