ಮದುವೆ ಮಂಟಪದಿಂದ ಪ್ರಿಯಕರನೊಂದಿಗೆ ವಧು ಪರಾರಿ!
ಬೆಂಗಳೂರು, ಫೆ. 23 : ಮದುವೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಲ್ಯಾಣ ಮಂಟಪವನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿಯೇ ನಡೆದಿತ್ತು. ಆದರೆ ಬೆಳಗ್ಗೆ ಮುಹೂರ್ತದ ವೇಳೆಗೆ ಕಲ್ಯಾಣ ಮಂಟಪದಿಂದ ವಧುವೇ ಪರಾರಿಯಾಗಿದ್ದಳು!
ಹೌದು... ಬೆಂಗಳೂರಿನ ಸುಂಕದಕಟ್ಟೆಯ ಕಲ್ಯಾಣ ಮಂಟಪದಿಂದ ವಧು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ತನ್ನ ತಾಯಿಗೆ ದೂರವಾಣಿ ಕರೆ ಮಾಡಿ ನಾನು ಪ್ರಿಯಕರನೊಂದಿಗೆ ಮದುವೆಯಾಗಲು ತೆರಳುತ್ತಿದ್ದೇನೆ. ನನ್ನ ಹುಡುಕುವ ಯತ್ನ ಮಾಡಬೇಡಿ ಎಂದು ತಿಳಿಸಿದ್ದಾಳೆ.[ಮದರಂಗಿ ಶಾಸ್ತ್ರ ಮುಗಿಸಿ ಪ್ರಿಯಕರನ ಜೊತೆ ವಧು ಪರಾರಿ!]
ಲಗ್ಗೆರೆ ಯುವತಿಗೆ ಆಕೆಯ ಸಂಬಂಧಿಕರ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಭಾನುವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮಗಳು ನಡೆದಿದ್ದವು. ಸೋಮವಾರ ಬೆಳಗ್ಗೆ ಮದುವೆ ನಡೆಯುವುದಿತ್ತು.
ಆದರೆ ಆರತಕ್ಷತೆ ಮುಗಿಸಿದ ವಧು ನನಗೆ ಹೊಟ್ಟೆಯಲ್ಲಿ ಏನೋ ಸಮಸ್ಯೆಯಾಗುತ್ತಿದೆ ಎಂದು ಹೇಳಿ ಶೌಚಾಲಯಕ್ಕೆ ತೆರಳಿದವಳು ನಾಪತ್ತೆಯಾಗಿದ್ದಾಳೆ. ತೊಟ್ಟಿದ್ದ ಆಭರಣಗಳನ್ನು ಬಿಚ್ಚಿಟ್ಟು ಪರಾರಿಯಾಗಿದ್ದಾಳೆ.[ಮದುವೆ ಮಂಟಪದಿಂದ ಸಾಫ್ಟ್ ವೇರ್ ವರ ಎಸ್ಕೇಪ್!]
ವಧು ಪರಾರಿಯಾದ ನಂತರ ಕಲ್ಯಾಣ ಮಂಟಪದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವರನಿಗೆ ಇದೇ ಮುಹೂರ್ತದಲ್ಲಿ ಬೇರೊಂದು ಹುಡುಗಿಯ ಜತೆ ಮದುವೆ ಮಾಡಲು ಯತ್ನಿಸಿದರೂ ಹುಡುಗಿಯ ವಯಸ್ಸು ಜಾಸ್ತಿ ಎಂಬ ಕಾರಣಕ್ಕೆ ಕೈಗೂಡಿಲ್ಲ.
ಕುಣಿಗಲ್ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವತಿ ಲಗ್ಗೆರೆಯ ತನ್ನ ಪ್ರಿಯಕರ ರಘು ಎಂಬುವರ ಜತೆ ಪರಾರಿಯಾಗಿದ್ದಾಳೆ. ಮಗಳನ್ನು ಹುಡುಕಿಕೊಡಿ ಎಂದು ವಧುವಿನ ಪಾಲಕರು ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.