ಯಡಿಯೂರಪ್ಪ ಸಂಪುಟ : ಬೆಂಗಳೂರು ನಗರಕ್ಕೆ 4 ಸಚಿವ ಸ್ಥಾನ
ಬೆಂಗಳೂರು, ಆಗಸ್ಟ್ 20 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಇಂದು ನಡೆಯಲಿದೆ. 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಬೆಂಗಳೂರು ನಗರಕ್ಕೆ 4 ಸಚಿವರ ಸ್ಥಾನ ಸಿಕ್ಕಿದೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಮಂಗಳವಾರ ಬೆಳಗ್ಗೆ 10.30ಕ್ಕೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ. ಬಿಜೆಪಿ ಹೈಕಮಾಂಡ್ ಸಚಿವರಾಗುವ ಶಾಸಕರ ಪಟ್ಟಿಯನ್ನು ಅಂತಿಮಗೊಳಿಸಿ ಯಡಿಯೂರಪ್ಪ ಅವರಿಗೆ ಕಳುಹಿಸಿಕೊಟ್ಟಿದೆ.
Live Updates : ಯಡಿಯೂರಪ್ಪ ಸಂಪುಟ ಸೇರುವವರ ಹೆಸರು ಫೈನಲ್
ಒಬ್ಬ ಮಹಿಳೆ, ಒಬ್ಬರು ಪಕ್ಷೇತರ ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 17 ಶಾಸಕರು ಯಡಿಯೂರಪ್ಪ ಸಂಪುಟಕ್ಕೆ ಸೇರುತ್ತಿದ್ದಾರೆ. ಇಬ್ಬರು ಮಾಜಿ ಉಪ ಮುಖ್ಯಮಂತ್ರಿ, ಒಬ್ಬರು ಮಾಜಿ ಮುಖ್ಯಮಂತ್ರಿಗಳು ಸಂಪುಟ ಸೇರುತ್ತಿರುವುದು ವಿಶೇಷವಾಗಿದೆ.
ಪಕ್ಷೇತರ ಶಾಸಕ ಎಚ್.ನಾಗೇಶ್ಗೆ ಮತ್ತೆ ಮಂತ್ರಿಗಿರಿ ಭಾಗ್ಯ!
ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳ ಪೈಕಿ 4 ಶಾಸಕರು ಯಡಿಯೂರಪ್ಪ ಸಂಪುಟವನ್ನು ಸೇರುತ್ತಿದ್ದಾರೆ. ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥ್ ನಾರಾಯಣ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.
ಆರ್. ಅಶೋಕ
ಪದ್ಮನಾಭನಗರ ಕ್ಷೇತ್ರದ ಶಾಸಕ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಯಡಿಯೂರಪ್ಪ ಸಂಪುಟ ಸೇರುತ್ತಿದ್ದಾರೆ. ಹಿಂದೆ ಸಾರಿಗೆ, ಗೃಹ ಸಚಿವರಾಗಿ ಆರ್. ಅಶೋಕ ಕಾರ್ಯ ನಿರ್ವಹಣೆ ಮಾಡಿದ್ದಾರೆ. 2018ರ ಚುನಾವಣೆಯಲ್ಲಿ ಅಶೋಕ 77,868 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಡಾ. ಅಶ್ವತ್ಥ್ ನಾರಾಯಣ
ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥ್ ನಾರಾಯಣ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. ಒಕ್ಕಲಿಗ ಸಮುದಾಯದಕ್ಕೆ ಸೇರಿದ ಅವರ ಹೆಸರು ಆಪರೇಷನ್ ಕಮಲದ ವಿಚಾರದಲ್ಲಿ ಮುಂಚೂಣಿಯಲ್ಲಿ ಕೇಳಿ ಬಂದಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು 83, 130 ಮತಗಳನ್ನು ಪಡೆದು ಜಯಳಿಸಿದ್ದಾರೆ.
ವಿ. ಸೋಮಣ್ಣ
ಗೋವಿಂದರಾಜನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣ ಯಡಿಯೂರಪ್ಪ ಸಂಪುಟ ಸೇರುತ್ತಿದ್ದಾರೆ. ಹಿಂದೆಯೂ ಕೂಡಾ ಅವರು ಸಚಿವರಾಗಿ ಕೆಲಸ ಮಾಡಿದ್ದಾರೆ. 2018ರ ಚುನಾವಣೆಯಲ್ಲಿ ಅವರು 79, 135 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಸುರೇಶ್ ಕುಮಾರ್
ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಯಡಿಯೂರಪ್ಪ ಸಂಪುಟ ಸೇರುತ್ತಿದ್ದಾರೆ. ಈ ಹಿಂದೆಯೂ ಬಿಜೆಪಿ ಸರ್ಕಾರದಲ್ಲಿ ಅವರು ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. 56, 271 ಮತಗಳನ್ನು ಪಡೆದು 2018ರ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.