ನಿವೇಶನ ಹೆಸರಲ್ಲಿ ಮೋಸ ಮಾಡಿದ್ದ ಬೃಂದಾವನ್ ಪ್ರಾಪರ್ಟಿ ಎಂಡಿ ಸೆರೆ
ಬೆಂಗಳೂರು, ಆ. 02: ಕಡಿಮೆ ಬೆಲೆಗೆ ನಿವೇಶನ ಕೊಡುವ ಆಸೆ ಹುಟ್ಟಿಸಿ ಪೊಲೀಸರು ಸೇರಿದಂತೆ ಅನೇಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಬೃಂದಾವನ್ ಪ್ರಾಪರ್ಟಿ ದಿನೇಶ್ ಗೌಡನನ್ನು ಹಾಸನ ಜಿಲ್ಲೆಯ ಅರಕಲ ಗೂಡಿನಲ್ಲಿ ಬಂಧಿಸಲಾಗಿದೆ.
ತಾನು ಯಾರಿಗೂ ಐದು ಪೈಸೆ ಮೋಸ ಮಾಡಲ್ಲ. ನಾನು ಪರಾರಿಯಾಗಿರುವ ಬಗ್ಗೆ ಸುದ್ದಿಗಳು ಬಂದಿವೆ. ಕೊರೊನಾದಿಂದ ಸಂಕಷ್ಟಕ್ಕೆ ಈಡಾಗಿದ್ದೇನೆ ಎಂದು ಐಷಾರಾಮಿ ಕಾರಿನಲ್ಲಿ ಕೂತು ನಲವತ್ತು ಸೆಕೆಂಡಿನ ವಿಡಿಯೋ ಜತೆಗೆ ಪ್ರಕಟಣೆ ಬಿಡುಗಡೆ ಮಾಡಿದ್ದ. ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಬೃಂದಾವನ ಪ್ರಾಪರ್ಟಿ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಗೌಡ ಅರಕಲಗೂಡಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನ ಬಂಧನವನ್ನು ಉತ್ತರ ವಿಭಾಗದ ಡಿಸಿಪಿ ಖಚಿತ ಪಡಿಸಿದ್ದಾರೆ.
ಬೆಂಗಳೂರು: ಬೃಂದಾವನ್ ಪ್ರಾಪರ್ಟೀಸ್ ಹೂಡಿಕೆದಾರರಿಗೆ ಮಾಲೀಕರ ಹೊಸ ಭರವಸೆ
ಕಥೆ ಕಟ್ಟಿ ಎಸ್ಕೇಪ್ ಗೆ ಪ್ಲಾನ್: ಕೊರೊನಾ ಲಾಕ್ ಡೌನ್ ಎಲ್ಲಾ ಕ್ಷೇತ್ರದವರನ್ನೂ ಹೈರಾಣಾಗಿಸಿದೆ. ಅದರಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯೂ ಹೊರತಾಗಿಲ್ಲ. ಕಳೆದ ಎರಡು ವರ್ಷಗಳ ಆರ್ಥಿಕ ಹಿಂಜರಿತದಿಂದಾಗಿ ನಮ್ಮ ಮಾರುಕಟ್ಟೆ ಮತ್ತು ಹಣದ ಸರಪಳಿ ಹಳಿತಪ್ಪಿದೆ. ಈ ಹಳಿತಪ್ಪಿರುವ ಹಣದ ಮತ್ತು ಮಾರುಕಟ್ಟೆಯ ಸರಪಳಿ ಇನ್ನು ಕೆಲವೇ ದಿನಗಳಲ್ಲಿ ಸರಿಹೋಗಲಿದ್ದು, ಎಲ್ಲಾ ಹೂಡಿಕೆದಾರರಿಗೂ ಕೂಡಾ ನಾವು ಯಾವುದೇ ಅನ್ಯಾಯವಿಲ್ಲದ ರೀತಿಯಲ್ಲಿ ಸೈಟು ಅಥವಾ ಹಣವ ಹಿಂದಿರುಗಿಸಲಿದ್ದೇವೆ ಎಂದು ಬೃಂದಾವನ್ ಪ್ರಾಪರ್ಟೀಸ್ ಸಂಸ್ಥೆಯ ಮಾಲೀಕ ದಿನೇಶ್ ಗೌಡ ಸ್ಪಷ್ಟನೆ ನೀಡಿದ್ದ.
ಬೃಂದಾವನ್ ಪ್ರಾಪರ್ಟಿ ಮನವಿ: ಕರೋನಾ ಮಹಾಮಾರಿಯ ಹೊಡೆತಕ್ಕೆ ನಾವೆಲ್ಲಾ ಸಿಲುಕಿಕೊಂಡಿದ್ದೇವೆ. ಇದಕ್ಕೆ ನೀವು ಹೊರತಾಗಿಲ್ಲ. ನೀವು ಹೂಡಿಕೆ ಮಾಡಿರುವ ಹಣವನ್ನು ನಾನು ಹಿಂದೆ ನೀಡದೇ ಎಲ್ಲಿಯೂ ಹೋಗಲ್ಲ. ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದೇನೆ. ಹಲವರಿಗೆ ನಿವೇಶನ ನೋಂದಣಿ ಮಾಡಿಸಿದ್ದೇನೆ. ಸೈಟು ಬೇಡ ಎಂದವರಿಗೆ ಹಣ ವಾಪಸು ಕೊಟ್ಟಿದ್ದೇನೆ. ಭೂ ಪರಿವರ್ತನೆ ಹಾಗೂ ಕೊರೊನಾ ಲಾಕ್ ಡೌನ್ ನಿಂದ ಸಮಸ್ಯೆ ಆಗಿದೆ. ನೀವು ನೀಡಿರುವ ಹಣ ಭೂಮಿ ರೂಪದಲ್ಲಿ ಎಂದು ತಿಳಿಸಿದ್ದಾನೆ.
