Breaking News ಇಂದೇ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ
Recommended Video
ಬೆಂಗಳೂರು, ಜುಲೈ 26: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಇಂದೇ (ಶುಕ್ರವಾರ) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ತಯಾರಿ ನಡೆಸಿದ್ದಾರೆ.
ಯಡಿಯೂರಪ್ಪ ಅವರು ಬೆಳಿಗ್ಗೆ 10 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೋರಿದ್ದಾರೆ. ಬಳಿಕ ಅವರ ಮುಂದೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಸಂಜೆ 6 ಗಂಟೆಯ ಬಳಿಕ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
'ಇಂದು 10 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ಕೋರಿದ್ದೇನೆ. ಇಂದೇ ಪ್ರಮಾಣವಚನ ಸ್ವೀಕಾರಕ್ಕೆ ಅನುಮತಿ ಕೋರುತ್ತೇನೆ. ಸರ್ಕಾರ ರಚನೆಗೆ ಅವಕಾಶ ಕೋರಲಿದ್ದೇನೆ' ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಯಡಿಯೂರಪ್ಪ ಕಥೆ ಗೋವಿಂದಾ, ಗೋವಿಂದಾ: ಡಿಕೆ ಶಿವಕುಮಾರ್
'ನಾನು ವಿರೋಧಪಕ್ಷದ ನಾಯಕನಾಗಿರುವುದರಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲು ಮತ್ತೊಮ್ಮೆ ಶಾಸಕಾಂಗ ಪಕ್ಷದ ಸಭೆ ನಡೆಸುವ ಅವಶ್ಯಕತೆ ಇಲ್ಲ' ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರ ಭೇಟಿಗೂ ಮುನ್ನ ಧವಳಗಿರಿ ನಿವಾಸದಿಂದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ರಾಜಭವನಕ್ಕೆ ತೆರಳುತ್ತಿದ್ದಾರೆ.
ಈ ಮೂಲಕ ನಾಲ್ಕನೆಯ ಬಾರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಮಾಣವಚನ ಸ್ವೀಕಾರ ಮಾಡಲು ಯಡಿಯೂರಪ್ಪ ಅವರಿಗೆ ಹಸಿರು ನಿಶಾನೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಮಾಣ ವಚನಕ್ಕೆ ಹೊಸ ಮುಹೂರ್ತ
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಬಿಜೆಪಿ ಸರ್ಕಾರ ರಚನೆಗೆ ಯಡಿಯೂರಪ್ಪ ಅವರು ಸಿದ್ಧರಾಗಿದ್ದರು. ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಪ್ರಮಾಣ ವಚನ ಸ್ವೀಕಾರ ಮಾಡಲು ಜ್ಯೋತಿಷಿಗಳ ಬಳಿ ಮುಹೂರ್ತಗಳನ್ನೂ ಪಡೆದಿದ್ದರು. ಆದರೆ, ಕೇಂದ್ರದ ನಾಯಕರು ಸರ್ಕಾರ ರಚನೆಗೆ ಅವಸರ ಮಾಡದಂತೆ ಸೂಚನೆ ನೀಡಿತ್ತು. ಶುಕ್ರವಾರ ಕೂಡ ಎರಡು ಮುಹೂರ್ತಗಳನ್ನು ಪಡೆದಿದ್ದರು. ಆದರೆ, ಆ ಎರಡು ಮುಹೂರ್ತಗಳು ಮುಗಿದ ಬಳಿಕ ಮತ್ತೊಂದು ಮುಹೂರ್ತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲು ಮುಂದಾಗಿದ್ದಾರೆ.
ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲ ರಚನೆ ರಹಸ್ಯ ಬಯಲು
ದೆಹಲಿಗೆ ತೆರಳಿದ್ದ ನಿಯೋಗ
ಈ ಸಂಬಂಧ ಜಗದೀಶ್ ಶೆಟ್ಟರ್, ಮಾಧುಸ್ವಾಮಿ, ಅರವಿಂದ ಲಿಂಬಾವಳಿ ಮತ್ತು ಬಿವೈ ವಿಜಯೇಂದ್ರ ಅವರ ನಿಯೋಗವು ದೆಹಲಿಗೆ ಗುರುವಾರ ಪ್ರಯಾಣ ಬೆಳೆಸಿತ್ತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು. ಆದರೆ, ಗುರುವಾರದ ಸಭೆಯಲ್ಲಿ ಯಾವುದೇ ಫಲಿತಾಂಶ ಬಂದಿರಲಿಲ್ಲ. ಕೇಂದ್ರ ನಾಯಕರ ಒಪ್ಪಿಗೆಗೆ ಕಾದುಕುಳಿತಿದ್ದ ಯಡಿಯೂರಪ್ಪ ಅವರಿಗೆ ತೀವ್ರ ನಿರಾಶೆಯಾಗಿತ್ತು.
