ಎಂ.ಬಿ.ಪಾಟೀಲ್, ಕಾಂಗ್ರೆಸ್ ಸರ್ಕಾರದ ಅತಿ ಭ್ರಷ್ಟ ಸಚಿವ: ಬಿಎಸ್ವೈ
ಬೆಂಗಳೂರು, ಮಾರ್ಚ್ 22: ಕಾಂಗ್ರೆಸ್ ಸರ್ಕಾರದ ಅತಿ ಸಚಿವರುಗಳಲ್ಲೇ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅತಿ ದೊಡ್ಡ ಭ್ರಷ್ಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದೂರಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿರುವ 150 ಕೋಟಿ ಹಗರಣದ ದಾಖಲೆ ಬಿಡುಗಡೆ ಮಾತನಾಡಿದ ಅವರು, ಈ ಹಗರಣದಲ್ಲಿ ಎಂ.ಬಿ.ಪಾಟೀಲ್ 25 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳಿಗೂ ಪಾಲು ಸೇರಿದೆ ಎಂದು ಹೇಳಿದರು.
ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ರೂ.150 ಕೋಟಿ ಹಗರಣ: ಯಡಿಯೂರಪ್ಪ
''ನನ್ನ ಏಳಿಗೆಯನ್ನು ಸಹಿಸದೆ ವಿರೋಧ ಪಕ್ಷದವರು ನನ್ನ ಮೇಲೆ ಸಿಬಿಐ ದಾಳಿ ನಡೆಸಬಹುದು'' ಎಂದೆಲ್ಲಾ ಎಂ.ಬಿ.ಪಾಟೀಲ್ ಹೇಳಿಕೆ ನೀಡುತ್ತಿರುವುದು ಕೇವಲ ಸಿಂಪತಿಗೆ ಅಷ್ಟೆ. ಅವರ ಬಂಡವಾಳ ಬಯಲಾಗಿ ಅದರಿಂದ ಆಗುವ ಡ್ಯಾಮೆಜ್ ಅನ್ನು ರಿಕವರಿ ಮಾಡಿಕೊಳ್ಳಲು ಅವರು ಈಗಿನಿಂದಲೇ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ವಿಶ್ವೇಶ್ವರಯ್ಯ ಜಲ ನಿಗಮದ ಒಂದು ಟೆಂಡರ್ನಲ್ಲೇ ಇಷ್ಟೊಂದು ಹಗರಣ ಆಗಿದ್ದರೆ ಅದರ ಒಟ್ಟು ಬಜೆಟ್ 500 ಕೋಟಿ ಮೊತ್ತದಲ್ಲಿ ಎಷ್ಟು ಹಗರಣ ಆಗಿರಬಹುದು. ರಾಜ್ಯದ ಒಟ್ಟು ನೀರಾವರಿ ಬಜೆಟ್ ಆದ ಸಾವಿರಾರು ಕೋಟಿ ಹಣದಲ್ಲಿ ಎಷ್ಟು ಮೊತ್ತವನ್ನು ಎಂ.ಬಿ.ಪಾಟೀಲ್ ನುಂಗಿರಬಹುದು ಅಂದಾಜಿಸಿ ಎಂದು ಅವರು ಮಾಧ್ಯಮದವರನ್ನು ಚಿಂತಿಸಲು ಹಚ್ಚಿದರು.
ವಿಶ್ವೇಶ್ವರಯ್ಯ ಜಲ ನಿಗಮದ ಹೊಸದುರ್ಗ ನಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಜಲ ಸಂಪನ್ಮೂಲ ಸಚಿವರನ್ನು ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಮಂಪರು ಪರೀಕ್ಷೆಗೆ ಒಳ ಮಾಡಬೇಕು ಎಂದು ಒತ್ತಾಯಿಸಿದ ಅವರು ಎಂ.ಬಿ.ಪಾಟೀಲ್ ಮಾಡುವ ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೂ ಪಾಲು ಹೋಗುತ್ತದೆ ಎಂದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರ್ಕಾರ ಅಲ್ಲ ಅವರದ್ದು 30% ಸರ್ಕಾರ ಎಂಬುದು ಈ ಹಗರಣದಿಂದ ಸಾಬೀತಾಗಿದೆ ಎಂದ ಅವರು, ಇದೇ ಶನಿವಾರ (ಮಾರ್ಚ್ 24) ರಂದು ಇನ್ನು ದೊಡ್ಡ ಹಗರಣವನ್ನು ಬಯಲು ಮಾಡುತ್ತೇನೆ ಎಂದು ಸುಳಿವು ನೀಡಿದರು.