ಬೃಂದಾವನ್ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಿದವರಿಗೆ ಮಹಾ ಮೋಸ
ಬೀಸೋ ದೋಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ಲಾನ್:
ಬೃಂದಾವನ್ ಪ್ರಾಪರ್ಟಿ ಯದ್ದು ಕೇವಲ ಭೂ ಪರಿವರ್ತನೆ ಸಮಸ್ಯೆ ಆಗಿದ್ದಲ್ಲಿ ರಾಜಾಜಿನಗರದ ಕಚೇರಿಯನ್ನು ರಾತ್ರೋ ರಾತ್ರಿ ಖಾಲಿ ಮಾಡುವ ಅಗತ್ಯವಿಲ್ಲ. ಎಲ್ಲಾ ಗ್ರಾಹಕರಿಗೂ ತಿಳಿಸಿ ಸ್ಥಳಾಂತರ ಮಾಡಬಹುದಿತ್ತು. ಬೇರೆಲ್ಲೂ ಸ್ಥಳಾಂತರ ಮಾಡದೇ ಕಚೇರಿ ಖಾಲಿ ಮಾಡುವ ಉದ್ದೇಶ ಏನಿತ್ತು? ಇನ್ನು ಅನೇಕರಿಗೆ ಕೊಟ್ಟಿರುವ ನಿವೇಶನ ದಾಖಲೆಗಳು ಬೋಗಸ್ ಎಂಬುದು ಗೊತ್ತಾಗಿದೆ. ಜಮೀನೇ ಇಲ್ಲದಿದ್ದರೂ ಬೇರೆ ಯಾರಿಗೂ ಸೇರಿದ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಕೊಡುವ ಪ್ರಮೇಯ ಇರಲಿಲ್ಲ.
ಬೃಂದಾವನ್ ಪ್ರಾಪರ್ಟಿಯ ಮೇಲೆ ವಂಚನೆ ಆರೋಪ ಕೇಳಿ ಬರುತ್ತಿರುವುದು ಇತ್ತೀಚೆಗೆ ಮಾತ್ರವಲ್ಲ. 2019 ರಿಂದಲೂ ಬೃಂದಾವನ್ ಪ್ರಾಪರ್ಟಿ ಮೇಲೆ ವಂಚನೆ ದೂರುಗಳು ಕೇಳಿ ಬಂದಿದ್ದವು. ಆರಂಭದಲ್ಲಿ ರಾಜಾಜಿನಗರ ಪೊಲೀಸರೇ ದೂರು ಸ್ವೀಕರಿಸುತ್ತಿರಲಿಲ್ಲ. ಇದೀಗ ಸಾಮೂಹಿಕವಾಗಿ ಜನರು ಸೇರಿ ಪ್ರತಿಭಟನೆ ಮಾಡಿದ್ದರಿಂದ ಅಕ್ರಮದ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.
ಈ ಹಿಂದೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದರಿಂದ ಕೆಲವರು ಕೋರ್ಟ್ ಮೊರೆ ಹೋಗಿ ಖಾಸಗಿ ದೂರು ಸಲ್ಲಿಸಿದ್ದರು. ತನ್ನ ಬಳಿ ಎಷ್ಟು ಪ್ರಾಪರ್ಟಿಯಿದೆ, ಎಷ್ಟು ಮಂದಿಗೆ ನಿವೇಶನ ಕೊಡಬೇಕು. ಎಷ್ಟು ಎಕರೆಯನ್ನು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಲಾಗಿದೆ ಎಂಬುದರ ಬಗ್ಗೆ ಸಣ್ಣ ಮಾಹಿತಿ ಕೂಡ ದಿನೇಶ್ ಗೌಡ ಹಂಚಿಕೊಂಡಿಲ್ಲ. ಹೀಗಾಗಿ ತನಿಖೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ನಾಟಕ ಆಡಿದನೇ ಎಂಬ ಅನುಮಾನ ವ್ಯಕ್ತವಾಗಿದೆ.
ಆಸ್ತಿ ಜಪ್ತಿಗೆ ಸಿದ್ಧತೆ :
ಈವರೆಗೂ ಸುಮಾರು ಐದು ನೂರಕ್ಕೂ ಹೆಚ್ಚು ಮಂದಿ ಬೃಂದಾವನ್ ಪ್ರಾಪರ್ಟಿ ವಿರುದ್ಧ ದೂರು ನೀಡಿದ್ದಾರೆ. ದಿನೇಶ್ ಗೌಡನ ವಿರುದ್ಧ ದೂರು ನೀಡಿದರೆ ಆತ ಹಣ ವಾಪಸು ನೀಡಲ್ಲ ಎಂಬ ಕಾರಣಕ್ಕೆ ದೂರು ನೀಡದೇ ಹಿಂದೇಟು ಹಾಕಿದ್ದಾರೆ. ದಿನೇಶ್ ಗೌಡನ ವಂಚನೆ ಕುರಿತು ತನಿಖೆ ನಡೆಸಿ ಆತನ ಆಸ್ತಿಯನ್ನು ಸಂಪೂರ್ಣ ಜಪ್ತಿ ಮಾಡಿಕೊಂಡು ಹರಾಜು ಹಾಕಿ ಬರುವ ಹಣವನ್ನು ಮೋಸ ಹೋದವರಿಗೆ ನೀಡಲು ಪೊಲೀಸರು ಮುಂದಾಗಿದ್ದಾರೆ.
Recommended Video