ಸರ್ಕಾರ ರಚನೆಗೆ ವಾತಾವರಣ
ಅಮಿತ್ ಶಾ ಅವರು ಶುಕ್ರವಾರ ಬೆಳಿಗ್ಗೆ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಪ್ರಮಾಣವಚನ ಸ್ವೀಕಾರ ಮಾಡಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಸಾಕಷ್ಟು ಚರ್ಚೆ ನಡೆಸಿದ ಬಳಿಕ ರಾಜ್ಯದಲ್ಲಿ ಸರ್ಕಾರ ರಚನೆಗೆ ಸೂಕ್ತ ವಾತಾವರಣ ನಿರ್ಮಾಣವಾಗಿದೆ ಎನ್ನುವುದು ಖಚಿತವಾದ ನಂತರ ಅಮಿತ್ ಶಾ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಅನರ್ಹರಾದ ಶಾಸಕರ ಸಂಬಂಧಿಕರನ್ನು ಉಪಚುನಾವಣೆಗೆ ನಿಲ್ಲಿಸಲು ಬಿಜೆಪಿ ತೀರ್ಮಾನಿಸಿದೆ. ಉಳಿದ ಶಾಸಕರ ವಿಚಾರದಲ್ಲಿ ಸ್ಪೀಕರ್ ಆದೇಶವನ್ನು ನೋಡಿ ಮುಂದಿನ ಹೆಜ್ಜೆ ಇರಿಸಲಿದೆ.
ಯಡಿಯೂರಪ್ಪ ಕುರ್ಚಿಯಲ್ಲಿ ಕೂತರೆ ಕಾಸು ಕಾಸು ಎನ್ನುತ್ತವೆ ಯೋಜನೆಗಳು
ಬದಲಾದ ಬಿಜೆಪಿ ನಿಲುವು
ರಾಜೀನಾಮೆ ನೀಡಿರುವ ಶಾಸಕರ ಕುರಿತು ಸ್ಪೀಕರ್ ಅವರು ನಿರ್ಧಾರ ತೆಗೆದುಕೊಳ್ಳುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಸ್ಪೀಕರ್ ಅವರು ಮೂವರು ಶಾಸಕರನ್ನು ಅನರ್ಹತೆಗೊಳಿಸಿ ಆದೇಶ ಹೊರಡಿಸಿದ್ದರು. ಆದರೆ, ಉಳಿದ 13 ಶಾಸಕರ ಕುರಿತು ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಈ ವಿಚಾರವಾಗಿ ಕಾದು ನೋಡುವ ತಂತ್ರ ಅನುಸರಿಸಲು ಉದ್ದೇಶಿಸಿದ್ದ ಬಿಜೆಪಿ, ಹಠಾತ್ ನಿಲುವು ಬದಲಿಸಿದ್ದು, ಅಚ್ಚರಿಗೆ ಕಾರಣವಾಗಿದೆ.
ಬಹುಮತ ಇದ್ದರೆ ಸರ್ಕಾರ ರಚಿಸಲಿ
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದಕ್ಕೆ ನನಗೆ ಬೇಸರವಿಲ್ಲ, ತಕರಾರಿಲ್ಲ. ನಮ್ಮನ್ನು ಅಧಿಕಾರದಿಂದ ಇಳಿಸಿದ್ದಾರೆ. ಬಹುಮತ ಇದ್ದು ಸರ್ಕಾರ ರಚಿಸುವುದಾದರೆ ರಚಿಸಲಿ. ಅವರದೇನು ಕಾರ್ಯತಂತ್ರ ಇದೆಯೋ ನೋಡೋಣ. ನನಗೆ ತಿಳಿದ ಮಟ್ಟಿಗೆ ಅವರೊಬ್ಬರೇ ಪ್ರಮಾಣ ವಚನ ಸ್ವೀಕಾರ ಮಾಡೊಲ್ಲ. 15 ಜನ ಶಾಸಕರನ್ನು ಕರೆದುಕೊಂಡು ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಅವರೆಲ್ಲ ತೃಪ್ತರು. ಅವರನ್ನು ಅತೃಪ್ತರು ಎಂದು ಕರೆಯಲು ನಾನು ತಯಾರಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.