ಕನ್ನಡಿಗರನ್ನು_ಕರೆತನ್ನಿ...ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್
ಬೆಂಗಳೂರು, ಮೇ 10: ಲಾಕ್ಡೌನ್ನಿಂದ ಕರ್ನಾಟಕದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲು ರಾಜ್ಯ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಆದರೆ ಹೊರರಾಜ್ಯಗಳಲ್ಲಿ ಸಿಲುಕಿಕೊಂಡು ರಾಜ್ಯ ಬರಲಾಗದೆ ಕನ್ನಡಿಗರನ್ನು ಮಾತ್ರ ಏಕೆ ಕರೆತರುವ ವ್ಯವಸ್ಥೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಸದ್ದು ಮಾಡುತ್ತಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಇಂದು ಟ್ವಿಟ್ಟರ್ನಲ್ಲಿ #bringbackkannadigas ಮತ್ತು #ಕನ್ನಡಿಗರನ್ನು_ಕರೆತನ್ನಿ ಎಂಬ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ಆಗಿದೆ.
ಅಬ್ಬಬ್ಬಾ,ಕರ್ನಾಟಕಕ್ಕೆ ಬರಲು 'ಇಷ್ಟೊಂದು' ಜನ ನೋಂದಣಿ ಮಾಡ್ಸಿದ್ದಾರಾ?
ವಿದೇಶಗಳಲ್ಲಿ ಸಿಲುಕಿಕೊಂಡಿರುವ ಶ್ರೀಮಂತರನ್ನು, ಎನ್ಆರ್ಐಗಳನ್ನು ಕರೆತರುಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗುತ್ತೆ. ಆದರೆ, ಜೀವನಕ್ಕೆ ಹಾಗೂ ಶಿಕ್ಷಣಕ್ಕಾಗಿ ಬೇರೆ ರಾಜ್ಯಕ್ಕೆ ಹೋಗಿದ್ದವರ ಬಗ್ಗೆ ಏಕೆ ಈ ನಿರ್ಲಕ್ಷ್ಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
|
56 ಸಾವಿರ ಜನರಿಂದ ಅರ್ಜಿ
ಹೊರ ರಾಜ್ಯಗಳಲ್ಲಿರುವ ಸುಮಾರು 56000ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ಮರಳಲು ಅರ್ಜಿ ಸಲ್ಲಿಸಿದ್ದಾರೆ. ಆದರೆ, 4000 ಜನಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಹಾಗಾದ್ರೆ, ಉಳಿದವರ ಕಥೆ ಏನು ಎಂದು ಜನಸಾಮನ್ಯರು ಕೇಳುತ್ತಿದ್ದಾರೆ.
ಗಡಿಯಲ್ಲಿ ಬಂದು ಕಾಯುತ್ತಿದ್ದಾರೆ
ಅನೇಕ ಸಂಖ್ಯೆಯಲ್ಲಿ ಕನ್ನಡಿಗರು ರಾಜ್ಯದ ಗಡಿ ಪ್ರದೇಶಗಳಲ್ಲಿ ಬಂದು ಕಾಯುತ್ತಿದ್ದಾರೆ. ಆದರೆ, ಗಡಿ ಭಾಗದ ಜಿಲ್ಲಾಡಳಿತಗಳು ಅವರ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಅವರನ್ನು ರಾಜ್ಯಕ್ಕೆ ಬರಲು ಅನುವು ಮಾಡಿಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಆಗ್ರಹ
''ಬೇರೆ ರಾಜ್ಯಗಳಲ್ಲಿ ಸಾವಿರಾರು ಕನ್ನಡಿಗರು ರಾಜ್ಯಕ್ಕೆ ಬರಲು ಕಾಯುತ್ತಿದ್ದಾರೆ. ಅವರಿಗೆ ಬರಲು ಪ್ರಯಾಣಕ್ಕೆ ವ್ಯವಸ್ಥೆ ಮಾಡುವ ಜೊತೆಯಲ್ಲಿ ಈಗಾಗಲೇ ಬಂದು ಗಡಿಗಳಲ್ಲಿ ಕಾಯುತ್ತಿರುವವರನ್ನು ಸತಾಯಿಸದೆ ಒಳಗೆ ಬರಮಾಡಿಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಡಿಕೆ ಶಿವಕುಮಾರ್ ಮನವಿ
''ನಮ್ಮ ಕನ್ನಡದ ಅಣ್ಣ ತಮ್ಮಂದಿರು ಬೇರೆ ರಾಜ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸಾವಿರಾರು ಜನರು ಅಲ್ಲಿಂದ ವಾಪಸ್ ಬರಲು ಅರ್ಜಿ ಹಾಕಿದ್ದಾರೆ. ಯಾವ ಅಧಿಕಾರಿಗಳು ಕೂಡ ಅವರನ್ನು ಕರೆತರಲು ಆಸಕ್ತಿ ತೋರಿಲ್ಲ. ಅವರನ್ನು ತಾಯಿ ನಾಡಿಗೆ ಕರೆದುಕೊಂಡು ಬರಬೇಕು ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ'' ಎಂದಿದ್ದರು.