ಸಂಜೆ ಆರು ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ
Recommended Video
ಬೆಂಗಳೂರು, ಜುಲೈ 26: ಸರ್ಕಾರ ರಚಿಸುವುದಕ್ಕೆ ಬಿಜೆಪಿ ಹೈಕಮಾಂಡ್ನಿಂದ ಅನುಮತಿ ಪಡೆದಿರುವ ಬಿಎಸ್ ಯಡಿಯೂರಪ್ಪ ಅವರು ಇಂದೇ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಒಂದೇ ವಾರದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ಶುಕ್ರವಾರದ ಒಳಗೆ ಅವರು ವಿಶೇಷ ಅಧಿವೇಶನ ಕರೆದು ಬಹುಮತ ಸಾಬೀತುಪಡಿಸಬೇಕಾಗುತ್ತದೆ.
ಸಂಜೆ 6ರಿಂದ 6.15ರ ಒಳಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ಸರಳ ರೀತಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಅವರೊಂದಿಗೆ ಬೇರೆ ಯಾವ ಶಾಸಕರೂ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿಲ್ಲ. ಸದ್ಯಕ್ಕೆ ಯಡಿಯೂರಪ್ಪ ಅವರ ಪ್ರಮಾಣವಚನಕ್ಕೆ ಮಾತ್ರ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ನೀಡಿದೆ.
'ರಾಜ್ಯಪಾಲರನ್ನು ಭೇಟಿ ಮಾಡಿ ಸಂಜೆ 6 ರಿಂದ 6.15 ಒಳಗೆ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ಕೋರಿದ್ದೇನೆ. ಅದಕ್ಕೆ ರಾಜ್ಯಪಾಲರು ಸಹಮತ ವ್ಯಕ್ತಪಡಿಸಿ ಪತ್ರ ನೀಡಿದ್ದಾರೆ' ಎಂದು ಯಡಿಯೂರಪ್ಪ ರಾಜ್ಯಪಾಲರ ಭೇಟಿ ಬಳಿಕ ತಿಳಿಸಿದ್ದಾರೆ.
Breaking News ಇಂದೇ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ
ಮಂತ್ರಿಮಂಡಲಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಜತೆ ಚರ್ಚಿಸಿ ಕೇಂದ್ರದ ನಾಯಕರಿಂದ ಸೂಚನೆಗಳನ್ನು ಪಡೆದುಕೊಂಡ ಬಳಿಕವಷ್ಟೇ ಸಂಪುಟ ವಿಸ್ತರಣೆಗೆ ಅನುಮತಿ ಸಿಗಲಿದೆ. ಹೀಗಾಗಿ ಅವರು ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಆಹ್ವಾನ
'ಉಳಿದ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಪಕ್ಷದ ಎಲ್ಲ ಶಾಸಕರನ್ನು, ಎಂಎಲ್ಸಿಗಳನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರುವಂತೆ ಮನವಿ ಮಾಡುತ್ತೇನೆ. ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಆಗಮಿಸಿ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ.ಈ ಸಂಬಂಧ ಪತ್ರ ಬರೆಯಲಿದ್ದು, ದೂರವಾಣಿ ಮೂಲಕವೂ ಸಂಪರ್ಕ ಮಾಡುತ್ತೇನೆ' ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
3 ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಎಷ್ಟು ದಿನ ಆಡಳಿತ ನಡೆಸಿದ್ದರು?
ಕೇಂದ್ರ ನಾಯಕರ ಗೈರು
ಯಡಿಯೂರಪ್ಪ ಅವರು ತರಾತುರಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವುದರಿಂದ ಸಮಾರಂಭಕ್ಕೆ ಕೇಂದ್ರದ ಬಿಜೆಪಿ ನಾಯಕರು ಹಾಜರಾಗುತ್ತಿಲ್ಲ. ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ನಾಯಕರ ಗೈರಿನಲ್ಲಿ ಯಡಿಯೂರಪ್ಪ ಅವರು ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಯಡಿಯೂರಪ್ಪ ಕಥೆ ಗೋವಿಂದಾ, ಗೋವಿಂದಾ: ಡಿಕೆ ಶಿವಕುಮಾರ್
ಯಾರಿಗೆ ಮಂತ್ರಿಮಂಡಲದಲ್ಲಿ ಸ್ಥಾನ?
