ಎದುರಾಳಿ ಇಲ್ಲದೆ ಚೆಸ್ ಆಡೋದು ಹೇಗೆ? ಡಿಕೆಶಿಗೆ ಬಿಎಸ್ ವೈ ಪ್ರಶ್ನೆ
ಬೆಂಗಳೂರು, ಸೆಪ್ಟೆಂಬರ್ 19: "ಎದುರಾಳಿ ಇಲ್ಲದೆ ಚೆಸ್ ಆಡೊದು ಹೇಗೆ ಡಿಕೆ ಶಿವಕುಮಾರ್ ಅವರೇ? ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬೇಡಿ" ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು(ಸೆ.19) ನಡೆಯುತ್ತಿರುವ ಬಿಜೆಪಿ ವಿಶೇಷ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ : ಅಖಾಡಕ್ಕಿಳಿದ ಡಿಕೆಶಿ!
ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಜಾರಕಿಹೊಳಿ ಸಹೋದರರು ಬಂಡಾಯವೆದ್ದಿದ್ದು ಮತ್ತು ಆಪರೇಶನ್ ಕಮಲದ ಸಾಧ್ಯತೆಗಳ ಬಗ್ಗೆ ಗುಲ್ಲೆದಿದ್ದು ಕಾಂಗ್ರೆಸ್ಸಿಗರ ನಿದ್ದೆ ಕೆಡಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, 'ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ. ನಮಗೆ ಯಾವ ರೀತಿಯ ನಡೆ ಇಡಬೇಕು ಅನ್ನೋದು ಗೊತ್ತಿದೆ' ಎಂಬ ಹೇಳಿಕೆ ನೀಡಿದ್ದರು.
ಅವರ ಹೇಳಿಕೆಗೆ ಇಂದು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, 'ಎದುರಾಳಿಯೇ ಇಲ್ಲದೆ ಚೆಸ್ ಆಡುವುದಕ್ಕೆ ಬರುತ್ತದೆಯೇ? ಏನಾದರೂ ಹೇಳಿಕೆ ನೀಡುವ ಮೊದಲು ಸ್ವಲ್ಪ ಯೋಚಿಸಿ. ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬೇಡಿ' ಎಂದರು.
ಸೆಪ್ಟೆಂಬರ್ 19ರಂದು ಬಿಜೆಪಿ ಶಾಸಕಾಂಗ ಸಭೆ, ಮಹತ್ವದ ಚರ್ಚೆ
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಜೆಪಿ ವಿಶೇಷ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಬಹುತೇಕ ಶಾಸಕರು, ಸಂಸದರು ಭಾಗವಹಿಸಿದ್ದಾರೆ.