ಪಕ್ಷದಲ್ಲಿರುವ ಅರ್ಹ ನಾಯಕರಲ್ಲದೆ, ರಾಜೀನಾಮೆ ನೀಡಿರುವ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರನ್ನು ಸಚಿವರನ್ನಾಗಿ ಮಾಡುವ ಅನಿವಾರ್ಯತೆ ಬಿಜೆಪಿ ಮುಂದಿದೆ. ಹೀಗಾಗಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಪಕ್ಷವು ಸುದೀರ್ಘ ಚರ್ಚೆ ನಡೆಸಬೇಕಾದ ಅಗತ್ಯವಿದೆ. ಯಾವ ಶಾಸಕರಿಗೆ ಆದ್ಯತೆ ನೀಡಬೇಕು, ಎಷ್ಟು ಮಂದಿಯನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನಿಯೋಜಿಸಬೇಕು ಮತ್ತು ಯಾರಿಗೆ ಯಾವ ಖಾತೆ ಹಂಚಬೇಕು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳ ಹಂಚಿಕೆ ವಿಚಾರಗಳ ಕುರಿತು ಚರ್ಚೆ ನಡೆಸಬೇಕಿದೆ.
ರಾಜ್ಯ ನಾಯಕರಿಗೇ ಸಂಪೂರ್ಣ ಜವಾಬ್ದಾರಿ
ಯಡಿಯೂರಪ್ಪ ಅವರ ಪ್ರಮಾಣವಚನ ಸ್ವೀಕಾರಕ್ಕೆ ಹೈಕಮಾಂಡ್ ಅನುಮತಿ ನೀಡಿದ್ದರೂ, ಸರ್ಕಾರ ರಚನೆಯ ಸವಾಲುಗಳನ್ನು, ಸಂಕಟಗಳ ಹೊಣೆ ಹೊರುವ ಜವಾಬ್ದಾರಿಯನ್ನು ರಾಜ್ಯ ನಾಯಕರಿಗೇ ಬಿಟ್ಟಿದ್ದಾರೆ ಎನ್ನಲಾಗಿದೆ. ಪೂರ್ಣಪ್ರಮಾಣದ ಸರ್ಕಾರ ರಚನೆಗೆ ಕೇಂದ್ರ ನಾಯಕರು ಒಪ್ಪಿಗೆ ನೀಡಿಲ್ಲ. ಅತೃಪ್ತ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರಿಗೆ ಖಾತೆ ಹಂಚಿಕೆ ಮಾಡುವುದು, ಪಕ್ಷದ ಒಳಗೆ ಉದ್ಭವಿಸುವ ಗೊಂದಲ, ಅಸಮಾಧಾನಗಳನ್ನು ಬಗೆಹರಿಸುವ ಎಲ್ಲ ಹೊಣೆಗಾರಿಕೆಯೂ ನಿಮ್ಮದೇ ಎಂದು ಹೈಕಮಾಂಡ್ ನೀಡಿದೆ ಎನ್ನಲಾಗಿದೆ.
ಬಹುಮತ ಸಾಬೀತಿಗೆ ಸಂಖ್ಯಾಬಲವಿಲ್ಲ
ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಯಾಚನೆಗೆ ಕಾಲಾವಕಾಶ ಸಿಗುತ್ತದೆ. ರಾಜೀನಾಮೆ ಅಂಗೀಕಾರವಾದರೆ ವಿಧಾನಸಭೆಯ ಬಲಾಬಲ ಕಡಿಮೆ ಆಗುವುದರಿಂದ ಬಿಜೆಪಿ ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಾಗುತ್ತದೆ. ಈ ಶಾಸಕರನ್ನು ಅನರ್ಹಗೊಳಿಸಿದರೂ ಸಂಖ್ಯೆ ಇಳಿಕೆಯಾಗುವುದರಿಂದ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಅಷ್ಟು ತೊಂದರೆಯಾಗುವುದಿಲ್ಲ. 224 ಸದಸ್ಯರ ಬಲವಿದ್ದ ವಿಧಾನಸಭೆಯಲ್ಲಿ ಮೂವರು ಶಾಸಕರ ಅನರ್ಹತೆಯಿಂದ ಸಂಖ್ಯಾಬಲವು 221ಕ್ಕೆ ಇಳಿದಿದೆ. ಬಹುಮತ ಸಾಬೀತಿಗೆ 111 ಶಾಸಕರ ಬಲದ ಅಗತ್ಯವಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸಂಖ್ಯಾಬಲವಿಲ್ಲ. ಉಳಿದ ಶಾಸಕರ ರಾಜೀನಾಮೆ ಅಥವಾ ಅನರ್ಹತೆ ತೀರ್ಮಾನವಾದ ಬಳಿಕ ಇದರಲ್ಲಿ ಬದಲಾವಣೆಯಾಗಲಿದೆ.